ಕನ್ನಡಪ್ರಭ ವಾರ್ತೆ ದಾವಣಗೆರೆ ಮಾತಿನ ಮಹತ್ವವನ್ನು, ಕಾಯಕದ ಮಹತ್ವವನ್ನು ಇಡೀ ಜಗತ್ತಿಗೆ ಸಾರಿದಂತ ಮಹಾನ್ ವ್ಯಕ್ತಿ ಶ್ರೀ ಜಗಜ್ಯೋತಿ ಬಸವೇಶ್ವರರು. ಅವರ ತತ್ವಗಳನ್ನು, ಮೌಲ್ಯಗಳನ್ನು ಅನುಸರಿಸಿದರೆ ಅಷ್ಟೇ ಸಾಕು, ಸಮಸಮಾಜ ನಿರ್ಮಾಣ ಸಾಧ್ಯ ಎಂದು ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಹೇಳಿದರು.
ಬಸವಣ್ಣ ಮತ್ತು ತಮ್ಮ ಶರಣ ಸಮೂಹದ ವಚನಗಳ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದುವ ಕಾರ್ಯವನ್ನು ಮಾಡಿದರು. ಹೀಗಾಗಿ, ಅವರ ವಚನಗಳನ್ನು ಪಚನ ಮಾಡಿಕೊಳ್ಳಬೇಕು. ಆಗ ನಿಮ್ಮ ತನುವ ಸಂತೈಸಿಕೊಳ್ಳಿ, ಮನವ ಸಂತೈಸಿಕೊಳ್ಳಿ ಎಂಬ ಮಾತು ಸಾರ್ಥಕಗೊಳ್ಳುತ್ತದೆ ಎಂದರು.
ಧಾರವಾಡದ ಕರ್ನಾಟಕ ವಿ.ವಿ. ಡಾ.ನಿಂಗಪ್ಪ ಮುದೇನೂರು ಬಸವೇಶ್ವರರನ್ನು ಕುರಿತು ವಿಶೇಷ ಉಪನ್ಯಾಸ ನೀಡಿ, ಬಸವಣ್ಣನವರು ನಡೆಸಿದ ಈ ಕಾರ್ಯ ಹೋರಾಟವಾಗಿತ್ತು. ಚಳವಳಿಯಾಗಿತ್ತು. ಸಾಮಾಜಿಕ ಸಮಾನತೆ ಸಂದರ್ಭ ಜನಜೀವನವನ್ನು ಉನ್ನತಗೊಳಿಸುವ ಕೈಂಕರ್ಯಕ್ಕೆ ತೊಡಗಿಕೊಂಡರು. ತಾವಷ್ಟೇ ಅಲ್ಲ ತಮ್ಮ ಜೊತೆಗೆ ಅನೇಕ ತಳ ಸಮುದಾಯಗಳ ಅನಕ್ಷರಸ್ಥರನ್ನು ಸೇರಿಸಿಕೊಂಡು ಹೋರಾಟ ನಡೆಸಿದ್ದು ಸ್ತುತ್ಯರ್ಹ. ಅದಕ್ಕೆ ಅವರನ್ನು ಕರ್ನಾಟಕದ ಮಾರ್ಟಿನ್ ಲೂಥರ್ ಎಂದು ಕರೆಯುತ್ತಾರೆ ಎಂದು ಹೇಳಿದರು.ಕುಲಸಚಿವ ಪ್ರೊ. ಯು.ಎಸ್. ಮಹಾಬಲೇಶ್ವರ್, ಪ್ರೊ. ಸಿ.ಕೆ. ರಮೇಶ್, ಹಣಕಾಸು ಅಧಿಕಾರಿ ದ್ಯಾಮನಗೌಡ ಮುದ್ದನಗೌಡರ ಹಾಜರಿದ್ದರು. ಘಟಕದ ಸಂಚಾಲಕ ಡಾ. ಪಿ.ನಾಗಭೂಷಣ ಗೌಡ ಸ್ವಾಗತಿಸಿದರು. ಡಾ.ಭೀಮಾ ಶಂಕರ್ ಜೋಶಿ ನಿರೂಪಿಸಿದರು. ಬೋಧಕ ಬೋಧಕೇತರ ಸಿಬ್ಬಂದಿ ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- - - -15ಕೆಡಿವಿಜಿ31ಃ:
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಬಸವ ಜಯಂತಿ ಕಾರ್ಯಕ್ರಮ ನಡೆಯಿತು.