ಯಲಬುರ್ಗಾ: ಭಕ್ತರಲ್ಲಿ ಶಿವಪೂಜೆ, ಧಾರ್ಮಿಕತೆ ಬೆಳೆಸುವಲ್ಲಿ ಇಲ್ಲಿಯ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿಗಳು ಶ್ರಮಿಸಿದ್ದಾರೆ ಎಂದು ಚಿಕ್ಕಮ್ಯಾಗೇರಿ-ಇಟಗಿ ಹಿರೇಮಠದ ಡಾ. ಗುರುಶಾಂತವೀರ ಸ್ವಾಮೀಜಿ ಹೇಳಿದರು.ಪಟ್ಟಣದ ಶ್ರೀ ಮೊಗ್ಗಿಬಸವೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಪತಿ ಬಸಲಿಂಗೇಶ್ವರ ಸ್ವಾಮೀಜಿಗಳ ೨೨ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹಿಂದಿನ ಲಿಂಗೈಕ್ಯ ಹಿರಿಯ ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ಬಸವಲಿಂಗೇಶ್ವರ ಸ್ವಾಮೀಜಿಗಳು ನಡೆದಿದ್ದಾರೆ. ಶ್ರೀಮಠದಲ್ಲಿ ಸಂಗೀತ, ಸಾಹಿತ್ಯ, ಶಿಕ್ಷಣ, ದಾಸೋಹ, ಗೋಶಾಲೆ ಸೇರಿದಂತೆ ಎಲ್ಲ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದು, ಶ್ರೀಮಠವನ್ನು ಶ್ರೀಮಂತಗೊಳಿಸಿದ್ದಾರೆ. ಸದಾ ಕೃಷಿ ಮತ್ತು ಪ್ರಾಣಿಪ್ರಿಯರಾಗಿ ಕಾಯಕಯೋಗಿಯಾಗಿರುವ ಬಸಲಿಂಗೇಶ್ವರ ಸ್ವಾಮೀಜಿಗಳು ಭಕ್ತರಲ್ಲಿ ಸದಾ ಧಾರ್ಮಿಕತೆ, ಶಿವಪೂಜೆ, ಯೋಗಭ್ಯಾಸದಲ್ಲಿ ಕ್ರಿಯಾಶೀಲತೆ ಬೆಳೆಸುತ್ತಿದ್ದಾರೆ. ತಮ್ಮ ಕಾಯಕ ವೃತ್ತಿ ಜತೆಗೆ ಕೃಷಿ, ಪ್ರಾಣಿಪ್ರಿಯರಾಗಿ, ಮಹಾಯೋಗಿಯಾಗಿದ್ದಾರೆ ಎಂದು ಹೇಳಿದರು.
ಶ್ರೀಧರ ಮುರಡಿ ಹಿರೇಮಠದ ಪೀಠಾಧಿಪತಿ ಬಸಲಿಂಗೇಶ್ವರ ಸ್ವಾಮೀಜಿ ಅವರಿಗೆ ಯಲಬುರ್ಗಾ ಮಾಜಿ ಸೈನಿಕರರು ಹಾಗೂ ತೊಂಡಿಹಾಳ ಕಳಕನಗೌಡ ಕೆಂಚನಗೌಡ್ರ ಕುಟುಂಬದವರು ತುಲಾಭಾರ ನೆರವೇರಿಸಿದರು.
ಮಾಜಿ ಸೈನಿಕರಾದ ಗವಿಸಿದ್ದಪ್ಪ ಬನ್ನಿಗೋಳ, ಸುಖಮುನಿ ತೋಟದ, ಪುಂಡಪ್ಪ ಅಡವಳ್ಳಿ, ಶರಣಪ್ಪ ತುಪ್ಪದ, ಶ್ರೀಶೈಲ ಹಿರೇಮಠ, ಶಂಕರಗೌಡ ಓಜನಹಳ್ಳಿ, ಗೋವಿಂದಪ್ಪ ಸಂಗನಾಳ, ನಿವೃತ್ತ ಮುಖ್ಯಶಿಕ್ಷಕ ಮಲ್ಲಿಕಾರ್ಜುನಗೌಡ ಪೊಲೀಸ್ಪಾಟೀಲ, ರಾಮಣ್ಣ ನಾಯಕ, ಯಲ್ಲಪ್ಪ ಕುರಿ, ಮಠದ ಭಕ್ತರಾದ ವೀರಣ್ಣ ಹುಬ್ಬಳ್ಳಿ ಮತ್ತಿತರರು ಇದ್ದರು. ಮಂಗಳೇಶ ಶ್ಯಾಗೋಟಿ, ಶರಣಕುಮಾರ ಬಂಡಿ ಸಂಗೀತ ಸೇವೆ ನೀಡಿದರು. ಶಿಕ್ಷಕಿ ಸವಿತಾ ಓಜನಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಬಸವರಾಜ ಕೊಂಡಗುರಿ ಸ್ವಾಗತಿಸಿದರು.