- ಹುಟ್ಟಿನಿಂದಲೇ ಮನುಷ್ಯ ಗ್ರಾಹಕ: ಶ್ರೀನಿಧಿ
---
ಕನ್ನಡಪ್ರಭ ವಾರ್ತೆ ಚಾಮರಾಜನಗರ‘ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿಸುವಾಗ ಎಚ್ಚರವಹಿಸಬೇಕು, ವಸ್ತುಗಳ ಮೇಲಿನ ದಿನಾಂಕವನ್ನು ಪರಿಶೀಲಿಸಿದರೆ ಉತ್ತಮ. ಆ ವಸ್ತುವು ನಿಗದಿತ ದಿನಾಂಕವನ್ನು ಮೀರಿದ್ದರೆ, ಆ ವಸ್ತುವು ತನ್ನ ಗುಣವನ್ನು ಕಳೆದುಕೊಂಡಂತೆ’ ಎಂದು ಚಾಮರಾಜನಗರ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎಚ್.ಎಸ್. ಶ್ರೀನಿಧಿ ತಿಳಿಸಿದರು.
ನಗರದ ಶ್ರೀಗಂಧ ಮಹಿಳಾ ಅಭಿವೃದ್ದಿ ಸಂಘ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ, ಕಾನೂನು ಮಾಪನ ಶಾಸ್ತ್ರ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ಸರ್ಕಾರಿ ಪ್ರೌಢಶಾಲೆ ದೊಡ್ಡರಾಯಪೇಟೆ ಇವರ ಸಹಯೋಗದಲ್ಲಿ ತಾಲೂಕಿನ ದೊಡ್ಡರಾಯಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಗ್ರಾಹಕ ಹಕ್ಕುಗಳು ಮತ್ತು ಜಾಗೃತಿ ಕುರಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಮನುಷ್ಯನು ಜನಿಸಿದ ದಿನದಿಂದ ಗ್ರಾಹಕರೆ ಎಂದು ತಿಳಿದಿರಬೇಕು. ಯಾವುದೇ ವಸ್ತುಗಳನ್ನು ಅಂಗಡಿಗಳಲ್ಲಿ ಕೊಳ್ಳುವಾಗ ಅಳತೆ ನೋಡಿ ಖರೀದಿಸಬೇಕು. ಜೊತೆಗೆ ರಶೀದಿ ಪಡೆಯಬೇಕು ಎಂದು ಹೇಳಿದರು. ಭಾರತ ಸರ್ಕಾರವು 1986ರಂದು ಒಂದು ಕಾನೂನು ಹೊರಡಿಸಿ ನಮ್ಮ ದೇಶದ ಗ್ರಾಹಕರಿಗೆ ವ್ಯಾಪಾರ ಮಾಡುವಾಗ ಅವರಿಗಾಗುವ ಅನೇಕ ಮೋಸ, ವಂಚನೆ ಹಾಗೂ ಸೇವೆಗಳಲ್ಲಿ ನ್ಯೂನತೆಗಳನ್ನು ಸರಿಪಡಿಸುವ ಈ ನಿಟ್ಟಿನಲ್ಲಿ ಗ್ರಾಹಕರಿಗೆ ಶೀಘ್ರ ನ್ಯಾಯ ಒದಗಿಸುವ ದೃಷ್ಟಿಯಿಂದ ಗ್ರಾಹಕರ ಸಂರಕ್ಷಣಾ ಕಾಯ್ದೆ 1986 ಜಾರಿಗೆ ತಂದಿದೆ. ಮೋಸದಿಂದ ಗ್ರಾಹಕರ ರಕ್ಷಣೆಗಾಗಿ ಕಾನೂನುಗಳನ್ನು ರೂಪಿಸುವ ಉದ್ದೇಶದಿಂದ ‘ಗ್ರಾಹಕ ಸಂರಕ್ಷಣೆ ಕಾನೂನು 2019’ ತಂದಿದ್ದು ಈ ಕಾಯ್ದೆಯು ದಿನಾಂಕ 2020ರ ಜುಲೈ 24ರಂದು ಜಾರಿಗೆ ಬಂದಿದೆ. ಇಂತಹ ಮಾಹಿತಿಗಳನ್ನು ವಿದ್ಯಾರ್ಥಿಗಳು ತಿಳಿದಿರಬೇಕು’ ಎಂದು ಹೇಳಿದರು.ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಭಾರತಿ ಮಾತನಾಡಿ,‘ವಿದ್ಯಾರ್ಥಿಗಳು ಶಾಲೆಯ ಮುಂಭಾಗದಲ್ಲಿ ಮಾರಾಟ ಮಾಡುವ ತಿಂಡಿಗಳನ್ನು ತಿನ್ನುವ ಮೊದಲು ಅದು ಉತ್ತಮ ಗುಣಮಟ್ಟದ್ದೇ ಎಂದು ತಿಳಿಯಬೇಕು’ ಎಂದರು.
ಪ್ರೌಢಶಾಲಾ ಮುಖ್ಯ ಶಿಕ್ಷಕಿ ವನಜಾಕ್ಷಿ ಎನ್.ವಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಗಂಧ ಮಹಿಳಾ ಅಭಿವೃದ್ಧಿ ಸಂಘದ ಅಧ್ಯಕ್ಷೆ ಉಮಾ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ರೇಚಣ್ಣ, ಕೆಂಪಣ್ಣ, ಜಗನ್ ಮೋಹನ್ ಹಾಗೂ ವಿದ್ಯಾರ್ಥಿಗಳು ಇದ್ದರು.---