ಬಳ್ಳಾರಿ ಬ್ಯಾನರ್ ಗಲಾಟೆ; ಪರಿಸ್ಥಿತಿ ಶಾಂತವಾಗಿಸಿದ ಸರ್ಕಾರದ ನಿರ್ಧಾರ

KannadaprabhaNewsNetwork |  
Published : Jan 03, 2026, 02:15 AM IST
ಸ | Kannada Prabha

ಸಾರಾಂಶ

ರಾಜ್ಯ ಸರ್ಕಾರ ಸೂಕ್ತ ನಿಲುವು ತೆಗೆದುಕೊಂಡು ಸ್ಥಳೀಯರ ಆತಂಕವನ್ನು ದೂರ ಮಾಡಿದೆ

ಬಳ್ಳಾರಿ: ಇಡೀ ರಾಜ್ಯದ ಗಮನ ಸೆಳೆದ ಬಳ್ಳಾರಿಯ ಬ್ಯಾನರ್ ಗಲಾಟೆ ಘರ್ಷಣೆ ಹಿನ್ನೆಲೆಯಲ್ಲಿ ಶನಿವಾರ ನಡೆಯಬೇಕಿದ್ದ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಮುಂದೂಡುವ ಮೂಲಕ ರಾಜ್ಯ ಸರ್ಕಾರ ಇಡೀ ಪ್ರಕರಣವನ್ನು ಸೂಕ್ಷ್ಮವಾಗಿ ನಿಭಾಯಿಸಿದೆ.

ಶನಿವಾರ ಸಂಜೆ ವೇಳೆಗೆ ಪುತ್ಥಳಿ ಅನಾವರಣ ಸಮಾರಂಭ ನಡೆಸಲು ಕಾಂಗ್ರೆಸ್ ಮುಖಂಡರು ಹಾಗೂ ವಾಲ್ಮೀಕಿ ಸಮಾಜದವರು ಸಿದ್ಧತೆ ಮಾಡಿಕೊಳ್ಳುವ ಹೊತ್ತಿನಲ್ಲಿಯೇ ರಾಜ್ಯ ಸರ್ಕಾರ ಸೂಕ್ತ ನಿಲುವು ತೆಗೆದುಕೊಂಡು ಸ್ಥಳೀಯರ ಆತಂಕವನ್ನು ದೂರ ಮಾಡಿದೆ.

ಗುರುವಾರ ಸಂಜೆಯಿಂದಲೇ ಶುರುಗೊಂಡ ಬ್ಯಾನರ್ ತೆರವು ಗಲಾಟೆ ರಾತ್ರಿ ವೇಳೆಗೆ ಘರ್ಷಣೆಯಾಗಿ ಮಾರ್ಪಟ್ಟಿತು. ಎರಡು ಗುಂಪಿನ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರು ದೊಣ್ಣೆಗಳನ್ನು ಹಿಡಿದು ಬಂದರಲ್ಲದೆ, ಕಲ್ಲು ತೂರಾಟ, ಖಾರದಪುಡಿ ಎರಚುವಿಕೆ ಮೂಲಕ ಉದ್ವಿಗ್ನತೆ ಸೃಷ್ಟಿಸಿದರು. ಶಾಸಕ ಭರತ್ ರೆಡ್ಡಿ ತಡರಾತ್ರಿವರೆಗೆ ಜನಾರ್ದನ ರೆಡ್ಡಿ ಮನೆ ಎದುರು ಕುಳಿತುಕೊಳ್ಳುವ ಮೂಲಕ ಬಂಧನಕ್ಕೆ ಪಟ್ಟು ಹಿಡಿದಿದ್ದರು. ಈ ಎಲ್ಲ ಬೆಳವಣಿಗೆ ನಗರದ ಜನರನ್ನು ಆತಂಕಕ್ಕೆ ದೂಡಿತ್ತು.

ಈ ನಡುವೆ ಶುಕ್ರವಾರ ಬೆಳಗ್ಗೆ ಸಂಘಟಕರು ಮತ್ತು ಶಾಸಕ ನಾರಾ ಭರತ್‌ ರೆಡ್ಡಿ ನಿಗದಿಯಂತೆ ಶನಿವಾರ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿ ಸಿದ್ಧತೆಗೆ ಮುಂದಾದಾಗ ಮತ್ತೆ ಬಳ್ಳಾರಿಗರಲ್ಲಿ ಆತಂಕ ಮನೆ ಮಾಡಿತ್ತು. ಪುತ್ಥಳಿ ಅನಾವರಣ ವೇಳೆ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ಸಾಧ್ಯತೆ ಇರುವುದರಿಂದ ಮತ್ಯಾವ ಗಲಾಟೆ ಸಂಭವಿಸುವುದೋ ಎಂಬ ಭೀತಿ ಮೂಡಿಸಿತ್ತು.

ಏತನ್ಮಧ್ಯೆ, ಖಾಸಗಿ ಗನ್‌ಮ್ಯಾನ್‌ಗಳ ಗುಂಡಿನ ದಾಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ರೆಡ್ಡಿ ಎಂಬ ಯುವಕ ಮೃತಪಟ್ಟಿದ್ದರೂ ಕಾರ್ಯಕ್ರಮ ಮುಂದೂಡುವ ಯಾವ ಯೋಚನೆ ಪಕ್ಷದ ಮುಖಂಡರಲ್ಲಿ ಕಂಡು ಬರಲಿಲ್ಲ. ಗುಂಪು ಘರ್ಷಣೆ ಪ್ರಕರಣ ಕೈ-ಕಮಲ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಯಿತಲ್ಲದೆ, ಘಟನೆಗೆ ಹೊಣೆ ಹೊತ್ತುಕೊಳ್ಳುವವರು ಯಾರು ? ಎಂಬ ಪ್ರಶ್ನೆ ಮೂಡಿತು.

ಇದಲ್ಲದೆ, ಎರಡೂ ಕಡೆಯಿಂದ ಪರಸ್ಪರ ದೂರು ದಾಖಲಾಗಿ, ಬಿಗುವಿನ ವಾತಾವರಣವನ್ನು ಜೀವಂತವಾಗಿರಿಸಿತು. ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ರೆಡ್ಡಿ ಸಾವಿಗೆ ಸಂಬಂಧಿಸಿದಂತೆ ನಗರದ ಬ್ರೂಸ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಒಂದು ದೂರು ಬಳ್ಳಾರಿ ನಗರ ಡಿವೈಎಸ್‌ಪಿ ಚಂದ್ರಕಾಂತ ನಂದಾ ರೆಡ್ಡಿ ಅವರ ದೂರಿನ ಆಧಾರದಲ್ಲಿ ಒಂದು ಸ್ವಯಂ ಪ್ರೇರಿತ ಪ್ರಕರಣ ದಾಖಲಾಯಿತು.

ಬಳ್ಳಾರಿಯಲ್ಲಿನ ಪರಿಸ್ಥಿತಿಯ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಸಮರ್ಪಕ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಬಳ್ಳಾರಿಯ ಪುತ್ಥಳಿ ಅನಾವರಣ ಕಾರ್ಯಕ್ರಮ ಮುಂದೂಡುವ ನಿರ್ಧಾರ ಕೈಗೊಂಡಿರುವುದು ಸ್ಥಳೀಯರಲ್ಲಿ ನಿರಮ್ಮಳ ಮೂಡಿಸಿದೆ. ಸದ್ಯ ಬಳ್ಳಾರಿಯಲ್ಲಿ ಬ್ಯಾನರ್ ತೆರವು ಪ್ರಕರಣದ ಗಲಾಟೆ ವಿಚಾರ ಬೂದಿ ಮುಚ್ಚಿದ ಕೆಂಡಂತಿದ್ದು, ಪರಿಸ್ಥಿತಿ ತಿಳಿಗೊಂಡ ಬಳಿಕವೇ ಕಾರ್ಯಕ್ರಮ ನಿಗದಿ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.

ಈ ಮಧ್ಯೆ ಗುರುವಾರ ರಾತ್ರಿಯೇ ದಾವಣಗೆರೆ, ಚಿತ್ರದುರ್ಗ, ವಿಜಯನಗರ ಸೇರಿದಂತೆ ವಿವಿಧೆಡೆಯಿಂದ ಹೆಚ್ಚಿನ ಪೊಲೀಸ್‌ ಪಡೆಯನ್ನು ಕರೆಯಿಸಿಕೊಳ್ಳಲಾಯಿತು. ದಾವಣಗೆರೆ ವಲಯ ಐಜಿಪಿ ರವಿಕಾಂತೇಗೌಡ ಸಹ ಸ್ಥಳಕ್ಕೆ ಆಗಮಿಸಿದರು. ಬೆಂಗಳೂರಿನಿಂದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಹಿತೇಂದ್ರ ಸಹ ಸ್ಥಳಕ್ಕೆ ಆಗಮಸಿದರು. ಪರಿಸ್ಥಿತಿ ನಿಭಾಯಿಸಿದರು.

ಎಲ್ಲೆಡೆ ಪೊಲೀಸ್‌ ಬಂದೋಬಸ್ತ್ ಏರ್ಪಡಿಸುವ ಜೊತೆಗೆ ಜನಜೀವನ ಸಹಜ ಸ್ಥಿತಿಗೆ ಬರುವಂತೆ ಮಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಳ್ಳಾರಿಗೆ ಆಗಮಿಸಿ ಪಕ್ಷದ ನಾಯಕರ ಜೊತೆ ಚರ್ಚಿಸಿದರು. ಹಾಗೂ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ವಿಚಾರಿಸಿದರು. ಕಾಂಗ್ರೆಸ್‌ ಸರ್ಕಾರ, ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.

ಇತ್ತ ಜನಾರ್ದನ ರೆಡ್ಡಿ, ಶ್ರೀರಾಮುಲು ಅವರು ಸುದ್ದಿಗೋಷ್ಠಿ ನಡೆಸಿ ಘಟನೆಯಲ್ಲಿ ತಮ್ಮ ಕೈವಾಡ ಇಲ್ಲ, ಗುಂಡಿನ ದಾಳಿಗೆ ಶಾಸಕರ ಆಪ್ತನ ಗನ್‌ ಮ್ಯಾನಗಳೇ ಕಾರಣ ಎಂದು ಆರೋಪಿಸಿದರಲ್ಲದೇ ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಆಗ್ರಹಿಸಿದರು. ತಮ್ಮ ಹತ್ಯೆಯೇ ಅವರ ಮುಖ್ಯ ಉದ್ದೇಶವಾಗಿತ್ತೆಂದು ರೆಡ್ಡಿ ಆರೋಪಿಸಿದರು.

ಶಾಸಕ ನಾರಾ ಭರತ ರೆಡ್ಡಿ ಅವರ ಚಿಕ್ಕಪ್ಪ ಪ್ರತಾಪ ರೆಡ್ಡಿ ಸಹ ಜನಾರ್ದನ ರೆಡ್ಡಿ, ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿ ಗನಮ್ಯಾನ್‌ ಸಂಸ್ಕೃತಿ ತಂದಿದ್ದೇ ಅವರೆಂದು ದೂರಿದರು. ಒಟ್ಟಿನಲ್ಲಿ ರಾಜಕೀಯ ಕೆಸರೆರಚಾಟ ಜೋರಾಗಿ ಮುಂದುವರಿದಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಡೂರು ತಾಲೂಕು ಕಂದಾಯ ಇಲಾಖೆ ಪ್ರಗತಿ: ಸಿ.ಎಸ್.ಪೂರ್ಣಿಮಾ
ತ್ಯಾಜ್ಯ ನಿರ್ವಹಣೆ ವಿಶೇಷ ಜಾಗೃತಿಯ ವಿವಿಧ ಕಾರ್ಯಕ್ರಮ