ಧಾರವಾಡ: ಸೆ. 12ರಂದು ಬಸವ ಸಂಸ್ಕೃತಿ ಅಭಿಯಾನ ನಡೆಯಲಿದ್ದು, ಬೆಳಗಾವಿಯಿಂದ ಆಗಮಿಸುವ ಬಸವ ರಥಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಲು ಬಸವಾಭಿಮಾನಿಗಳು ಸನ್ನದ್ಧರಾಗಲು ಮುರಘಾಮಠದ ಶ್ರೀ ಡಾ. ಮಲ್ಲಿಕಾರ್ಜುನ ಸ್ವಾಮಿಜಿ ಕರೆ ನೀಡಿದರು.
ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಇಳಕಲ್ಲ ಸೀರೆ ಧರಿಸಿ ತಲೆ ಮೇಲೆ ವಚನ ಕಟ್ಟು ಹೊತ್ತುಕೊಂಡು ಮಾರ್ಗದುದ್ದಕ್ಕೂ ವಚನ ಪಠಣ ಮಾಡುತ್ತಾ ಸಾಗಲಿದ್ದಾರೆ. ಮಕ್ಕಳಿಂದ ಶರಣರ ವೇಷಭೂಷಣ, ಕಲಾ ತಂಡಗಳು, ಕುದುರೆ ಮೇಲೆ ಶರಣರ ವೇಷಭೂಷಣ, ಯುವಜನರಿಂದ ವಚನ ನೃತ್ಯ, ಭಜನಾ ತಂಡದಿಂದ ವಚನ ಸಂಗೀತ, ವಿವಿಧ ತರಹದ ದೇಶಿ ವಾದ್ಯಮೇಳಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದರು.
ಕುಂಬಳಗೋಡು ಮಠದ ಶ್ರೀ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಅಂದು ಸಂಜೆ 6ಕ್ಕೆ ಮುರಘಾಮಠದಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದ್ದು, ನಾಡಿನ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ. ಆನಂತರ 8ಕ್ಕೆ ಜಂಗಮದೆಡೆಗೆ ನಾಟಕ ಪ್ರದರ್ಶನ ನಡೆಯಲಿದ್ದು, ಈ ಎಲ್ಲ ಕಾರ್ಯಕ್ರಮದಲ್ಲಿ ಸರ್ವ ಜನಾಂಗದವರು ಭಾಗವಹಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿ.ವಿ. ಕೊಂಗವಾಡ, ನಾಗರಾಜ ಪಟ್ಟಣಶೆಟ್ಟಿ, ಸಿದ್ದರಾಮ ನಡಕಟ್ಟಿ, ಬಸವಂತ ತೋಟದ, ಶಿವಾನಂದ ಶೆಟ್ಟೆಣ್ಣವರ, ಡಾ. ವೀಣಾ ಬಿರಾದಾರ, ರಾಜೇಶ್ವರಿ ಕಟ್ಟಿಮನಿ, ಲತಾ ಮಂಟಾ, ಸವಿತಾ ನಡಕಟ್ಟಿ ಇದ್ದರು.