ಸಮಾಜದಲ್ಲಿದ್ದ ಜಾತಿಯತೆ, ಲಿಂಗ ತಾರತಮ್ಯ, ಮೌಢ್ಯ, ಕಂದಾಚಾರಗಳ ಬಗ್ಗೆ ಧ್ವನಿ ಎತ್ತಿದ ಮಹಾಮಾನವತಾವಾದಿ ಬಸವಣ್ಣ ಮಹಾಪುರುಷರಾಗಿದ್ದಾರೆ ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಸಮಾಜದಲ್ಲಿದ್ದ ಜಾತಿಯತೆ, ಲಿಂಗ ತಾರತಮ್ಯ, ಮೌಢ್ಯ, ಕಂದಾಚಾರಗಳ ಬಗ್ಗೆ ಧ್ವನಿ ಎತ್ತಿದ ಮಹಾಮಾನವತಾವಾದಿ ಬಸವಣ್ಣ ಮಹಾಪುರುಷರಾಗಿದ್ದಾರೆ ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ ತಿಳಿಸಿದರು. ನಗರದ ನೇತಾಜಿ ಯೋಗ ಶಿಕ್ಷಣ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಂಚಮವರ್ಣದ ಚೌಡಯ್ಯನ ಮಗನಾದ ಕೇತನಿಗೆ ವಿಧಿಸಿದ್ದ ಘೋರ ಶಿಕ್ಷೆಯಿಂದ ಪಾರಾಗಲು ಕಾರಣಿಭೂತವಾಗಿದ್ದು ಕಾರುಣ್ಯ ಶಿಶು ಬಸವೇಶ್ವರರ ಜನನ. ಹೀಗೆ ಆತ ಜನಿಸಿದ ದಿನವೆ ಅಂದು ಸಮಾಜದಲ್ಲಿ ಹಾಸುಹೊಕ್ಕಾಗಿದ್ದ ಜಾತಿಯ ತಾರತಮ್ಯ ಹೋಗಲಾಡಿಸಲು ಪ್ರಯತ್ನಿಸಿದ್ದು, ಕಾಕತಾಳಿಯವೆ ಸರಿ. ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯ ವಿರೋಧಿಸಿ ಇವನಾರವ ಎನ್ನದೆ ಇವನ ನಮ್ಮವ ಎನ್ನುವ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಬಸವಣ್ಣನವರು ಕಾಯಕ, ದಾಸೋಹದ ಮಹತ್ವ ತಿಳಿಸುತ್ತಾ ಸೋಮಾರಿಗಳಾಗದೆ ದುಡಿದು ತಿನ್ನುವ ಪ್ರವೃತ್ತಿ ಬೆಳೆಸಿಕೊಳ್ಳಿ ಎಂದು ಕರೆ ನೀಡಿದ್ದರು. ಆಧ್ಯಾತ್ಮ ಸಂಸತ್ತಾದ ಅನುಭವ ಮಂಟಪ ಸ್ಥಾಪಿಸುವ ಮೂಲಕ ಸಮಾಜದ ಎಲ್ಲರೂ ಸೇರಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಚಿಂತನ ಮಂಥನಕ್ಕೆ ಅವಕಾಶ ಕಲ್ಪಿಸಿದರು. ಜನರಾಡುವ ಭಾಷೆಯಾದ ಕನ್ನಡದಲ್ಲಿ ವಚನ ರಚಿಸಿ, ಇತರರಿಗೂ ರಚಿಸಲು ಪ್ರೇರಣೆ ನೀಡಿದರು. ಹಾಗಾಗಿ ಕನ್ನಡ ಭಾಷೆಯಲ್ಲಿ ಹೊಸ ಸಾಹಿತ್ಯ ಪ್ರಕಾರ ಹುಟ್ಟುಹಾಕುವುರ ಮೂಲಕ ಅದರ ಬೆಳವಣಿಗೆಗೆ ಕಾರಣರಾದರು ಎಂದು ಹೇಳಿದರು.
ಸ್ವಾಸ್ಥ್ಯ ಹಾಗೂ ಸುಖಿ ಸಾಮ್ರಾಜ್ಯದ ಪರಿಕಲ್ಪನೆಯೊಂದಿಗೆ ಕಲ್ಯಾಣ ರಾಜ್ಯ ಕಟ್ಟಿ ಬೆಳೆಸಿದರು. ಇಂತಹ ಮಹಾಪುರುಷನ ಆದರ್ಶ ಎತ್ತಿ ಹಿಡಿಯಲು ಇಂಗ್ಲೆಂಡಿನ ಪಾರ್ಲಿಮೆಂಟಿನ ಮುಂದೆ ಇತ್ತೀಚೆಗೆ ದುಬೈನಲ್ಲೂ ಬಸವಣ್ಣನ ಪ್ರತಿಮೆ ಅನಾವರಣವಾಗಿದೆ. ಭಾರತದ ಹೊಸ ಸಂಸತ್ತು ಭವದಲ್ಲೂ ಅವರ ವಚನಗಳು ಅನಾವರಣವಾಗಿವೆ ಎಂದರು. ಕೆ.ಎಂ. ರಾಜಣ್ಣ ಮಾತನಾಡಿ, ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಗುರಿತಿಸಿದೆ. ಆದರೆ ಇವರು ವಿಶ್ವ ನಾಯಕರಾಗುವ ಎಲ್ಲಾ ಲಕ್ಷಣಗಳಿವೆ ಎಂದರು. ಡಾ. ಪ್ರಕಾಶ್, ಯೋಗ ಶಿಕ್ಷಕಿ ಸುಜಾತ, ಖಜಾಂಚಿ ನೇತ್ರ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.