ಶಿಗ್ಗಾಂವಿ: ತಂದೆ-ತಾಯಿ ಮತ್ತು ಹುಟ್ಟಿದ ಜನ್ಮ ಭೂಮಿಯ ಬಗ್ಗೆ ಅರಿವು ಇರಬೇಕು. ಊಟದ ಪದ್ಧತಿಯಲ್ಲಿ ವಿಕೃತಿ ಸ್ವರೂಪ ತಾಳಿದ್ದೇವೆ, ಮಕ್ಕಳ ಭವಿಷ್ಯದ ಭದ್ರ ಬುನಾದಿಯನ್ನು ಪ್ರಾಥಮಿಕವಾಗಿ ಈ ಸಂಸ್ಕೃತಿ ಶಾಲೆ ನೀಡುತ್ತಿದೆ. ಇದು ಹೀಗೆಯೇ ಮುಂದುವರೆಯಲಿ ಎಂದು ಜಂಗಮವಾಡಿಮಠದ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.ಪಟ್ಟಣದ ಸಂಸ್ಕೃತಿ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ನೂತನ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಭಾರತದ ಶ್ರೇಷ್ಠ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ತಿಳಿಸಿಕೊಡಬೇಕು, ದೇಶದ ಅಖಂಡತೆಯನ್ನ ಉಳಿಸಬೇಕು ಜೊತೆಗೆ ನಾವು ದುಡಿದು ಗಳಿಸಿದ ಹಣದಲ್ಲಿ ನಮ್ಮ ಸಂಸ್ಕೃತಿಯ ಸಂರಕ್ಷಣೆಗೂ ಸಹಿತ ಮುಂದಾಗಬೇಕು. ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಣಕ್ಕೆ ಬಹಳಷ್ಟು ಪ್ರಾಧಾನ್ಯತೆ ನೀಡಲಾಗಿದೆ, ಮೊದಲು ಗುರುಕುಲ ಪದ್ಧತಿ ಇತ್ತು, ಗುರು ಸೇವೆಯ ಮೂಲಕ ಗುರುಕೃಪೆ ಪಡೆಯಲಾಗುತ್ತಿತ್ತು, ಆಧುನಿಕ ಪದ್ಧತಿಯಲ್ಲಿ ನಾವು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದೇವೆ, ಆದರೆ ನಮ್ಮ ಸಂಸ್ಕೃತಿ ಪದ್ಧತಿಗಳು ಬದಲಾಗಬಾರದು ಎಂದು ಆಶೀರ್ವದಿಸಿದರು.ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ, ಇಡೀ ನಾಡಿಗೆ ಜ್ಞಾನ ಪ್ರಸಾರ ಮಾಡುವ ಕೇಂದ್ರ ಕಾಶಿ ಜಗದ್ಗುರುಗಳಾಗಿದ್ದಾರೆ ಎಂದರು.ಬಂಡಿವಾಡದ ಸೀತಾಗಿರಿಯ ಸದ್ಗುರು ಸಮರ್ಥ ಡಾ. ಎ.ಸಿ. ವಾಲಿ ಮಹಾರಾಜರು ಮಾತನಾಡಿ, ಎಲ್ಲಿ ಸಂಸ್ಕೃತಿ ಇರುತ್ತದೋ ಅಲ್ಲಿ ಸಂಸ್ಕಾರ ಇರುತ್ತದೆ. ಕಾಶಿ ಶ್ರೀಗಳ ಭವದಿಂದ ಮುಕ್ತಿ ಹೊಂದಲು ಸಿದ್ಧಾಂತ ಶಿಖಾಮಣಿ ಅಪಾರ ಜ್ಞಾನವನ್ನು ನೀಡುತ್ತಿದೆ. ಜ್ಞಾನ ಯಾವ ದಿಕ್ಕಿನಿಂದ ಬಂದರೂ ಅದು ಸ್ವೀಕಾರಾರ್ಹ, ಗೆಳೆತನದಲ್ಲಿ ಸಂಸ್ಕಾರ ಇರಬೇಕು, ಆ ಸಂಸ್ಕಾರ ಇರುವುದರಿಂದಲೇ ಈ ಶಾಲೆಗೆ ಸಂಸ್ಕೃತಿ ಶಾಲೆ ಎಂದು ನಾಮಕರಣ ಮಾಡಿದ್ದಾರೆ ಎಂದು ಭಾವಿಸುವೆ ಎಂದರು.ಧಾರವಾಡದ ನಿವೃತ್ತ ಡಿಡಿಪಿಐ ಎಸ್.ಬಿ. ಕೊಡ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಪೂರ್ವಿಕಾ ಗರಗ ವಿದ್ಯಾರ್ಥಿನಿಯನ್ನು ಶ್ರೀಗಳು ಸನ್ಮಾನಿಸಿದರು. ನಂತರ ನಡೆದ ವಿಜ್ಞಾನ ವಸ್ತು ಪ್ರದರ್ಶನವನ್ನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಉದ್ಘಾಟಿಸಿದರು. ಸಂಸ್ಕೃತಿ ಶಾಲೆಯ ಅದ್ಯಕ್ಷ ಮಂಜುನಾಥ ಮೊರಬದ, ಸಂಸ್ಥಾಪಕ ಕಾರ್ಯದರ್ಶಿ ದೇವರಾಜ ಸುಣಗಾರ, ಸಂಸ್ಕೃತಿ ಶಾಲೆಯ ಮುಖ್ಯ ಶಿಕ್ಷಕಿ ಅನಿತಾ ಹಿರೇಮಠ, ಮಾಜಿ ಪುರಸಭೆ ಸದಸ್ಯ ಸಂತೋಷ ಮೊರಬದ, ಶಿಕ್ಷಕರಾದ ರಮೇಶ ಭಾವಿ, ಜಯರಾಜ ಬದಗಿ, ಸ್ವೇತಾ ದುಬೆ, ಗಾಯತ್ರಿ ಎಂ.ವಿ., ಸ್ವಪ್ನಾ ಪಠ್ಯೇದ, ಸವಿತಾ ಗೌರಿಮಠ ಸೇರಿದಂತೆ ಶಾಲೆಯ ಶಿಕ್ಷಕರು, ನಿರ್ದೇಶಕರು ಹಾಗೂ ಮಕ್ಕಳ ಪಾಲಕರು, ವಿದ್ಯಾರ್ಥಿಗಳು ಇದ್ದರು.