ದಾಂಡೇಲಿ: ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಯುಗದಲ್ಲಿ ಸ್ವ ಉದ್ಯೋಗಕ್ಕೆ ವಿಫುಲವಾದ ಅವಕಾಶಗಳಿವೆ. ಈ ಅವಕಾಶವನ್ನು ಯುವಜನತೆ ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗಿ ರಾಜ್ಯ, ರಾಷ್ಟ್ರದ ಆರ್ಥಿಕ ಕ್ಷೇತ್ರದ ಬಲವರ್ಧನೆಗೆ ನೆರವಾಗಬೇಕು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂತೋಷ ಚವ್ಹಾಣ ತಿಳಿಸಿದರು.ಮಂಗಳವಾರ ನಗರದ ಕರ್ನಾಟಕ ಸಂಘದ ಪಂಚಗಾನ ಭವನದಲ್ಲಿ ನಿರುದ್ಯೋಗದ ಚಿಂತೆ ಬಿಡಿ ಸ್ವ- ಉದ್ಯೋಗಕ್ಕೆ ಆದ್ಯತೆ ಕೊಡಿ ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಸ್ವ ಉದ್ಯೋಗ ಮಾಹಿತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯು ಯುವಜನತೆಗೆ ಸ್ವ ಉದ್ಯೋಗದ ತರಬೇತಿಯನ್ನು ನೀಡಿ ಸ್ವಾವಲಂಬನೆಯ ಜೀವನ ನಡೆಸಲು ಮಹತ್ವದ ದಾರಿ ಮಾಡಿಕೊಟ್ಟಿರುವುದು ಶ್ಲಾಘನೀಯವಾಗಿದೆ ಎಂದರು.
ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಲೋಕೇಶ ಜೆ.ಡಿ. ಮಾತನಾಡಿ, ಸ್ವಂತ ಉದ್ಯೋಗದಲ್ಲಿ ಸಿಗುವ ನೆಮ್ಮದಿ ಉದ್ಯೋಗದಿಂದ ಸಿಗದು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯ ನಿರ್ದೇಶಕ ಪ್ರಶಾಂತಕುಮಾರ ಮಾತನಾಡಿ, ಸಂಸ್ಥೆಯಲ್ಲಿ ಅತಿ ಅವಶ್ಯವಾಗಿ ಮತ್ತು ಯುವಜನತೆಗೆ ಉಪಯುಕ್ತವಾಗುವ ಸ್ವ ಉದ್ಯೋಗ ತರಬೇತಿಗಳನ್ನು ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕೋರಿದರು.ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥಾಪಕ ನಿರ್ದೇಶಕ, ಹಿರಿಯ ಸಲಹೆಗಾರ ಅನಂತಯ್ಯ ಆಚಾರ ಮಾತನಾಡಿದರು. ಮಾನಸಿಂಗ್ ರಾಠೋಡ, ಹಸನ ಬಾಷಾ, ರೀಯಾಜ ಬಿಡಿಕರ ಮೊದಲಾದವರು ಉಪಸ್ಥಿತರಿದ್ದರು.
13ರಂದು ಬಾಂಗ್ಲಾ ದೌರ್ಜನ್ಯ ಖಂಡಿಸಿ ಭಟ್ಕಳದಲ್ಲಿ ಪ್ರತಿಭಟನೆ
ಭಟ್ಕಳ: ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಲೂಟಿ, ಮಹಿಳೆಯರ ಅತ್ಯಾಚಾರ, ಸನ್ಯಾಸಿಗಳ ಬಂಧನ ಸೇರಿದಂತೆ ಅಲ್ಲಿನ ಮುಸ್ಲಿಮರ ಕ್ರೌರ್ಯವನ್ನು ಖಂಡಿಸಿ ಸಮಸ್ತ ಹಿಂದೂ ಸಮಾಜ ಒಗ್ಗಟ್ಟಾಗಿ ಡಿ. ೧೩ರಂದು ಸಂಜೆ ೪ ಗಂಟೆಗೆ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ಮತ್ತು ಬೃಹತ್ ಸಮಾವೇಶ ಏರ್ಪಡಿಸಿದೆ ಎಂದು ವಿಶ್ವ ಹಿಂದೂ ಪರಿಷತ್ ತಾಲೂಕು ಆಧ್ಯಕ್ಷ ರಾಮಕೃಷ್ಣ ನಾಯ್ಕ ತಿಳಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಪಟ್ಟಣದ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಸನಿಹದಲ್ಲಿರುವ ಸಭಾಮಂಟಪದಿಂದ ಮೆರವಣಿಗೆಯಲ್ಲಿ ಬಂದು ಹಳೇ ತಹಸೀಲ್ದಾರ್ ಕಚೇರಿಯಲ್ಲಿರುವ ರಿಕ್ಷಾ ಚಾಲಕರ ಗಣೇಶೋತ್ಸವ ಮೈದಾನದಲ್ಲಿ ಸಭೆ ಸೇರಲಿದ್ದಾರೆ ಎಂದರು.ಅಂದು ನಡೆಯುವ ಸಮಾವೇಶದಲ್ಲಿ ವಜೃದೇಹಿ ಸಂಸ್ಥಾನದ ರಾಜಶೇಖರಾನಂದ ಸ್ವಾಮೀಜಿಯವರು ಮುಖ್ಯ ವಕ್ತಾರರಾಗಿ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಗೋವಿಂದ ಎನ್. ಖಾರ್ವಿ ವಹಿಸಲಿದ್ದಾರೆಂದರು.ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ತಾಲೂಕಾಧ್ಯಕ್ಷ ಜಯಂತ ನಾಯ್ಕ ಬೆಣಂದೂರು, ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಗೋವಿಂದ ಖಾರ್ವಿ, ಭಾಸ್ಕರ ಆಚಾರ್ಯ, ಬಜರಂಗದಳದ ಸಂಯೋಜಕ ದೀಪಕ್ ಎಂ. ನಾಯ್ಕ, ಹಿಂದೂ ಸಂಘಟನೆಗಳ ಪ್ರಮುಖರಾದ ಶಿವಾನಂದ ದೇವಡಿಗ, ಮೋಹನ ಶಿರಾಲಿಕರ್, ರಾಮನಾಥ ಬಳೇಗಾರ, ನಾಗೇಶ ನಾಯ್ಕ, ಕುಮಾರ ನಾಯ್ಕ, ಪ್ರಮೋದ ಜೋಶಿ, ರಾಘವೇಂದ್ರ ನಾಯ್ಕ, ಜಗದೀಶ ಮಹಾಲೆ ಮುಂತಾದವರಿದ್ದರು.