ದಾವಣಗೆರೆ: ಇಂದಿನ ದಿನಗಳಲ್ಲಿ ಮಹಿಳೆಯರು ಉದ್ಯೋಗ ಮಾಡುವುದು ಅನಿವಾರ್ಯವಾಗಿದ್ದು, ಇದಕ್ಕೆ ಪೂರಕವಾಗಿ ಮಹಿಳೆಯರು ಗೃಹ ಕೈಗಾರಿಕೆಗಳಲ್ಲಿ ತೊಡಗಿಕೊಳ್ಳಬೇಕೆಂದು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ತಿಳಿಸಿದರು.ಶನಿವಾರ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಆಶ್ರಯದಲ್ಲಿ ಶ್ರೀ ಐರಣಿ ಮಹಾಸಂಸ್ಥಾನ, ಹೊಳೆಮಠ, ಐರಣಿ ಇವರ ಸಂಯುಕ್ತಾಶ್ರಯದಲ್ಲಿ ಸ್ಫೂರ್ತಿ ನಗರ ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿರುವ ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
100 ದಿನಗಳ ಮಹಿಳಾ ಉಚಿತ ಸ್ವಯಂ ಉದ್ಯೋಗ ತರಬೇತಿ ಶಿಬಿರದಲ್ಲಿ ಟೆಕ್ಸ್ ಟೈಲ್ ಪ್ರಿಂಟಿಂಗ್ (ಸೀರೆ, ಚೂಡಿದಾರ), ಸ್ಟೀನ್ ಪ್ರಿಂಟಿಂಗ್ (ವಿಜಿಟಿಂಗ್ ಕಾರ್ಡ್, ಲಗ್ನ ಪತ್ರಿಕೆ, ಗ್ರೀಟಿಂಗ್ಸ್ ಮುದ್ರಣ)ವೆಲೆ ವೆಟ್ ಡಿಸೈನಿಂಗ್ (ಗೃಹ ಅಲಂಕಾರಿಕ ವಸ್ತುಗಳ ತಯಾರಿಕೆ), ಕ್ಲಾಥ್ ವಾಟರ್ ಪೂಫ್ ಪ್ರಿಂಟಿಂಗ್ (ನೀರನ್ನು ವಿರೋಧಿಸುವ ಬಟ್ಟೆಗಳ ಮೇಲೆ ಮುದ್ರಣ) ಮ್ಯಾಟ್ ಪ್ರಿಂಟಿಂಗ್ (ರೆಕ್ಟಿನ್ ಪರ್ಸ, ಹ್ಯಾಂಡ್ ಬ್ಯಾಗ್ಸ್, ಟೇಬಲ್ ಕ್ಲಾಥ್ ಮುದ್ರಣ) ಮಾನವೀಯ ಮೌಲ್ಯಗಳು ಹಾಗೂ ವ್ಯಕ್ತಿತ್ವ ವಿಕಸನ ಕುರಿತು ತರಬೇತಿ ನೀಡಲಾಯಿತು.
ತರಬೇತುದಾರ ಎಂ.ಗುಡ್ಡಪ್ಪ ತರಬೇತಿ ನೀಡಿ ಮಹಿಳೆಯರು ಇಂತಹ ತರಬೇತಿಗಳನ್ನು ಪಡೆದು ವೃತ್ತಿಯಾಗಿ ಪರಿವರ್ತಿಸಿಕೊಂಡು ಸಬಲರಾಗುವಂತೆ ತಿಳಿಸಿದರು.