ರಾಸುಗಳ ಸವಾಲು । 8 ಜೋಡಿ ಸಾಮೂಹಿಕ ವಿವಾಹ । ಭಕ್ತಾಧಿಗಳಿಗೆ ತರವೇಹಾರಿ ಊಟ
ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಗುರುವಾರ ಶ್ರೀ ಗುಡ್ಡದ ಬಸವೇಶ್ವರ ರಥೋತ್ಸವ ಜರುಗಿತು.
ಕಳೆದೊಂದು ತಿಂಗಳಿಂದ ಜಾತ್ರೆಯ ಸಿದ್ದತೆ ಕೈಗೊಂಡಿದ್ದ ಗ್ರಾಮಸ್ಥರು ಒಗ್ಗಟ್ಟಾಗಿ ಜಾತ್ರೆಯ ಯಶಸ್ಸಿಗೆ ಕೈಜೋಡಿಸಿದರು. ಪ್ರತಿಯೊಂದು ಕೆಲಸಗಳನ್ನು ತಂಡಗಳನ್ನಾಗಿ ಹಂಚಿಕೊಂಡು ಯಾವುದೇ ಕುಂದು- ಕೊರತೆಯಾಗದಂತೆ ನೋಡಿಕೊಂಡರು. 8 ಜೋಡಿಗಳ ಸಾಮೂಹಿಕ ವಿವಾಹ ಜರುಗಿದವು. ನವ ಜೋಡಿಗಳಿಗೆ ಅಭಿನವ ಗವಿಶ್ರೀ ಗೆಳೆಯರ ಬಳಗದಿಂದ ಕಾಲುಂಗರ ಕೊಡಿಸಲಾಯಿತು. ಗ್ರಾಮದ ಶಾಲೆಯ 2004-05ನೇ ಸಾಲಿನ ವಿದ್ಯಾರ್ಥಿಗಳು ಈ ಬಾರಿ ಜಾತ್ರೆಗೆ 200 ಊಟದ ತಾಟುಗಳನ್ನು ದೇಣಿಗೆಯಾಗಿ ನೀಡಿದರು. ಜಾತ್ರೆಯ ಅಂಗವಾಗಿ ಸಿಡ್ಸ್ ಕಂಪನಿಯ ಮಹಾಂತೇಶ ಪಾಟೀಲ್ ಎಂಬುವರು ಜೋಡಿ ರಾಸುಗಳು ಖರೀದಿಗೆ ₹1.50 ಲಕ್ಷ ದೇಣಿಗೆ ನೀಡಿದರು. ಈ ರಾಸುಗಳ ಸವಾಲು ನಡೆಯಿತು.ತರವೇಹಾರಿ ಊಟ:
ಶ್ರೀ ಗುಡ್ಡದ ಬಸವೇಶ್ವರ ದೇವಸ್ಥಾನವು ಗ್ರಾಮದ ಹೊರವಲಯದ ಗುಡ್ಡದಲ್ಲಿದೆ. ಈ ದೇವಸ್ಥಾನದಲ್ಲಿ ಈವರೆಗೆ ಸಮರ್ಪಕ ಮೂಲ ಸೌಲಭ್ಯಗಳಿರಲಿಲ್ಲ.
ಇದನ್ನು ನೋಡಿದ ಗ್ರಾಮದ ಶರಣಪ್ಪ ಜವಳಿ, ಮಲ್ಲಪ್ಪ ಚನ್ನಪ್ಪ ಬಳಗೇರಿ, ರವಿ ಬನ್ನಿಕೊಪ್ಪ, ಆನಂದ ಹೊಟ್ಟಿ, ವೈದ್ಯರಾದ ಶಿವಕುಮಾರ ಬಿಳಗಿಮಠ, ಮುತ್ತು ಉಪ್ಪಾರ, ವಿನಾಯಕ ಬಳಗೇರಿ ತಂಡದ ಸದಸ್ಯರು ಗ್ರಾಮಸ್ಥರೊಂದಿಗೆ ಒಡಗೂಡಿ ದೇವಸ್ಥಾನದ ಬಳಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ನೂತನ ಟ್ಯಾಂಕ್ ನಿರ್ಮಾಣ, ಹದಗೆಟ್ಟಿದ್ದ ರಸ್ತೆ ಸರಿಪಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಇದಕ್ಕೂ ಮುನ್ನ ದೇವಸ್ಥಾನಕ್ಕೆ ತೆರಳಲು ಸರಿಯಾದ ರಸ್ತೆಯ ವ್ಯವಸ್ಥೆಯು ಇಲ್ಲಿರಲಿಲ್ಲ. 200 ಟ್ರ್ಯಾಕ್ಟರ್ ಮಣ್ಣನ್ನು ತೆಗ್ಗು- ಗುಂಡಿಗಳಿಗೆ ಮುಚ್ಚಿ ರಸ್ತೆ ಹಾದಿ ಸರಿಪಡಿಸಲಾಗಿದೆ. ಇದೀಗ ಸುಲಭವಾಗಿ ದೇವಸ್ಥಾನಕ್ಕೆ ತೆರಳಬಹುದಾಗಿದೆ.