ಕನ್ನಡಪ್ರಭ ವಾರ್ತೆ ಹಾಸನ
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ಗೆ ಒಂದು ಉದ್ದೇಶವನ್ನು ಕೊಡಲಾಗಿದ್ದು, ಮುಖ್ಯವಾಗಿ ನೀವು ಸಂತೋಷವಾಗಿರಬೇಕು. ಸೇವೆಗಾಗಿ ಸದಾ ಸಿದ್ಧನಾಗಿರಬೇಕು. ಎಲ್ಲದಕ್ಕಿಂತ ಪ್ರಮುಖವಾಗಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳ್ವೆಯನ್ನು ನಡೆಸುವುದು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ತಿಳಿಸಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಏಕಲವ್ಯ ಜೀವಜಲ ಫೌಂಡೇಷನ್, ನೆಹರು ಯುವಕೇಂದ್ರ, ಯುವ ಕ್ರೀಡಾ ಸಚಿವಾಲಯ, ಭಾರತ ಸರ್ಕಾರ, ಹಾಸನ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಏಕಲವ್ಯ ಮುಕ್ತದಳದ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಭೂಮಿ ದಿನಾಚರಣೆ ಮತ್ತು ಏಕಲವ್ಯ ಜೀವಜಲ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಒಬ್ಬ ಉತ್ತಮ ಪ್ರಜೆಯಾಗಿ ಬದುಕನ್ನು ನಡೆಸುವ ಸಲುವಾಗಿ ಸುಮಾರು ೧೧೭ ವರ್ಷಗಳಿಂದ ಇನ್ನೂರಕ್ಕೂ ಅಧಿಕ ರಾಷ್ಟ್ರಗಳಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕೆಲಸ ಮಾಡುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಕೂಡ ಅನೇಕ ದಿಗ್ಗಜರು ಈ ಸಂಸ್ಥೆಗಾಗಿ ದುಡಿದಿದ್ದಾರೆ. ಮೈಸೂರಿನ ಒಡೆಯರಾದ ಕೃಷ್ಣರಾಜೇಂದ್ರ ಒಡೆಯರ್ ಸಂಸ್ಥೆಯ ಮೂಲ ಸಂಸ್ಥಾಪಕರು. ಕನ್ನಂಬಾಡಿ ಕಟ್ಟೆ, ವಿದ್ಯುತ್ ಪ್ರಸರಣ ನಿಗಮ, ಕನ್ನಡ ಸಾಹಿತ್ಯ ಪರಿಷತ್, ಸಾವಿರಾರು ಕೆರೆಕಟ್ಟೆಗಳ ನಿರ್ಮಾಣ ಸೇರಿದಂತೆ ಹಲವಾರು ಕೊಡುಗೆಗಳ ಸರದಾರ. ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಶಂಕರ್ ನಾರಾಯಣ್ ಅವರು ಮೊದಲು ೨೦ ವರ್ಷ ಮುಖ್ಯ ಆಯುಕ್ತರಾಗಿದ್ದರು. ಅದಾದ ಬಳಿಕ ಪಿ ಶಿವಶಂಕರ್, ಮಲ್ಲಾರಾಧ್ಯ, ದೀನ್ ದಯಾಳ, ಕೊಂಡಜ್ಜಿ ಬಸಪ್ಪ, ಕೊಂಡಜ್ಜಿ ಶಿವಶಂಕರಪ್ಪ ಸೇರಿದಂತೆ ಹಲವರು ತಮ್ಮ ಅಪಾರವಾದ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ವಿವರಿಸಿದರು. ಜಯಚಾಮರಾಜೇಂದ್ರ ಒಡೆಯರ್ ಇದರ ಮೊದಲ ಸದಸ್ಯರಾಗಿ ಅಂದಿನಿಂದ ಇಂದಿನವರೆಗೂ ಬೆಳೆದುಬಂದ ಹಾದಿಯಲ್ಲಿ ಶಿಸ್ತು, ಸಂಯಮ, ಸಮಾಜ ಸೇವೆ, ಪ್ರಕೃತಿ ರಕ್ಷಣೆ ಸಲುವಾಗಿ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ತಿಪಟೂರು ಷಡಕ್ಷರ ಮಠದ ಶ್ರೀ ಡಾ. ರುದ್ರಮುನಿ ಸ್ವಾಮೀಜಿ, ನುಗ್ಗೇಹಳ್ಳಿ, ರಂಭಾಪುರಿ ಶಾಖಾ ಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ವಕೀಲರು, ನಿವೃತ್ತ ಜಂಟಿ ನಿರ್ದೇಶಕರು, ಕಾಫಿ ಮಂಡಳಿ, ಭಾರತ ಸರ್ಕಾರ ಹಾಗೂ ಅಧ್ಯಕ್ಷ ಡಾ. ವಿ.ಆರ್. ಗುಡ್ಡೆಗೌಡ. ಸಂಪಾದಕರು, ಉದಯವರದಿ ಕನ್ನಡ ದಿನಪತ್ರಿಕೆ ಹಾಗೂ ಮಾಧ್ಯಮ ಅಕಾಡೆಮಿ ದತ್ತಿ ಪ್ರಶಸ್ತಿ ಪುರಸ್ಕೃತರಾದ ವೆಂಕಟೇಶ್, ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಎಂ. ಶ್ರೀನಿವಾಸ್, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಹಿರಿಯರು ಕಾಂಚನಮಾಲಾ, ಗಿರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.