ಚಿಕ್ಕೋಡಿ : ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿರುವ ವಕ್ಫ್ ಆಸ್ತಿ ವಿವಾದ ಈಗ ವಕ್ಫ್ ಖಾತೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಕುಟುಂಬವನ್ನೂ ಆವರಿಸಿಕೊಂಡಿದೆ. ಶಶಿಕಲಾ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಪುತ್ರನಿಗೆ ಸೇರಿದ ಯಕ್ಸಂಬಾದ 2 ಎಕ್ರೆ 13 ಗುಂಟೆ ಜಮೀನು ಪಹಣಿಯಲ್ಲೂ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ಇದೀಗ ಬೆಳಕಿಗೆ ಬಂದಿದೆ.
ಚಿಕ್ಕೋಡಿ ತಾಲೂಕಿನ ಯಕ್ಸಂಬಾದಲ್ಲಿರುವ ಯುವ ಉದ್ಯಮಿ ಬಸವಪ್ರಭು ಅಣ್ಣಾಸಾಹೇಬ ಜೊಲ್ಲೆ ಅವರ ಸರ್ವೇ ನಂ.337ರಲ್ಲಿರುವ 2 ಎಕರೆ 13 ಗುಂಟೆ ಜಮೀನು ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಉಲ್ಲೇಖವಾಗಿದೆ. ಆದರೆ ವಕ್ಫ್ ಬೋರ್ಡ್ನಿಂದ ಯಾವುದೇ ನೋಟಿಸ್ ಜಾರಿಯಾಗಿಲ್ಲ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಅಜ್ಜನ ಕಾಲದಿಂದಲೂ ಈ ಜಮೀನು ನಮ್ಮ ಬಳಿ ಇದೆ. ಇದೀಗ ದಿಢೀರ್ ಆಗಿ ಪಹಣಿಯಲ್ಲಿ ವಕ್ಫ್ ಹೆಸರು ಸೇರಿಸಲಾಗಿದೆ. ಈ ಕುರಿತು ಈಗಾಗಲೇ ರೈತರು ತೀವ್ರ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.
ನಮ್ಮ ಜಮೀನಿನ ಅಕ್ಕಪಕ್ಕ ದರ್ಗಾವಾಗಲಿ, ಮಸೀದಿಯಾಗಲಿ ಇಲ್ಲ. ಆದರೂ 2020ರ ನಂತರ ಪಹಣಿಯಲ್ಲಿ ಏಕಾಏಕಿ ವಕ್ಫ್ ಹೆಸರು ಸೇರ್ಪಡೆಯಾಗಿದೆ. ದಿಢೀರ್ ಈ ರೀತಿ ಹೇಗೆ ವಕ್ಫ್ ಹೆಸರು ಸೇರ್ಪಡೆ ಮಾಡುತ್ತಾರೆ? ಯಾವ ಪ್ರಕಾರದ ಕಾಯ್ದೆ ಇದು? ಇದೊಂದು ಹುಚ್ಚಾಟವಲ್ಲದೆ ಬೇರೇನೂ ಅಲ್ಲ ಎಂದು ಕಿಡಿಕಾರಿದರು.
ಆತ್ಮೀಯರೊಬ್ಬರು ಕರೆ ಮಾಡಿ ನಿಮ್ಮ ಆಸ್ತಿಯಲ್ಲಿ ವಕ್ಫ್ ಹೆಸರು ಇದೆ ಎಂದು ತಿಳಿಸಿದಾಗ ಕೂಡಲೇ ಪಹಣಿ ಪರಿಶೀಲಿಸಿದ್ದೇನೆ. ಆಗ ಅದರಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ಬೆಳಕಿಗೆ ಬಂದಿದೆ. ಇದು ನಮ್ಮ ಪಿತ್ರಾರ್ಜಿತ ಆಸ್ತಿ. ಸರ್ಕಾರ ಈ ರೀತಿ ರೈತರ, ಸಾರ್ವಜನಿಕರ ಆಸ್ತಿಗಳ ಮೇಲೆ ವಕ್ಫ್ ಬೋರ್ಡ್ ಹೆಸರು ಸೇರಿಸಿರುವುದು ಖಂಡನಾರ್ಹ. ಇದರ ವಿರುದ್ಧ ಹೋರಾಟ ನಡೆಸುತ್ತೇವೆ.
- ಬಸವಪ್ರಸಾದ ಅಣ್ಣಾಸಾಹೇಬ ಜೊಲ್ಲೆ, ಯುವ ಉದ್ಯಮಿ, ಯಕ್ಸಂಬಾ