ಕನ್ನಡಪ್ರಭ ವಾರ್ತೆ ಮಳವಳ್ಳಿ
ಪೂರಿಗಾಲಿ ಹನಿ ನೀರಾವರಿ ಯೋಜನೆ ಯಶಸ್ವಿಗೊಳಿಸಲು ಭೂ ಮಾಲೀಕರು, ನೀರು ಬಳಕೆದಾರರ ಸಂಘಕ್ಕೆ ಸದಸ್ಯರಾಗಬೇಕೆಂದು ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮನವಿ ಮಾಡಿದರು.ತಾಲೂಕಿನ ಪಂಡಿತಹಳ್ಳಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ಕೃಷಿ ಇಲಾಖೆ, ಜಲಾಯನ ಇಲಾಖೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಜಲಾಯನ ಅಭಿವೃದ್ಧಿ, ಅರಣ್ಯ ಮತ್ತು ತೋಟಗಾರಿಕೆ ಹಾಗೂ ಉತ್ಪಾದನಾ ವ್ಯವಸ್ಥೆ ಘಟಕದಡಿ ಸಸಿಗಳು ಮತ್ತು ಯಾತ್ರಿಕರಣ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.ಬಿಜಿಪುರ ಹೋಬಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂಬ ಆಕಾಂಕ್ಷೆಯೊಂದಿಗೆ 593 ಕೋಟಿ ರು. ವೆಚ್ಚದಲ್ಲಿ ಪೂರಿಗಾಲಿ ಹನಿ ನೀರಾವರಿ ಯೋಜನೆ ಜಾರಿಗೆ ತಂದು ಕಾಮಗಾರಿ ಅಂತಿಮಗೊಳ್ಳುತ್ತಿದ್ದರೂ ಕೂಡ ರೈತರ ಸ್ಪಂದನೆ ಸರಿಯಾಗಿ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಾಮೂಹಿಕ ಕೃಷಿ ಪದ್ಧತಿ ಯಶಸ್ವಿಯಾಗಲು ರೈತರು ಸಂಘದ ಸದಸ್ಯತ್ವ ಪಡೆದಿರಬೇಕು. ಇದರ ಬಗ್ಗೆ ಎಷ್ಟೇ ತಿಳಿವಳಿಕೆ ನೀಡಿದರೂ ಇನ್ನೂ ಅರ್ಥವಾಗಿಲ್ಲ. ಸಂಘದ ಷೇರನ್ನು ನಾನೇ ಭರಿಸುತ್ತೇನೆ. ಯುವಕರು ಗ್ರಾಮಗಳಿಗೆ ಹೋಗಿ ತಿಳಿವಳಿಕೆ ಮೂಡಿಸಿ ಸದಸ್ಯತ್ವ ಪಡೆಯುವಂತೆ ಶ್ರಮಿಸಬೇಕೆಂದು ಕರೆ ನೀಡಿದರು.ಹಿಂದೆ ಹೆಬ್ಬಣಿ ಗ್ರಾಮದಲ್ಲಿ 220 ಕೆವಿ ವಿದ್ಯುತ್ ಘಟಕ ಸ್ಥಾಪನೆ ಮಾಡಲಾಗಿತ್ತು. ಪ್ರಸ್ತುತದಲ್ಲಿ 400 ಕೆ.ವಿ.ವಿದ್ಯುತ್ ಘಟಕ ಸ್ಥಾಪನೆಗೆ ಜಾಗ ನಿಗದಿ ನಿಗದಿಪಡಿಸುತ್ತಿರುವುದರಿಂದ ಈ ಭಾಗದಲ್ಲಿ ಕಾರ್ಖಾನೆಗಳು ಪ್ರಾರಂಭಿಸಲು ಹಲವು ಮಂದಿ ಮುಂದೆ ಬರುತ್ತಿದ್ದಾರೆ. ಸಾವಿರಾರು ಯುವಕರಿಗೆ ಉದ್ಯೋಗವು ಸಹ ದೊರೆಯಲಿದೆ. ಯೋಜನೆಯನ್ನು ರೈತರು ಸಮರ್ಪಕವಾಗಿ ಬಳಸಿಕೊಂಡು ಆಧುನಿಕ ಬೇಸಾಯಕ್ಕೆ ಹೆಚ್ಚು ಒತ್ತು ನೀಡಬೇಕೆಂದರು.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಭಿವೃದ್ಧಿ ಘಟಕದ 2.0 ಯೋಜನೆಯಡಿ ಬಿಜಿಪುರ ಹೋಬಳಿಯ 19 ಗ್ರಾಮಗಳ 6,450 ರೈತ ಫಲಾನುಭವಿಗಳಿಗೆ ಯೋಜನೆ ಸೌಲಭ್ಯ ಸಿಗಲಿದೆ. ಮಳೆಗಾಲ ಆರಂಭಗೊಂಡಿರುವ ರೈತರಿಗೆ ತೆಂಗು ಮಾವು ಸಪೋಟ ಸೀಬೆ ದಾಳಿಂಬಿ ನಿಂಬೆ ಹಲಸು, ಫ್ರೂಟ್, ಬಟರ್,ತೇಗ, ಮಹಾಗನಿ, ಹೆಬ್ಬೇವು, ಅಗಸೆ, ಜಂಬುನೇರಳೆ, ಹುಣಸೆ, ಮೇವು ಕತ್ತರಿಸುವ ಯಂತ್ರ, ರಬ್ಬರ್ ನೆಲಹಾಸು, ರಸಮೇವು ಉತ್ಪಾದನೆ ಚೀಲ, ಜೇನು ಅಭಿವೃದ್ಧಿ ಘಟಕ ಸೇರಿದಂತೆ ಹಲವು ಸವಲತ್ತುಗಳನ್ನು ಕೃಷಿ ಇಲಾಖೆ ನೀಡುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಮುನ್ನಡೆಯಬೇಕೆಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮನ್ಮುಲ್ ನಿರ್ದೇಶಕರಾದ ಕೃಷ್ಣೇಗೌಡ, ವಿಶ್ವಾಸ್, ಕೃಷಿ ಇಲಾಖೆ ಉಪ ಕೃಷಿ ನಿರ್ದೇಶಕ ಮುನ್ನೇಗೌಡ, ಎಸಿಎಫ್ ದಿನೇಶ್ ಕುಮಾರ್, ಸಹಾಯಕ ಕೃಷಿ ನಿರ್ದೇಶಕ ದೀಪಕ್, ಕೃಷಿ ಅಧಿಕಾರಿ ರಾಜೇಶ್, ಮನ್ಮುಲ್ ಉಪಾಧ್ಯಕ್ಷ ಕೃಷ್ಣೇಗೌಡ, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಸದಸ್ಯ ನಾಗರಾಜು, ಪಿಡಿಓ ಎನ್.ಎಂ.ಯಶಸ್ವಿನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಚೆಸ್ಕಾಂ ಎಇಇ ಪ್ರೇಮ್ ಕುಮಾರ್, ವಡ್ಡರಹಳ್ಳಿ ಸೊಸೈಟಿ ಅಧ್ಯಕ್ಷ ದೀಪು, ನಿರ್ದೇಶಕ ಮಂಚನಹಳ್ಳಿ ಸಿದ್ದರಾಜು, ಮುಖಂಡ ದೇವರಾಜು, ಸುರೇಶ್,ರವೀಂದ್ರ ಕುಮಾರ್, ಪಿಡಬ್ಲ್ಯೂಡಿ ಎಇಇ ಸೋಮಶೇಖರ್, ಬಬ್ರುವಾಹನ ಸೇರಿದಂತೆ ಹಲವರು ಹಾಜರಿದ್ದರು.