ಕನ್ನಡಪ್ರಭವಾರ್ತೆ ಬೆಳಗಾವಿ
ಜಾಗತಿಕ ಲಿಂಗಾಯತ ಮಹಾಸಭೆಯ ವತಿಯಿಂದ ನಾಗನೂರು ರುದ್ರಾಕ್ಷಿ ಮಠದ ಪ್ರಭುದೇವ ಸಭಾಗೃಹ ದಲ್ಲಿ ಸೋಮವಾರ ಹಮ್ಮಿಕೊಂಡ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರು ನೀಡಿದ ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡ ಯಾವುದೇ ರಾಷ್ಟ್ರ ಎಂದೂ ಬಡವಾಗುವುದಿಲ್ಲ. ಬದಲಿಗೆ ಅದು ಸದಾ ಸಂಪದ್ಭರಿತವಾಗುತ್ತದೆ. ನಾನು ಎಂಬ ಅಹಂ ಭಾವ ಅಳಿದರೆ ಸಮಾಜದಲ್ಲಿ ಸಂಘರ್ಷ ಕಡಿಮೆಯಾಗುತ್ತದೆ ಎಂದರು.ಪ್ರವಚನ ನೀಡಿದ ಕುಲವಳ್ಳಿ ಸುಕುಮಾರ ಯೋಗಾಶ್ರಮದ ಮಲ್ಲಿಕಾರ್ಜುನ ದೇವರು ಮಾತನಾಡಿ, ದೇಶದಲ್ಲಿ ಕೋಟ್ಯಾಂತರ ದೇವಾಲಯಗಳು, ಲಕ್ಷಾಂತರ ಧಾರ್ಮಿಕ ಮುಖಂಡರಿದ್ದರೂ ಸಮಾಜದಲ್ಲಿ ಕೊಲೆ, ಅನ್ಯಾಯ, ಅನಾಚಾರ ನಿಂತಿಲ್ಲ. ತಲೆಯಲ್ಲಿ ಹೊಟ್ಟಾದರೆ ಶಾಂಪೂ ಬಳಸಿ ಸ್ವಚ್ಚಗೊಳಿಸಬಹುದು. ಬಟ್ಟೆ ಹೊಲಸಾದರೆ ಮಡಿವಾಳರಿಗೆ ನೀಡಬಹುದು. ಆದರೆ ಮನಸ್ಸಿನ ಮೈಲಿಗೆಯನ್ನು ತೊಳೆಯಬೇಕಾದರೆ ಶರಣರ ಮಹಾತ್ಮರ ವಾಣಿಯನ್ನು ಆಲಿಸುತ್ತಾ ಅವುಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಗಡಹಿಂಗ್ಲಜ ಜಡೆಸಿದ್ದೇಶ್ವರ ಬಿಲ್ವಾಶ್ರಮದ ಮಹಾಂತ ಸಿದ್ದೇಶ್ವರ ಸ್ವಾಮೀಜಿ, ಎತ್ತುಗಳನ್ನು ಪೂಜಿಸುವುದು ಬಸವ ಜಯಂತಿಯಲ್ಲ. ಬದಲಿಗೆ ಬಿದ್ದವರನ್ನು ಎತ್ತುವುದು ಬಸವ ಜಯಂತಿ ಎಂದರು. ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅನುಶರಣ ಸಮೂಹ ಸಂಸ್ಥೆಗಳ ಕಾರ್ಯಾಧ್ಯಕ್ಷೆ ಅನ್ನಪೂರ್ಣ ಅಗಡಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.ಡಾ.ರೋಹಿಣಿ ಕರ್ಜಗಿಮಠ ಹಾಗೂ ನಯನಾ ಗಿರಿಗೌಡರ ಪ್ರಾರ್ಥಿಸಿದರು. ಜಾಗತಿಕ ಲಿಂಗಾಯತ ಮಹಾಸಭೆಯ ನಗರ ಘಟಕದ ಕಾರ್ಯದರ್ಶಿ ಸಿ.ಎಂ. ಬೂದಿಹಾಳ ಸ್ವಾಗತಿಸಿದರು. ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕರಾದ ಎ.ಕೆ.ಪಾಟೀಲ, ಮಂಜುನಾಥ ಶರಣಪ್ಪನವರ ನಿರೂಪಿಸಿದರು. ರತ್ನಾ ಬೆಣಚಿನಮರಡಿ ವಂದಿಸಿದರು.