ಕನ್ನಡಪ್ರಭ ವಾರ್ತೆ ಬೆಳಗಾವಿ
ಶತಮಾನದ ಇತಿಹಾಸ ಹೊಂದಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಉನ್ನತಿಗಾಗಿ ಹಲವು ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಐದು ವರ್ಷದ ಅವಧಿಯೊಳಗೆ ರೈತರಿಗೆ ಸಿಗಬೇಕಿರುವ ಎಲ್ಲ ಸೌಲಭ್ಯಗಳನ್ನು ನೀಡಿ, ಬ್ಯಾಂಕ್ನ್ನು ರಾಜ್ಯದಲ್ಲಿಯೇ ಮಾದರಿಯಾಗಿಸುವ ಸಂಕಲ್ಪ ಮಾಡಲಾಗಿದೆ ಎಂದು ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.ನಗರದ ಧರ್ಮನಾಥ ಭವನದಲ್ಲಿ ಗುರುವಾರ ಬೆಳಗಾವಿ ತಾಲೂಕಿನ ಪಿಕೆಪಿಎಸ್ ಸಂಘಗಳು ಹಮ್ಮಿಕೊಂಡಿದ್ದ ಬಿಡಿಸಿಸಿ ಬ್ಯಾಂಕ್ಗೆ ನೂತನ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿರುವ ರಾಹುಲ್ ಜಾರಕಿಹೊಳಿ ಮತ್ತು ಚನ್ನರಾಜ ಹಟ್ಟಿಹೊಳಿ ಅವರ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಾಗಲೇ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ್ ಜೊಲ್ಲೆ ಅವರು ಬ್ಯಾಂಕ್ ಪ್ರಗತಿ ಕುರಿತು ವಿವಿಧ ಯೋಜನೆಗಳನ್ನು ಹಾಕಿಕೊಂಡಿದ್ದು, ಅವುಗಳನ್ನು ಈಡೇರಿಸುತ್ತಾರೆಂದು ಭರವಸೆ ನೀಡಿದರು.
ಬೆಳಗಾವಿ ತಾಲೂಕು ಮೂರು ಭಾಗಗಳಲ್ಲಿ ಪ್ರಾಬಲ್ಯವನ್ನು ಸಾಧಿಸಿದೆ. ಎರಡೂ ಭಾಷಿಕರು, ಮತ್ತು ಯಮಕನಮರಡಿ ಕ್ಷೇತ್ರಗಳನ್ನು ಒಳಗೊಂಡು ದೊಡ್ಡದಾದ ತಾಲೂಕನ್ನು ಹೊಂದಿದೆ. ಬೆಳಗಾವಿ ತಾಲೂಕಿನ ರೈತರಿಗೆ ಬಿಡಿಸಿಸಿ ಬ್ಯಾಂಕ್ನಿಂದ ಸಿಗಬೇಕಿರುವ ವಿವಿಧ ಯೋಜನೆಗಳನ್ನು ನೀಡಬೇಕಿದೆ. ಈ ನಿಟ್ಟಿನಲ್ಲಿ ರಾಹುಲ್ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಮಾರ್ಗದರ್ಶನದಲ್ಲಿ ಈ ತಾಲೂಕಿನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಲ್ಲ ಪಿಕೆಪಿಎಸ್ ಸಂಘಗಳಿಗೆ ಕೃತಜ್ಞತೆ ಸಲ್ಲಿಸಿದ ಅವರು, ಇದರ ಜೊತೆಗೆ ಮತ್ತೊಂದು ಜವಾಬ್ದಾರಿ ರಾಹುಲ್ ಹೆಗಲಿಗೆ ಬಿದ್ದಿದೆ ಎಂದರು.ಈ ಬ್ಯಾಂಕ್ನಿಂದ ಅಪೆಕ್ಸ್ ಬ್ಯಾಂಕಿಗೆ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಇದಕ್ಕೆ ಬೆಳಗಾವಿ ತಾಲೂಕಿನ ಎಲ್ಲ ಸಹಕಾರಿ ಸಂಘಗಳು ಮತ್ತು ರೈತರು ಕಾರಣವಾಗಿದ್ದು, ರೈತರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಹೊಂದಿದ್ದಾರೆ. ಯಾವ ಕಾರಣಕ್ಕೂ ಹೆದರಬೇಡಿ. ರಾಹುಲ್ ನಿಮ್ಮೊಂದಿಗೆ ಬೆರೆಯುವ ವ್ಯಕ್ತಿ. ಏನೇ ಸಮಸ್ಯೆಗಳಿದ್ದರೂ ಅವರ ಬಳಿ ಮಾತನಾಡಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ದೊರಕಿಸಿಕೊಡುತ್ತಾರೆ ಎಂದರು.ಬ್ಯಾಂಕ್ ಅಧ್ಯಕ್ಷ ಮತ್ತು ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಮಾತನಾಡಿ, ಬ್ಯಾಂಕ್ನ ಮುಂದಿನ ರೈತಪರ ಯೋಜನೆಗಳನ್ನು ವಿವರಿಸಿದರು.
ಅಪೆಕ್ಸ್ ಬ್ಯಾಂಕಿನ ನೂತನ ನಿರ್ದೇಶಕ ರಾಹುಲ್ ಜಾರಕಿಹೊಳಿ ಮಾತನಾಡಿ, ಬೆಳಗಾವಿ ತಾಲೂಕುಗಳಿಂದ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲು ಕಾರಣೀಕರ್ತರಾದ ಸಂಘಗಳಿಗೆ ಕೃತಜ್ಞತೆ ಸಲ್ಲಿಸಿದರು. ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ರೈತರ ಸೇವೆಯನ್ನು ಸಲ್ಲಿಸುತ್ತೇನೆ. ಬ್ಯಾಂಕಿನಿಂದ ಸಿಗುವ ಯೋಜನೆಗಳನ್ನು ರೈತರಿಗೆ ನೀಡುತ್ತೇನೆ. ಈ ಮೂಲಕ ಸಹಕಾರಿ ಸಂಘಗಳ ಅಭಿವೃದ್ಧಿಗೆ ಬದ್ಧನಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.ವಿ.ಪ ಸದಸ್ಯ ಮತ್ತು ನಿರ್ದೇಶಕ ಚನ್ನರಾಜ ಹಟ್ಟಿಹೊಳಿ, ನಿರ್ದೇಶಕ ಮಂಡಳಿ ಸದಸ್ಯರು, ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕ ಎನ್.ಜಿ.ಕಲಾವಂತ, ಉಪ- ಪ್ರಧಾನ ವ್ಯವಸ್ಥಾಪಕ ಎಸ್.ಬಿ.ಬಾಗೇವಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಳಗಾವಿ ತಾಲೂಕಿನ ವಿ.ಪ್ರಾ.ಗ್ರಾ.ಕೃ.ಸಹಕಾರ ಸಂಘಗಳ ಎಲ್ಲ ಸದಸ್ಯರು ಮತ್ತು ಬ್ಯಾಂಕ್ನ ಸಿಬ್ಬಂದಿ ಈ ಸೌಹಾರ್ದ ಸಭೆಯಲ್ಲಿ ಪಾಲ್ಗೊಂಡಿದ್ದರು.
---------ಕೋಟ್.....
ಬ್ಯಾಂಕ್ ಹಿಂದಿನ ಅಧ್ಯಕ್ಷರು ಮತ್ತು ಪ್ರಸ್ತುತ ಅಧ್ಯಕ್ಷರಿಗೂ ಅಜಗಜಾಂತರ ವ್ಯತ್ಯಾಸವಿದೆ. ಬ್ಯಾಂಕ್ ಅಭಿವೃದ್ಧಿ ವಿಚಾರದಲ್ಲಿ ಜೊಲ್ಲೆಯವರು ನಿರ್ದೇಶಕರು, ಹಿರಿಯರು, ಪಿಕೆಪಿಎಸ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಜೊತೆಗೆ ರೈತರ ಸಲಹೆಗಳನ್ನು ಪಡೆಯುತ್ತಿದ್ದಾರೆ. ಆದರೆ, ಈ ಹಿಂದಿನ ಅಧ್ಯಕ್ಷರಿಗೆ ಇವುಗಳನ್ನು ಮಾಡಲು ಸಮಯವೇ ಸಿಗುತ್ತಿರಲಿಲ್ಲ. ಏಕ ಪಕ್ಷೀಯ ನಿರ್ಧಾರವನ್ನು ಕೈಕೊಳ್ಳುತ್ತಿದ್ದರು.ಬಾಲಚಂದ್ರ ಜಾರಕಿಹೊಳಿ, ಬೆಮುಲ್ ಅಧ್ಯಕ್ಷ
-------------