ಕನ್ನಡಪ್ರಭ ವಾರ್ತೆ ತುಮಕೂರುರಕ್ತವನ್ನಾದರೂ ಕೊಟ್ಟು ಹೇಮಾವತಿ ನೀರನ್ನು ಉಳಿಸಿಕೊಳ್ಳುತ್ತೇವೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು.ಗುಬ್ಬಿ ತಾಲೂಕಿನ ರಾಂಪುರದ ಬಳಿ ಎಕ್ಸ್ ಪ್ರೆಸ್ ಪೈಪ್ ಲೈನ್ ಕೆನಾಲ್ ಕಾಮಗಾರಿ ವೀಕ್ಷಿಸಿ ಮಾತನಾಡಿದರು. ತುಮಕೂರು ಜಿಲ್ಲೆಗೆ ಹಂಚಿಕೆಯಾಗಿರುವ 24.5 ಟಿಎಂಸಿ ನೀರಿನಲ್ಲಿ ಒಂದು ತೊಟ್ಟು ಹನಿ ನೀರನ್ನು ಕೂಡ ರಾಮನಗರ ಜಿಲ್ಲೆಗೆ ನೀರು ಹರಿಸಲು ಬಿಡುವುದಿಲ್ಲ. ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಧಮ್, ತಾಕತ್ತಿದ್ದರೆ ತುಮಕೂರು ಜಿಲ್ಲೆಯ ನೀರನ್ನು ಮುಟ್ಟಿ ನೋಡಲಿ ಎಂದು ಸವಾಲ್ ಹಾಕಿದರು.
ಬೆಳಗುಂಬ ಪ್ರಭಾಕರ್ ಮಾತನಾಡಿ, ತುಮಕೂರು ಜಿಲ್ಲೆಗೆ ಹಂಚಿಕೆಯಾಗಿರುವ ಹೇಮಾವತಿ ನೀರನ್ನು ಎಕ್ಸ್ ಪ್ರೆಸ್ ಪೈಪ್ ಲೈನ್ ಕೆನಾಲ್ ಮೂಲಕ ನೀರನ್ನು ತೆಗೆದು ಕೊಂಡು ಹೋಗಲು ಒಂದು ಅಡಿ ಜಾಗವನ್ನು ಕೂಡ ಆಗಿಯಲು ಬಿಡುವುದಿಲ್ಲ. ಈ ಯೋಜನೆ ಜಾರಿಯಾದರೆ ಗುಬ್ಬಿ, ತುರುವೇಕೆರೆ, ಸಂಪಿಗೆ, ನಿಟ್ಟೂರು, ತುಮಕೂರು ನಗರ, ತುಮಕೂರು ಗ್ರಾಮಾಂತರ, ಮಧುಗಿರಿ, ಶಿರಾ, ಕೊರಟಗೆರೆ ಭಾಗಕ್ಕೆ ಒಂದಿಂಚು ನೀರು ಕೂಡ ಹರಿಯುವುದಿಲ್ಲ ಎಂದರು.
ಪೈಪ್ ಲೈನ್ ನಡೆಯುತ್ತಿರುವ ಜಾಗವು ತಗ್ಗು ಪ್ರದೇಶದಲ್ಲಿದ್ದು, ಅದು ಅಲ್ಲದೆ ಪೈಪ್ ಲೈನ್ನನ್ನು 20 ಅಡಿ ಆಳದಲ್ಲಿ ಅಳವಡಿಸುವುದರಿಂದ (ಗ್ರಾವಿಟಿ) ಗುರುತ್ವಾಕಾರ್ಷಣೆ ಆ ಭಾಗಕ್ಕೆ ಹೆಚ್ಚಾಗಿರುವುದರಿಂದ ಮೇಲ್ಭಾಗದ 100 ಕಿ.ಮೀ ವ್ಯಾಪ್ತಿಗೆ ಒಂದಿಂಚು ನೀರು ಕೂಡ ಹರಿಯಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.ಈ ಯೋಜನೆಯನ್ನು ಪಕ್ಷಾತೀತವಾಗಿ ವಿರೋಧಿಸಬೇಕು. ಜಿಲ್ಲೆಯ ಜೀವನಾಡಿಯಾಗಿರುವ ಹೇಮಾವತಿ ನೀರನ್ನು ಬಿಟ್ಟರೆ ನಮ್ಮ ಗುಂಡಿಯನ್ನು ನಾವೇ ತೋಡಿಕೊಂಡಂತಾಗುತ್ತದೆ. ಜಿಲ್ಲೆಯ ಜನರ ಬದುಕು ಅಸನಾಗಬೇಕು. ಮುಂದಿನ ಪೀಳಿಗೆಗೆ ಒಂದು ಹನಿ ನೀರು ಸಿಗುವುದಿಲ್ಲ. ಆದ್ದರಿಂದ ಈ ಯೋಜನೆಯನ್ನು ಸಮರ್ಪಕವಾಗಿ ವಿರೋಧಿಸುವಂತಾಗಬೇಕು. ಮಾಜಿ ಸಚಿವ ಸೊಗಡು ಶಿವಣ್ಣ ಅವರ ನೇತೃತ್ವದಲ್ಲಿ ಮೇ 16 ರಂದು ಕರೆ ಕೊಟ್ಟಿರುವ ಪ್ರತಿಭಟನೆಗೆ ಸಹಸ್ರಾರು ಮಂದಿ ಭಾಗವಹಿಸಿ, ಈ ಯೋಜನೆಯನ್ನು ವಿರೋಧಿಸಬೇಕು ಎಂದು ಮನವಿ ಮಾಡಿದರು.