ಲಕ್ಷ್ಮೇಶ್ವರ: ದೇಶ ವಿಭಜಕ ಶಕ್ತಿಗಳ ವಿರುದ್ಧ ವಿದ್ಯಾರ್ಥಿ ಸಮುದಾಯ ಜಾಗೃತರಾಗಬೇಕು. ಭಾರತದ ಏಕತೆ, ಪರಂಪರೆ, ಸಂಸ್ಕೃತಿ, ಸಮಗ್ರತೆ ಹಾಗೂ ಸಂವಿಧಾನದ ಬಗ್ಗೆ ತಿಳಿಕೊಳ್ಳುವ ಕಾರ್ಯ ಮಾಡಬೇಕು ಎಂದು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ್ ಕುಳಗೇರಿ ತಿಳಿಸಿದರು.ಪಟ್ಟಣ ಬಿಸಿಎನ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಬಿವಿಪಿಯ ಧಾರವಾಡ ವಿಭಾಗ ಅಭ್ಯಾಸ ವರ್ಗ ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ರಾಜಕೀಯ ಕಾರಣಕ್ಕಾಗಿ ನ್ಯಾಯಾಂಗ, ಚುನಾವಣೆ ಆಯೋಗ, ಸಂಸತ್ತು ಹಾಗೂ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅನುಮಾನ ಮೂಡುವ ರೀತಿಯಲ್ಲಿ ಹೇಳಿಕೆಗಳು ನೀಡುತ್ತಿರುವುದು ಶೋಚನೀಯ ಸಂಗತಿ ಎಂದರು.
ಎಬಿವಿಪಿಯ ಗದಗ ಜಿಲ್ಲಾ ಪ್ರಮುಖ ಪುನೀತ ಬೇನಕನವಾರಿ ಮಾತನಾಡಿ, ಭಾರತದ ಕೆಲವು ವಿಶ್ವವಿದ್ಯಾಲಯಗಳಲ್ಲಿ ದೇಶದ ವಿರುದ್ಧ ವಿದ್ಯಾರ್ಥಿಗಳನ್ನು ಉಪಯೋಗಿಸಿಕೊಂಡು ದೇಶದ್ರೋಹಿ ಘೋಷಣೆ ಕೂಗುವ ಷಡ್ಯಂತ್ರ ಮಾಡುತ್ತಿರುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ರಾಷ್ಟ್ರ ಕಟ್ಟುವ ಶಕ್ತಿ ಅಂದರೆ ಅದು ವಿದ್ಯಾರ್ಥಿ ಶಕ್ತಿ. ಅದನ್ನು ಎಬಿವಿಪಿ ಸಾರ್ಥಕವಾಗಿ ಕಾರ್ಯ ಮಾಡುತ್ತಿದೆ. ದೇಶ ದ್ರೋಹದ ಘೋಷಣೆ ಕೂಗುವವರ ವಿರುದ್ಧ ಗಟ್ಟಿ ಧ್ವನಿಯಾಗಿ ಹೋರಾಟ ಮಾಡುತ್ತಿದೆ. ದೇಶವನ್ನು ಗಟ್ಟಿಗೊಳಿಸುವಲ್ಲಿ ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದರು.
ಎಬಿವಿಪಿಯ ರಾಜ್ಯ ಸಹ ಕಾರ್ಯದರ್ಶಿ ಅಭಿಷೇಕ ದೊಡಮನಿ ಮಾತನಾಡಿ, ಎಬಿವಿಪಿ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಸಂಘಟನೆಯಾಗಿದೆ. ವಿಶ್ವದಲ್ಲಿಯೇ ಅತೀ ಹೆಚ್ಚು 75 ಲಕ್ಷಕ್ಕೂ ಅಧಿಕ ಸದಸ್ಯತ್ವ ಹೊಂದಿರುವ ಏಕೈಕ ವಿದ್ಯಾರ್ಥಿ ಸಂಘಟನೆ ಎಬಿಬಿಪಿಯಾಗಿದೆ. ಬೇರೆ ಯಾವ ದೇಶಗಳಲ್ಲಿ ಇಂತಹ ಬಲಿಷ್ಠ ವಿದ್ಯಾರ್ಥಿ ಸಂಘಟನೆಯಿಲ್ಲ. ದೇಶ ಕಟ್ಟುವ ನಾಯಕರನ್ನು ಸಂಘಟನೆ ತಯಾರು ಮಾಡುತ್ತಿದೆ ಎಂದರು.ಎರಡು ದಿನಗಳ ಕಾಲ ಅಭ್ಯಾಸ ವರ್ಗ ನಡೆಯಲಿದೆ. ಮೂರು ಜಿಲ್ಲೆಗಳಿಂದ 150 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವೇಳೆ ಧಾರವಾಡ ನಗರ ಸಹ ಕಾರ್ಯದರ್ಶಿ ವಿಜಯಲಕ್ಷ್ಮಿ ಮಾನೆ, ಶಂಕರ ಕುಂದಗೋಳ, ಜಿಲ್ಲಾ ಸಂಚಾಲಕ ಪ್ರಕಾಶ ಕುಂಬಾರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಅಭಿಷೇಕ ಉಮಚಗಿ, ತಾಲೂಕು ಸಂಚಾಲಕ ವಿನಾಯಕ ಕುಂಬಾರ, ತಾಲೂಕು ಸಹ ಸಂಚಾಲಕಿ ಸಂಜನಾ ಪಾಟೀಲ ಹಾಗೂ ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ಪ್ರತಿನಿಧಿಗಳು ಇದ್ದರು.