20ರಿಂದ ಕ್ರಸ್ಟ್‌ ಗೇಟ್ ಅಳವಡಿಕೆ ಕಾರ್ಯ ಆರಂಭಿಸಿ

KannadaprabhaNewsNetwork |  
Published : Dec 07, 2025, 03:30 AM IST
6ಕೆಪಿಎಲ್25 ಮುನಿರಾಬಾದನ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಮುಖ್ಯ ಅಭಿಯಂತರರ ಕಚೇರಿಯಲ್ಲಿ ತುಂಗಭದ್ರಾ ಜಲಾಶಯದ ನೂತನ ಕ್ರಸ್ಟಗೇಟ್ ಅಳವಡಿಸುವ ಕುರಿತು ಕೆ.ಎನ್.ಎನ್.ಎಲ್ ಅಧಿಕಾರಿಗಳು ಹಾಗೂ ತುಂಗಭದ್ರಾ ಮಂಡಳಿಯ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆ | Kannada Prabha

ಸಾರಾಂಶ

ನಮ್ಮ ರೈತರು ಎರಡನೇ ಬೆಳೆಗೆ ನೀರನ್ನು ತ್ಯಾಗ ಮಾಡಿದ್ದಾರೆ. ಇದನ್ನು ನಾವೆಲ್ಲರೂ ಅರಿತುಕೊಂಡ ಕೆಲಸ ಮಾಡಬೇಕು

ಕೊಪ್ಪಳ: ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್‌ಗೇಟ್ ಅಳವಡಿಸುವ ಕಾರ್ಯ ಡಿ. 20ರಿಂದ ಆರಂಭವಾಗಬೇಕು ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಮುನಿರಾಬಾದ್‌ನ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಅಭಿಯಂತರ ಕಚೇರಿಯಲ್ಲಿ ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್‌ಗೇಟ್ ಅಳವಡಿಸುವ ಕುರಿತು ಕೆಎನ್ಎನ್ಎಲ್ ಅಧಿಕಾರಿಗಳು ಹಾಗೂ ತುಂಗಭದ್ರಾ ಮಂಡಳಿಯ ಅಧಿಕಾರಿಗಳೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತುಂಗಭದ್ರಾ ಜಲಾಶಯವು ನಮ್ಮ ಭಾಗದ ಲಕ್ಷಾಂತರ ರೈತರ ಜೀವನಾಡಿಯಾಗಿದ್ದು, ಪ್ರಸ್ತುತ ಹಳೆಯದಾಗಿರುವ ಜಲಾಶಯದ ಎಲ್ಲ 33 ಕ್ರಸ್ಟ್ ಗೇಟ್ ಬದಲಾಯಿಸಲು ₹52 ಕೋಟಿ ವೆಚ್ಚದಲ್ಲಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಅದರಂತೆ ಪ್ರಸ್ತುತ ಕ್ರಸ್ಟ್‌ಗೇಟ್ ಕಳಚುವುದು ಮತ್ತು ಇತರ ಕೆಲವು ಕಾರ್ಯ ತ್ವರಿತವಾಗಿ ಕೈಗೊಳ್ಳಬೇಕು. ನೂತನ ಕ್ರಸ್ಟ್‌ಗೇಟ್ ಅಳವಡಿಸುವ ಕಾರ್ಯ ಡಿ. 20ರಿಂದ ಆರಂಭಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಮತ್ತು ಈ ಕಾಮಗಾರಿಯು ಕಡ್ಡಾಯವಾಗಿ ಟೈಮ್ ಬಾಂಡ್ ಒಳಗೆ ಪೂರ್ಣಗೊಳ್ಳಬೇಕೆಂದು ಸೂಚನೆ ನೀಡಿದರು.

ನಮ್ಮ ರೈತರು ಎರಡನೇ ಬೆಳೆಗೆ ನೀರನ್ನು ತ್ಯಾಗ ಮಾಡಿದ್ದಾರೆ. ಇದನ್ನು ನಾವೆಲ್ಲರೂ ಅರಿತುಕೊಂಡ ಕೆಲಸ ಮಾಡಬೇಕು. ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಸೇರಿ ಎಲ್ಲ 33 ಕ್ರಸ್ಟ್‌ಗೇಟ್ ಬದಲಾಯಿಸುವುದಾಗಿ ರೈತರಿಗೆ ಮಾತು ನೀಡಿದ್ದು, ಅದನ್ನು ಉಳಿಸಿಕೊಳ್ಳಬೇಕಿದೆ. 2026ರ ಜೂನ್ ತಿಂಗಳಲ್ಲಿ ಜಲಾಶಯದಲ್ಲಿ ನೀರು ಸಂಗ್ರಹವಾಗುತ್ತದೆ. ಮುಂಗಾರು ಬೆಳೆಗಳಿಗೆ ನೀರು ಒದಗಿಸಲು ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಹಾಗಾಗಿ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಅಳವಡಿಸುವ ಕಾರ್ಯ ಮೇ ತಿಂಗಳೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಲು ಗುತ್ತಿಗೆದಾರರು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಂಬಂಧಿಸಿದಂತೆ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು. ಗೇಟ್ ಅಳವಡಿಸುವ ಕಾರ್ಯ ನಡೆಯುವ ಸ್ಥಳಕ್ಕೆ ಯಾರನ್ನೂ ಬಿಡಬಾರದು. ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗದಂತೆ ಕುಡಿಯುವ ನೀರು ಪೂರೈಕೆ ಸಮರ್ಪಕವಾಗಿ ಮಾಡಬೇಕು ಎಂದರು.

ಕನೀನಿನಿ ಮುನಿರಾಬಾದ್ ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಶ್ರೀನಿವಾಸ ಬಿ. ಮಲ್ಲಿಗವಾಡ ಹಾಗೂ ಹೊಸಪೇಟೆ ಟಿಬಿ ಡ್ಯಾಮಿನ ಟಿಬಿ ಬೋರ್ಡ್ ಅಧೀಕ್ಷಕ ಅಭಿಯಂತರ ಎಸ್. ನಾರಾಯಣ ನಾಯಕ ಸಚಿವರಿಗೆ ಕಾಮಗಾರಿ ಕಾರ್ಯಗತ ಮಾಡುವ ಬಗ್ಗೆ ಮಾಹಿತಿ ನೀಡಿದರು.

ಗುಜರಾತಿನ ಅಹಮದಾಬಾದ್‌ನ ಮೆ. ಹಾರ್ಡ್‌ವೇರ್ ಟೂಲ್ಸ್ ಮತ್ತು ಮಷಿನರಿ ಪ್ರಾಜೆಕ್ಟ್ ಪ್ರೈ. ಲಿಮಿಟೆಡ್ ಕಂಪನಿಯ ಪ್ರತಿನಿಧಿಗಳು ಮಾತನಾಡಿ, ತಮ್ಮ ಸಂಸ್ಥೆಯಿಂದ ಪಶ್ಚಿಮ ಬಂಗಾಳದ ಪರಾಕ್ ಬ್ಯಾರೇಜ್ ಜಲಾಶಯದಲ್ಲಿ 124 ಗೇಟ್ ಅಳವಡಿಸಲಾಗಿದೆ. ಇದಲ್ಲದೆ ಕೆ.ಆರ್.ಎಸ್. ಜಲಾಶಯ ಮತ್ತು ನಾರಾಯಣಪುರ ಡ್ಯಾಮಿನ ಗೇಟ್ ಅಳವಡಿಸುವ ಕಾರ್ಯಕ್ರಮ ಯಶಸ್ವಿಯಾಗಿ ಹಮ್ಮಿಕೊಂಡಿದ್ದೇವೆ. ಒಂದು ತಿಂಗಳಲ್ಲಿ 6 ಗೇಟ್‌ಗಳಂತೆ ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್‌ಗೇಟ್ ಅಳವಡಿಸುವ ಕಾರ್ಯ ಜಲಾಶಯದ ಎಡ, ಬಲ ಮತ್ತು ಮಧ್ಯಭಾಗದಲ್ಲಿ ಒಂದು ಸೇರಿ ಒಟ್ಟು ಮೂರು ತಂಡಗಳಲ್ಲಿ ಕೈಗೊಳ್ಳಲಾಗುವುದು ಎಂದು ಸಚಿವರಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಮುನಿರಾಬಾದ್ ಕೇಂದ್ರ ವಲಯದ ಕಾರ್ಯಪಾಲಕ ಅಭಿಯಂತರ ಪ್ರೀತಿ ಪತ್ತಾರ, ಟಿಬಿ ಬೋರ್ಡ್ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ, ವಡ್ಡರ ಹಟ್ಟಿ ವಿಭಾಗದ ಕಾರ್ಯಪಾಲಕ ಅಭಿಯಂತರ ಎಂ.ಎಸ್. ಗೋಡೆಕರ್, ಮುನಿರಾಬಾದ್ ವಲಯದ ತಾಂತ್ರಿಕ ಸಹಾಯಕ ಯಲ್ಲಪ್ಪ, ವಿನಾಯಕ ಬಿ., ಬಸಪ್ಪ ಜಾನಕರ್, ಲಿಂಗರಾಜ್ ಹಾಗೂ ರಾಘವೇಂದ್ರ, ಸಹಾಯಕ ಕಾರ್ಯಪಾಲಕ ಅಭಿಯಂತರ ಧರಂರಾಜ್, ಸಹಾಯಕ ಎಂಜಿನಿಯರ್ ಹುಲಿರಾಜ್ ಮತ್ತು ಕಿರಣ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶವಿಭಜಕ ಶಕ್ತಿಗಳ ವಿರುದ್ಧ ಜಾಗೃತರಾಗಿ: ಸಚಿನ್ ಕುಳಗೇರಿ
ಅಂಬೇಡ್ಕರ್ ತತ್ವಗಳು ವಿಕಸಿತ ಭಾರತ ನಿರ್ಮಾಣಕ್ಕೆ ದಾರಿದೀಪ: ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ