ಕಲಘಟಗಿ: ಬಸವಣ್ಣನವರು 12ನೇ ಶತಮಾನದಲ್ಲಿಯೇ ಸಮಾನತೆಯ ವಿಚಾರ ಕ್ರಾಂತಿ ಮಾಡಿದ ಮಹಾನ್ ಚಿಂತಕರಾಗಿದ್ದು, ಅವರು ಜಗತ್ತು ಕಂಡ ವಿಸ್ಮಯ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಸಿ. ಸೋಮಶೇಖರ ಹೇಳಿದರು.
ಬಸವಣ್ಣನವರು ಹಾಗೂ ಶಿವಶರಣರ ವಚನ ತತ್ವಗಳು ಪ್ರಪಂಚದ ಯಾವುದೇ ದಾರ್ಶನಿಕರ ಚಿಂತನೆ ಮತ್ತು ವಿಚಾರಶಕ್ತಿಗೆ ಕಡಿಮೆಯಿಲ್ಲ. ಕಾಯಕದ ಮಹತ್ವವನ್ನು ಸಾರಿದ ಶರಣರ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು. ಕಲಘಟಗಿ ತಾಲೂಕು ಶರಣರು ನಡೆದ ನಾಡಾಗಿದ್ದು, ಇಂತಹ ಸ್ಥಳಕ್ಕೆ ಬಂದು ಮಾತನಾಡುವುದು ಮನಸ್ಸಿಗೆ ಸಂತಸ ನೀಡುತ್ತದೆ ಎಂದರು.
ಜನಪದ ತಜ್ಞ ಡಾ. ರಾಮು ಮೂಲಗಿ ಮಾತನಾಡಿ, ಡಾ. ಸಿ. ಸೋಮಶೇಖರ ಅವರು ಧಾರವಾಡದಲ್ಲಿದ್ದಾಗ ಜನಾನುರಾಗಿ ಅಧಿಕಾರಿಯಾಗಿ ಹೆಸರು ಪಡೆದಿದ್ದರು. ಅವರು ಜಿಲ್ಲೆಗೆ ಸಲ್ಲಿಸಿದ ಸೇವೆ ಚಿರಕಾಲ ಸ್ಮರಣೀಯ ಎಂದರು.ಜಿಲ್ಲಾಧ್ಯಕ್ಷ ಪ್ರೊ. ಸಂಗಮನಾಥ ಲೋಕಾಪುರ ಮಾತನಾಡಿ, ಶರಣ ಸಾಹಿತ್ಯ ಪರಿಷತ್ತು ಈ ಅವಧಿಯಲ್ಲಿ ರಾಜ್ಯ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ತನ್ನ ಕಾರ್ಯತತ್ಪರತೆ ತೋರಿಸಿದೆ. ಯಾವುದೇ ಜವಾಬ್ದಾರಿ ವಹಿಸಿದರೂ ದಣಿವರಿಯದೆ ಶರಣ ಸಾಹಿತ್ಯದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.