- ಎಸ್ಜೆಎಂ ಶಾಲೆ ಗುರುಪೌರ್ಣಿಮೆ ಕಾರ್ಯಕ್ರಮದಲ್ಲಿ ಡಾ.ಬಸವಪ್ರಭು ಸ್ವಾಮೀಜಿ ಆಶೀರ್ವಚನ
ಕನ್ನಡಪ್ರಭ ವಾರ್ತೆ ದಾವಣಗೆರೆ “ಗು” ಎಂದರೆ ಅಜ್ಞಾನ, “ರು” ಎಂದರೆ ಹೊಡೆದೋಡಿಸುವುದು ಎಂದರ್ಥ. ಅಜ್ಞಾನವನ್ನು ಹೊಡೆದೋಡಿಸುವವರೇ ಗುರು. ಗುರು ಎನ್ನುವುದು ಒಂದು ಶಕ್ತಿ, ಸಿದ್ಧಾಂತ ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ದೊಡ್ಡಪೇಟೆಯ ವಿರಕ್ತ ಮಠದಲ್ಲಿರುವ ಎಸ್ಜೆಎಂ ಶಾಲೆಯಲ್ಲಿ ಶನಿವಾರ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ವತಿಯಿಂದ ಗುರುಪೌರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಹಾಗೂ ಅಕಾಡೆಮಿ ಘಟಕ ಸ್ಥಾಪನೆ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.ಮಾನವನಿಗೆ ಜೀವನದ ಗುರಿಯನ್ನು ತಿಳಿಸಲು ಗುರುವೊಬ್ಬ ಬೇಕು. ಬಹಳ ಜನರಿಗೆ ಮನುಷ್ಯರಾಗಿ ಏಕೆ ಹುಟ್ಟಿದ್ದೇವೆ ಎಂಬುದೇ ಗೊತ್ತಿಲ್ಲ. ಮಾನವ ಜನ್ಮ ಇರುವುದೇ ಖುಷಿಯಾಗಿದ್ದು, ಸಂತೋಷದಿಂದ ಇದ್ದು ಹೋಗಲು ಎಂದುಕೊಂಡಿದ್ದಾರೆ. ಖುಷಿಯಾಗಿ ಜೀವನ ಸಾಗಿಸಿ. ಆದರೆ ಜೊತೆಗೆ ಧರ್ಮದ, ಪುಣ್ಯದ ಒಳ್ಳೆಯ ಕಾರ್ಯಗಳನ್ನು ಮಾಡಿರಿ. ಇರುವುದರೊಳಗೆ ಒಳ್ಳೆಯ ಸತ್ಕಾರ್ಯಗಳನ್ನು ಮಾಡಬೇಕು. ಮಹಾತ್ಮರು ದೇವರನ್ನು ಮಾನವರಲ್ಲಿ ಕಾಣಬೇಕು ಎಂದು ಹೇಳಿದ್ದಾರೆ. ಮಾನವರನ್ನು ದೇವರ ರೂಪದಲ್ಲಿ ಕಂಡಾಗ ಜಗತ್ತಿನಲ್ಲಿ ಯುದ್ಧ, ಜಗಳ, ಗಲಭೆಗಳು ನಡೆಯಲು ಸಾಧ್ಯವಿಲ್ಲ ಎಂದರು.
ಅಕಾಡೆಮಿ ಕಾರ್ಯದರ್ಶಿ, ಸಾಹಸ ತರಬೇತುದಾರ ಎನ್.ಕೆ. ಕೊಟ್ರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿ ವತಿಯಿಂದ ಡಾ.ಬಸವಪ್ರಭು ಸ್ವಾಮೀಜಿ ಅವರನ್ನು ಗೌರವಿಸಿ, ಅಭಿನಂದನಾ ಪತ್ರ ನೀಡಿ ಗುರುವಂದನೆ ಸಲ್ಲಿಸಲಾಯಿತು.
ಅಧ್ಯಕ್ಷ ರಾಜಶೇಖರ ಕೊಂಡಜ್ಜಿ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಶಿವಯೋಗಾಶ್ರಮ ಟ್ರಸ್ಟಿನ ಟಿ.ಎಂ. ವೀರೇಂದ್ರ, ಚಂದ್ರಮೌಳಿ, ಕಾಶೀನಾಥ್, ಬೇತೂರು ಪ್ರಕಾಶ, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶುಭಶ್ರೀ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ಓ.ಅಜ್ಜಯ್ಯ ಸ್ವಾಗತಿಸಿದರು. ಎಸ್ಜೆಎಂ ಪ.ಪೂ. ಕಾಲೇಜಿನ ಪ್ರಾಚಾರ್ಯ ರೋಷನ್ ಜಮೀರ್ ವಂದಿಸಿದರು.- - -
-13ಕೆಡಿವಿಜಿ33.ಜೆಪಿಜಿ:ದಾವಣಗೆರೆಯಲ್ಲಿ ಗುರುಪೌರ್ಣಿಮೆ ಅಂಗವಾಗಿ ಡಾ.ಬಸವಪ್ರಭು ಸ್ವಾಮೀಜಿ ಅವರನ್ನು ಗೌರವಿಸಿ ಅಭಿನಂದನಾ ಪತ್ರ ನೀಡಿ ಗುರುವಂದನೆ ಸಲ್ಲಿಸಲಾಯಿತು.