ವಿಶ್ವಕ್ಕೆ ಸಮಾನತೆ ಸಂದೇಶ ಸಾರಿದ್ದ ಬಸವಣ್ಣ

KannadaprabhaNewsNetwork | Published : May 25, 2025 1:31 AM
ಹೊಳಲ್ಕೆರೆ: ಮೇಲು-ಕೀಳು, ಬಡವ-ಬಲ್ಲಿದ, ಸ್ತ್ರೀ-ಪುರುಷ ಎನ್ನುವ ಅಸಮಾನತೆಯಿಲ್ಲದ ಹನ್ನೆರಡನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ಆಚಾರ, ವಿಚಾರ ಯಾವುದೇ ಒಂದು ಜನಾಂಗಕ್ಕೆ ಸೀಮಿತವಲ್ಲ. ಇಡಿ ಮನುಕುಲಕ್ಕೆ ಸಮಾತನೆಯ ಸಂದೇಶ ಸಾರಿದ ಹರಿಕಾರ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಮಹದೇವ ಬಿದರಿ ಹೇಳಿದರು.
Follow Us

ಹೊಳಲ್ಕೆರೆ: ಮೇಲು-ಕೀಳು, ಬಡವ-ಬಲ್ಲಿದ, ಸ್ತ್ರೀ-ಪುರುಷ ಎನ್ನುವ ಅಸಮಾನತೆಯಿಲ್ಲದ ಹನ್ನೆರಡನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ಆಚಾರ, ವಿಚಾರ ಯಾವುದೇ ಒಂದು ಜನಾಂಗಕ್ಕೆ ಸೀಮಿತವಲ್ಲ. ಇಡಿ ಮನುಕುಲಕ್ಕೆ ಸಮಾತನೆಯ ಸಂದೇಶ ಸಾರಿದ ಹರಿಕಾರ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಮಹದೇವ ಬಿದರಿ ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಹೊಳಲ್ಕೆರೆ ತಾಲೂಕು ಘಟಕ, ವೀರಶೈವ ಲಿಂಗಾಯಿತ ಸಮಾಜ, ವೀರಶೈವ ಲಿಂಗಾಯಿತ ನೌಕರರ ಸಂಘದ ಸಹಯೋಗದೊಂದಿಗೆ ಪಟ್ಟಣದ ಸಂವಿಧಾನ ಸೌಧದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ವೀರಶೈವ ಲಿಂಗಾಯಿತರು ಪರಸ್ಪರ ದ್ವೇಷ, ಅಸೂಯೆ, ಭಿನ್ನಾಭಿಪ್ರಾಯಗಳನ್ನು ಬಿಟ್ಟು ಒಂದಾಗಿ ಸೇರಿರುವುದು ನನಗಂತೂ ಅತ್ಯಂತ ಸಂತೋಷವಾಗಿದೆ. ಹೊಳಲ್ಕೆರೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಬಸವಣ್ಣನವರ ಜಯಂತಿ ಆಚರಿಸಿ ಕೇವಲ ಕರ್ನಾಟಕ ರಾಜ್ಯಕ್ಕಷ್ಟೇ ಅಲ್ಲ, ಇಡಿ ದೇಶಕ್ಕೆ ಮಾದರಿಯಾಗಿದ್ದೀರ. ಎಲ್ಲಾ ಕಡೆ ಇದೆ ಮನೋಭಾವ ಮೂಡಿದಾಗ ವೀರಶೈವರು ನೆಮ್ಮದಿಯಿಂದ ತಲೆ ಎತ್ತಿ ಜೀವನ ಮಾಡಬಹುದು ಎಂದರು.

ಬಡವ-ಬಲ್ಲಿದ, ಕಪ್ಪು-ಬಿಳುಪು ಎನ್ನುವ ವರ್ಣಭೇದ ಸರಿಯಲ್ಲ. ಸ್ತ್ರೀ-ಪುರಷರು ಸಮಾನರು ಎನ್ನುವ ಸಂದೇಶವನ್ನು ಇಡಿ ವಿಶ್ವಕ್ಕೆ ಕೊಟ್ಟವರು ಬಸವಣ್ಣ. ಅದಕ್ಕಾಗಿ ಎಲ್ಲಿಯೂ ಅಸ್ಪೃಶ್ಯತೆಯನ್ನು ಆಚರಿಸಬಾರದು. ಕರ್ನಾಟಕವನ್ನು ಅಸ್ಪೃಶ್ಯತೆಯಿಂದ ಮುಕ್ತಗೊಳಿಸಿದಾಗ ಮಾತ್ರ ಬಸವಣ್ಣನವರಿಗೆ ನಿಜವಾಗಿಯೂ ಗೌರವ ನೀಡಿದಂತಾಗುತ್ತದೆ ಎಂದರು.

ಹೊಳಲ್ಕೆರೆ ತಾಲೂಕಿನಲ್ಲಿ ಅಪ್ಪಿತಪ್ಪಿಯೂ ಒಂದೇ ಒಂದು ಅಸ್ಪೃಶ್ಯತೆ ಪ್ರಕರಣವಾಗಬಾರದು. ಪುರುಷರಂತೆ ಮಹಿಳೆಯರನ್ನು ಗೌರವದಿಂದ ಕಾಣಬೇಕು. ಎಲ್ಲಿಯೂ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರಗಳು ನಡೆಯಬಾರದು ಎಂದು ಹೇಳಿದರು.

ಬಸವಣ್ಣನವರು ಹೇಳಿರುವಂತೆ ಕಾಯಕವೇ ಕೈಲಾಸ ಎನ್ನುವ ತತ್ವದಡಿಯಲ್ಲಿ ಜೀವಿಸುತ್ತಿರುವ ವೀರಶೈವ ಲಿಂಗಾಯಿತರು ಪ್ರಾಮಾಣಿಕ, ಪರಿಶುದ್ಧವಾದ ಕಾಯಕವನ್ನು ನಂಬಿರುವವರು. ರಾಜ್ಯದ ಎಲ್ಲಾ ತಾಲೂಕುಗಳಲ್ಲಿಯೂ ವೀರಶೈವ ಲಿಂಗಾಯಿತರು ಸಣ್ಣಪುಟ್ಟ ಅಸೂಯೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಒಗ್ಗಟ್ಟಾಗಿರಬೇಕು. ಆಗ ಮಾತ್ರ ಬಸವಣ್ಣನವರ ತತ್ವಗಳಿಗೆ ನಿಜವಾದ ಅರ್ಥ ಸಿಗುತ್ತದೆ ಎಂದರು.

ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ರಾಜ್ಯದಲ್ಲಿ ಇತಿಹಾಸ ಸೃಷ್ಟಿಸಿರುವ ಬಹುದೊಡ್ಡ ಸಮಾಜ ಯಾವುದಾದರೂ ಇದ್ದರೆ ಅದು ವೀರಶೈವ ಲಿಂಗಾಯಿತರು. ನನ್ನ ಕ್ಷೇತ್ರದಲ್ಲಿ ವೀರಶೈವ ಲಿಂಗಾಯಿತರು ಬೇರೆ ಜನಾಂಗದವರೊಟ್ಟಿಗೆ ಒಂದೇ ತಾಯಿ ಮಕ್ಕಳಂತೆ ಅನ್ಯೋನ್ಯತೆಯಿಂದ ಬದುಕುತ್ತಿದ್ದಾರೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಕೈಲಾದಷ್ಟು ಸಹಾಯ ಮಾಡುವ ವೀರಶೈವ ಜನಾಂಗ ಎಂತಹುದೇ ಸಂದರ್ಭದಲ್ಲಿಯೂ ನನ್ನನ್ನು ಕೈಬಿಟ್ಟಿಲ್ಲ. ನಾನು ಕೂಡ ಕಡೆಯ ಉಸಿರಿರುವತನಕ ನಿರ್ವಂಚನೆಯಿಂದ ನಿಮ್ಮಗಳ ಸೇವೆ ಮಾಡುತ್ತೇನೆಂದು ಭರವಸೆ ನೀಡಿದರು.

ಬಸವಣ್ಣನವರು ಕೇವಲ ವೀರಶೈವ ಲಿಂಗಾಯಿತರಿಗಷ್ಟೆ ಅಲ್ಲ. ಇಡಿ ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿ ವಿಶ್ವ ಮಾನವರೆನಿಸಿಕೊಂಡಿದ್ದಾರೆ. ಕಾಯಕಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದ ಜಗಜ್ಯೋತಿ ಬಸವೇಶ್ವರರು ಹನ್ನೆರಡನೆ ಶತಮಾನದಲ್ಲಿಯೇ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನತೆ ನೀಡಿದವರು. ಅಂತಹ ಕ್ರಾಂತಿಕಾರಿ ಪುರುಷನ ಪರಿಕಲ್ಪನೆ ಮೇಲೆ ಇಂದಿನ ಪಾರ್ಲಿಮೆಂಟ್ ನಿಂತಿದೆ. ವಿಶ್ವದಲ್ಲಿಯೇ ಬಸವಣ್ಣನವರ ಅನುಯಾಯಿಗಳಿದ್ದಾರೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಮಾಧುರಿ ಗಿರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ರೇಣುಕಾ ಪ್ರಸನ್ನ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ಪಿ.ರಮೇಶ್, ಪುರಸಭೆ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷೆ ನಾಗರತ್ನ ವೇದಮೂರ್ತಿ, ವೀಣ ಕಾಶಪ್ಪನವರ್, ಹನುಮಲಿ ಷಣ್ಮುಖಪ್ಪ, ಶಶಿಕಲಾ ಮೂರ್ತಿ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಮಹಸಭಾದ ತಾಲೂಕು ಅಧ್ಯಕ್ಷ ಪ್ರಭಾಕರ್ ಮಾಳಿಗೆ, ಹನುಮಂತಪ್ಪ, ಎ.ಕೆ.ರುದ್ರಪ್ಪ, ಜಿ.ಬಿ.ಶೇಖರ್, ಕೆ.ಎಂ.ಶಿವಕುಮಾರ್, ಪಿ.ಎಸ್.ಮೂರ್ತಿ, ಪಿ.ಆರ್.ಶಿವಕುಮಾರ್, ಗಂಗಾಧರ್ ವೇದಿಕೆಯಲ್ಲಿದ್ದರು.

ಕಾರ್ಯಕ್ರಮಕ್ಕೂಮುನ್ನ ವಿವಿಧ ಜಾನಪದ ಕಲಾತಂಡಗಳೊಂದಿಗೆ ಅಲಂಕೃತ ವಾಹನದಲ್ಲಿ ಬಸವಣ್ಣನವರ ಬೃಹತ್ ಭಾವಚಿತ್ರದ ಮೆರವಣಿಗೆ ನಡೆಯಿತು.