ಕಿರಾಣಿ ಅಂಗಡಿಯಲ್ಲಿ ಬಿಯರ್-ಲಿಕ್ಕರ್‌ ಮಾರಾಟ ಒಪ್ಪಲಾಗದು

KannadaprabhaNewsNetwork |  
Published : Jun 19, 2026, 02:00 AM IST
ಒಕೆ.. ಕಿರಾಣಿ ಅಂಗಡಿಯಲ್ಲಿ ಬಿಯರ್-ಲಿಕ್ಕರ್‌ ಮಾರಾಟ ಒಪ್ಪಲಾಗದು | Kannada Prabha

ಸಾರಾಂಶ

ದಣಿದು ಬಂದ ಕೃಷಿ ಕೆಲಸಗಾರಿಗೆ ನೀಡಲು ಕಿರಾಣಿ ಅಂಗಡಿಯಲ್ಲಿ ಬಿಯರ್-ಲಿಕ್ಕರ್ ಇರಿಸಲಾಗಿತ್ತು ಎಂಬ ವಾದ ಕೇಳಿ ಅಚ್ಚರಿ ವ್ಯಕ್ತಪಡಿಸಿದ ಹೈಕೋರ್ಟ್, ‌ಪರವಾನಗಿ ಪಡೆಯದೆ, ಟೊಮೆಟೋ ಸಾಸ್ ಪಕ್ಕದಲ್ಲಿ ಲಿಕ್ಕರ್ ಇಟ್ಟು ಮಾರಾಟ ಮಾಡುವುದನ್ನು ಒಪ್ಪಲಾಗದು ಎಂದು ಹೇಳಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದಣಿದು ಬಂದ ಕೃಷಿ ಕೆಲಸಗಾರಿಗೆ ನೀಡಲು ಕಿರಾಣಿ ಅಂಗಡಿಯಲ್ಲಿ ಬಿಯರ್-ಲಿಕ್ಕರ್ ಇರಿಸಲಾಗಿತ್ತು ಎಂಬ ವಾದ ಕೇಳಿ ಅಚ್ಚರಿ ವ್ಯಕ್ತಪಡಿಸಿದ ಹೈಕೋರ್ಟ್, ‌ಪರವಾನಗಿ ಪಡೆಯದೆ, ಟೊಮೆಟೋ ಸಾಸ್ ಪಕ್ಕದಲ್ಲಿ ಲಿಕ್ಕರ್ ಇಟ್ಟು ಮಾರಾಟ ಮಾಡುವುದನ್ನು ಒಪ್ಪಲಾಗದು ಎಂದು ಹೇಳಿದೆ.

ಅಕ್ರಮವಾಗಿ ಮದ್ಯ ಮಾರಾಟ ಆರೋಪದ ಮೇಲೆ ತುಮಕೂರು ಜಿಲ್ಲೆಯ ಮಣಿಕುಪ್ಪೆ ಗ್ರಾಮದ ಯಶೋಧಮ್ಮ ವಿರುದ್ಧ ಗುಬ್ಬಿ ವಲಯದ ಅಬಕಾರಿ ಪೊಲೀಸರು ದಾಖಲಿಸಿದ್ದ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಿದೆ. ಪ್ರಕರಣ ಸಂಬಂಧ ತನ್ನ ವಿರುದ್ಧ ದಾಖಲಿಸಿರುವ ಎಫ್ಐಆರ್ ಹಾಗೂ ಅದಕ್ಕೆ ಸಂಬಂಧಿಸಿದ ಗುಬ್ಬಿಯ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ಕೋರ್ಟ್ ವಿಚಾರಣೆ ರದ್ದುಪಡಿಸುವಂತೆ ಕೋರಿ ಯಶೋಧಮ್ಮ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಮಧ್ಯಂತರ ಆದೇಶ ಮಾಡಿದೆ.‌ ಹಾಗೆಯೇ,‌ ಅರ್ಜಿಯಲ್ಲಿ ಪ್ರತಿವಾದಿಯಾದ ಅಬಕಾರಿ ಇಲಾಖೆ ಗುಬ್ಬಿ ವಲಯದ ಉಪ ನಿರೀಕ್ಷಕರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.‌

ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಅರ್ಜಿದಾರ‌ ಪರ ವಕೀಲೆ, ಅರ್ಜಿದಾರರ ವಿರುದ್ಧ ಅಬಕಾರಿ‌ ಇಲಾಖೆ ಅಡಿ ಪ್ರಕರಣ ದಾಖಲಿಸಲಾಗಿದೆ. 7.8 ಲೀಟರ್ ಬಿಯರ್ ಹಾಗೂ 22 ಲೀಟರ್ ವಿವಿಧ ಬಗೆಯ ಲಿಕ್ಕರ್ ವಶಪಡಿಸಿಕೊಂಡಿದ್ದಾರೆ. ಇವುಗಳನ್ನು ಕೃಷಿ ಕೆಲಸಗಾರರಿಗೆ ವಿತರಿಸಲು ಅರ್ಜಿದಾರರು ಇಟ್ಟುಕೊಂಡಿದ್ದರು ಎಂದರು.

ಈ ಉತ್ತರಕ್ಕೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿ, ಕೃಷಿ ಕೆಲಸಗಾರರು ಹೆಚ್ಚು ಕೆಲಸ ಮಾಡಲಿ ಎಂದು ಅರ್ಜಿದಾರರು ಬಯಸುತ್ತಿದ್ದಾರೆಯೇ, ಹಳ್ಳಿಗಳಿಂದ ಕೆಲಸಗಾರರು ಸುಸ್ತಾಗಿ ಬಂದವರಿಗೆ ಬಿಯರ್ ಕೊಡೋಣ ಅಂತಾನಾ? ಏನ್ರಿ ಇದೆಲ್ಲಾ? ಪರವಾನಗಿ ಪಡೆದಿದ್ದರೆ ಪರವಾಗಿರಲಿಲ್ಲ. ಆದರೆ, ಟೊಮೆಟೋ ಸಾಸ್ ಪಕ್ಕ ಲಿಕ್ಕರ್ ಇಟ್ಟು ಮಾರಾಟ ಮಾಡಲು ಆಗುವುದಿಲ್ಲ. ಇದು ಅಬಕಾರಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ನ್ಯಾಯಮೂರ್ತಿ ಹೇಳಿದರು.

ಅರ್ಜಿದಾರರ ಪರ ವಕೀಲೆ, ಸ್ವಾಮಿ ಪ್ರಕರಣದಲ್ಲಿ ಪೊಲೀಸರು ಅಬಕಾರಿ ಕಾಯ್ದೆ ಸೆಕ್ಷನ್ 53 ಅನ್ನು ದಾಳಿ ಮಾಡಲು (ಮ್ಯಾಜಿಸ್ಟ್ರೇಟ್ ಕೋರ್ಟ್ ನಿಂದ ಶೋಧನಾ ವಾರೆಂಟ್ ಪಡೆಯದಿರುವುದು) ಪಾಲಿಸಿಲ್ಲ ಎಂದು ಸಮಜಾಯಿಷಿ ನೀಡಿದರು. ಆಗ ನ್ಯಾಯಮೂರ್ತಿ ಸತ್ಯ ಹೇಳಬೇಕು. ಇಷ್ಟೊಂದು ಸತ್ಯ ಹೇಳಬಾರದು ಎಂದು ನಗಾಡಿದರಲ್ಲದೆ, ಈ ಆರೋಪವು ದೂರಿನಲ್ಲಿಲ್ಲ. ಪ್ರಾವಿಷನ್ ಸ್ಟೋರ್‌ನಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿತ್ತು ಎಂದಷ್ಟೇ ಉಲ್ಲೇಖಿಸಲಾಗಿತ್ತು. ಅರ್ಜಿದಾರರ ಪರ ವಕೀಲರು ಈಗ ನಿಜ ಹೇಳಿದ್ದಾರೆ ಎಂದರು.

ನಂತರ ಪ್ರಕರಣದಲ್ಲಿ ಪೊಲೀಸರು ಅಬಕಾರಿ ಕಾಯ್ದೆ ಸೆಕ್ಷನ್ 53 ಪಾಲಿಸಿಲ್ಲ ಎಂಬ ಆಧಾರದಲ್ಲಿ ಅರ್ಜಿದಾರರ ವಿರುದ್ಧದ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದ ನ್ಯಾಯಮೂರ್ತಿಗಳು. ಪ್ರಾವಿಷನ್ ಸ್ಟೋರ್‌ನಲ್ಲಿ ಲಿಕ್ಕರ್ ಮತ್ತೆ ಇಡಬೇಡಿ ಎಂದು ಸೂಚಿಸಿ ಅರ್ಜಿ ವಿಚಾರಣೆ ಮುಂದೂಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಲ್ಕಿಯ ಸುದೀರ್ಘ ಇತಿಹಾಸ ಬಿಂಬಿಸುವ ದಿ ಲ್ಯಾಂಪ್‌ ಬೆರರ್ಸ್‌ ಕೃತಿ
ಅಳ್ನಾವರಕ್ಕೆ ಬೇಕು ಶರವೇಗದ ಅಭಿವೃದ್ಧಿ ಭಾಗ್ಯ!