ಕನ್ನಡಪ್ರಭ ವಾರ್ತೆ ಶಿವಮೊಗ್ಗ
12ನೇ ಶತಮಾನದ ಬಸವಣ್ಣನವರ ವಚನಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿದ್ದು, ಸಮಾಜದಲ್ಲಿನ ಅಸಮಾನತೆ, ಅಂಕುಡೊಂಕು ತಿದ್ದುವಂತಿದ್ದವು ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಹೇಳಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರಿ ಕಚೇರಿಗಳಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ಭಾವಚಿತ್ರವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಬಸವಣ್ಣನವರು ಜಾತಿ, ಧರ್ಮ, ಲಿಂಗಬೇಧವಿಲ್ಲದೇ ಸಮಾನತೆ, ಪ್ರಜಾಪ್ರಭುತ್ವ ಕಲ್ಪನೆಯನ್ನು ಕಟ್ಟಿದವರು. ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ ಕೇವಲ ಸರ್ಕಾರಿ ಕಾರ್ಯಕ್ರಮವಾಗಿ ಸೀಮಿತವಾಗದೆ. ಅವರ ತತ್ವ- ಆದರ್ಶಗಳನ್ನು ನಾವೆಲ್ಲ ಪಾಲನೆ ಮಾಡಬೇಕು ಎಂದರು.ರಾಜ್ಯ ಸರ್ಕಾರವು ಸರ್ಕಾರಿ ಕಚೇರಿಗಳಲಿ ಇಂತಹ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅಳವಡಿಸುವಂತೆ ಆದೇಶಿಸಲಾಗಿದೆ. ಬಸವಣ್ಣವರ ಭಾವಚಿತ್ರವನ್ನು ಕಚೇರಿಗಳಲ್ಲಿ ಹಾಕಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗದೇ ಅಧಿಕಾರಿಗಳು, ಸಾರ್ವಜನಿಕರು ಅವರ ವಚನಗಳಲ್ಲಿನ ಸಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಎಎಸ್ಪಿ ಅನಿಲ್ಕುಮಾರ್ ಭೂಮರಡ್ಡಿ ಮಾತನಾಡಿ, ಕಾಯಕ ಶ್ರದ್ಧೆ, ಕರ್ತವ್ಯ ನಿಷ್ಠೆಯನ್ನು ನಾವು ಬಸವಣ್ಣನವರಿಂದ ಕಲಿಯಬೇಕಾಗಿದೆ. ಏಕೆಂದರೆ ಬಸವಣ್ಣನವರು ಬಿಜ್ಜಳ ರಾಜನ ಆಸ್ಥಾನದಲ್ಲಿ ಪ್ರಧಾನಿಗಳಾಗಿ ಸೇವೆಯನ್ನು ಸಲ್ಲಿಸುತ್ತಾ ತಮ್ಮ ಕರ್ತವ್ಯದೊಂದಿಗೆ ಎಲ್ಲ ಸಮುದಾಯದ ವಚನಕಾರರನ್ನು ಒಂದು ವೇದಿಕೆಗೆ ಕರೆತಂದರು. ಪ್ರಪಂಚದ ಮೊಟ್ಟಮೊದಲ ಸಂಸತ್ ಅನುಭವ ಮಂಟಪವನ್ನು ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.ಬಸವಣ್ಣರ ತತ್ವಗಳು ಇಡೀ ವಿಶ್ವದಲ್ಲಿ ಪ್ರಚಾರ ಆಗಿದೆ. ನಾವು ಬೇರೆ ದೇಶಗಳ ಕ್ರಾಂತಿಯ ಕುರಿತು ಮಾತನಾಡುತ್ತೇವೆ ಅದರೆ, 12ನೇ ಶತಮಾನದಲ್ಲಿ ಅವರು ಮಾಡಿದ ಸಾಮಾಜಿಕ ಕ್ರಾಂತಿ ಎಲ್ಲ ಕ್ರಾಂತಿಗಳಿಂತ ಹೆಚ್ಚು ಪರಿಣಾಮಕಾರಿ ಆಗಿದೆ. ಆದ್ದರಿಂದ ಬಸವಣ್ಣನವರ ವಚನಗಳನ್ನು ನಮ್ಮ ಜೀವನಕ್ಕೆ ದಾರಿದೀಪವಾಗಿ ಸ್ವೀಕರಿಸಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮ್ತತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಜಿಲ್ಲಾ ವೀರಶೈವ ಸಮಾಜದ ರುದ್ರಮುನಿ, ಮಹಾರುದ್ರಪ್ಪ, ಮಲ್ಲಿಕಾರ್ಜನ್, ಪ್ರಕಾಶ್ ಮತ್ತಿತರರು ಇದ್ದರು.- - - ಕೋಟ್ ವಿಶ್ವಗುರು ಬಸವಣ್ಣನವರ ತತ್ವ ಆದರ್ಶಗಳು ಜಗತ್ತಿನಲ್ಲಿ ಪ್ರಸಾರವಾಗಬೇಕಿದೆ. ಇದಕ್ಕಾಗಿ ನಾವುಗಳು ಅವರ ಜೀವನದ ತತ್ವ, ಮೌಲ್ಯಗಳ ಕುರಿತು ಜನರಲ್ಲಿ ಅರಿವು ಮೂಡಿಸಬೇಕಾಗಿದೆ
- ಗುರುದತ್ ಹೆಗಡೆ, ಜಿಲ್ಲಾಧಿಕಾರಿ- - - -17ಎಸ್ಎಂಜಿಕೆಪಿ01:
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರಿ ಕಚೇರಿಗಳಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಶ್ರೀ ಬಸವೇಶ್ವರ ಭಾವಚಿತ್ರವನ್ನು ಅನಾವರಣಗೊಳಿಸಿದರು.