ಸೈಬರ್ ವಂಚನೆ ಜಾಗೃತರಾಗಿ: ಎ.ಎನ್. ಪ್ರಕಾಶ್ ಗೌಡ

KannadaprabhaNewsNetwork | Published : Jan 23, 2025 12:50 AM

ಸಾರಾಂಶ

ದೇಶದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಅದರಲ್ಲೂ ವಿದ್ಯಾವಂತ ಜನರೇ ಇದರಲ್ಲಿ ಹೆಚ್ಚಾಗಿ ಮೋಸ ಹೋಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಹಣ ಕಳೆದುಕೊಂಡು ಒದ್ದಾಡುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಪ್ರತಿಯೊಬ್ಬರಲ್ಲೂ ಡಿಜಿಟಲ್ ಕ್ರೈಂ ಜಾಗೃತಿ ಅಗತ್ಯವಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಾರ್ವಜನಿಕರು, ಅದರಲ್ಲೂ ಮುಖ್ಯಮವಾಗಿ ಯುವ ಸಮುದಾಯ ಸೈಬರ್ ವಂಚನೆ ಬಗ್ಗೆ ಜಾಗೃತವಾಗಿರಬೇಕು ಎಂದು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕ ಡಾ.ಎ.ಎನ್. ಪ್ರಕಾಶ್ ಗೌಡ ಸಲಹೆ ನೀಡಿದರು.

ಸೈಬರ್ ಅಪರಾಧ, ಅದರಿಂದ ಪಾರಾಗುವ ಬಗೆಯ ಕುರಿತು ಜನರಿಗೆ ಉಪಯುಕ್ತ ಮಾಹಿತಿ ಒಳಗೊಂಡ ಕೆ.ಎಂ.ಪಿ.ಕೆ ಟ್ರಸ್ಟ್ ಹೊರತಂದ 2025ರ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ದೇಶದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಅದರಲ್ಲೂ ವಿದ್ಯಾವಂತ ಜನರೇ ಇದರಲ್ಲಿ ಹೆಚ್ಚಾಗಿ ಮೋಸ ಹೋಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಹಣ ಕಳೆದುಕೊಂಡು ಒದ್ದಾಡುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಪ್ರತಿಯೊಬ್ಬರಲ್ಲೂ ಡಿಜಿಟಲ್ ಕ್ರೈಂ ಜಾಗೃತಿ ಅಗತ್ಯವಿದೆ. ದುಡಿಯದೆ ಅತಿ ಹೆಚ್ಚು ಹಣ ಗಳಿಸುವ, ಆಫರ್ ನಲ್ಲಿ ಅತಿ ಹೆಚ್ಚಿನ ಲಾಭ ಪಡೆಯುವ ದುರಾಸೆಗೆ ಸಿಲುಕಿರುವ ಜನರೇ ಹೆಚ್ಚಿನ ಪ್ರಮಾಣದಲ್ಲಿ ಸೈಬರ್ ವಂಚನೆ ಜಾಲದಲ್ಲಿ ಸಿಲುಕುತ್ತಿದ್ದಾರೆ ಎಂದರು.

ಪದವಿ ಹಂತದ ವಿದ್ಯಾರ್ಥಿಗಳು ವಾಟ್ಸಾಪ್, ಫೇಸ್ ಬುಕ್, ಇನ್ ಸ್ಟಾಗ್ರಾಂ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ವ್ಯಕ್ತಿಗಳ ಜೊತೆ ಗೆಳೆತನ ಮಾಡಿ ವೈಯಕ್ತಿಕ ಹಾಗೂ ಆರ್ಥಿಕ ಮಾಹಿತಿ ಹಂಚಿಕೊಳ್ಳುವ ಮೂಲಕ ತೊಂದರೆಗೆ ಸಿಲುಕುತ್ತಿದ್ದಾರೆ ಎಂದರು.

ಶಾಪಿಂಗ್ ಮಾಲ್ ಹಾಗೂ ಎಲ್ಲೆಂದರಲ್ಲಿ ಅಪರಿಚತರಿಗೆ ಫೋನ್ ನಂಬರ್, ಇಮೇಲ್ ಐಡಿ, ಆಧಾರ್ ಸಂಖ್ಯೆ, ಬ್ಯಾಂಕ್ಖಾತೆ ವಿವರ, ಎಟಿಎಂ ಪಿನ್, ಇಂಟರ್ ನೆಟ್ಬ್ಯಾಂಕಿಂಗ್ ಪಾಸ್ ವರ್ಡ್ಬಗ್ಗೆ ಮಾಹಿತಿ ನೀಡಬಾರದು.

ವೈಯಕ್ತಿಕ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಫೋನ್ ಮಾಡುವ ವ್ಯಕ್ತಿಗಳ ಜೊತೆಗೆ ಯಾವತ್ತೂ ವೈಯಕ್ತಿಕ ವಿವರ ಹಂಚಿಕೊಳ್ಳಬಾರದು ಎಂದು ಸಲಹೆ ನೀಡಿದರು.

ಈ ವೇಳೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಜಿ. ರಾಘವೇಂದ್ರ, ದುರ್ಗಾ ಪ್ರಸಾದ್, ಬಾಲಾಜಿ, ಸಚಿನ್ ನಾಯಕ್ ಮೊದಲಾದವರು ಇದ್ದರು.

Share this article