ಶಿವಮೊಗ್ಗ: ಉದ್ಯೋಗಕ್ಕಾಗಿ ಅರಸದೆ ನಾವೀನ್ಯ ಚಿಂತನೆಗಳ ಮೂಲಕ ಉದ್ಯೋಗ ನೀಡುವಂತವರಾಗಿ ಎಂದು ಎಲ್ ಅಂಡ್ ಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ ಸಲಹೆಗಾರ ಎಂ.ವಿ.ಸತೀಶ್ ಕರೆ ನೀಡಿದರು.ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಅನನ್ಯ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ 2021-25ನೇ ಸಾಲಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳ ''''''''ಗ್ರಾಜುಯೇಷನ್ ಡೇ'''''''' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ. ತಂಡಗಳಲ್ಲಿ ಕೆಲಸ ಮಾಡುವ ಕೌಶಲ್ಯತೆ, ಶಿಸ್ತು ಬೆಳೆಸಿಕೊಳ್ಳಿ. ಆಧುನಿಕತೆಯ ಅಂಧತ್ವದಲ್ಲಿ ಮುಳುಗದೆ, ನಿಮ್ಮ ಸ್ವಯಂ ಬೆಳವಣಿಗೆಗಾಗಿ ಸಮಯವನ್ನು ಮಿಸಲಿಡಿ. ಸಮಾಜಮುಖಿ ಕಾಳಜಿ ಮತ್ತು ಆತ್ಮಾವಲೋಕನಕ್ಕಾಗಿ ಪುಸ್ತಕಗಳನ್ನು ನಿರಂತರವಾಗಿ ಅಧ್ಯಯನ ನಡೆಸಿ. ಈ ಮೂಲಕ ಸಮಾಜ ಮತ್ತು ಉದ್ಯಮ ಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆಗಳು ನೀಡುವಂತಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ವೃತ್ತಿಪರ ಪಯಣದಲ್ಲಿ ಶ್ರೇಷ್ಠತೆ ಮತ್ತು ಸಮಗ್ರತೆಗಾಗಿ ಶ್ರಮಿಸಿ. ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು, ಹೊಸತನದ ಕಲಿಕೆಗೆ ಯಾವುದೇ ಹಿಂಜರಿಕೆ ಬೇಡ. ದೇಶ ಸೇವೆಗೆ ಹೆಚ್ಚು ಒತ್ತನ್ನು ನೀಡಿ. ದೃಢವಾದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ ಎಂದರು.ಬುದ್ಧ ಶಾಂತಿಗಾಗಿ ಅರಮನೆಯನ್ನು ತ್ಯಜಿಸಿದರು, ಆದರೆ ಇಂದು ಜನರು ಅರಮನೆಗಾಗಿ ಶಾಂತಿಯನ್ನು ತ್ಯಜಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಮನುಷ್ಯತ್ವದ ಗುಣಗಳನ್ನು ಒಡಮೂಡಿಸಿಕೊಳ್ಳಲು ವಿನಯತೆ ಮತ್ತು ಬಾಗುವ ಗುಣವನ್ನು ರೂಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿದರು. ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ ಸೇರಿದಂತೆ ವಿವಿಧ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮಾರು 700ಕ್ಕೂ ಹೆಚ್ಚು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು.