ಬಳ್ಳಾರಿ ಖಬರಸ್ಥಾನ ಆಸ್ತಿ ಕಬಳಿಕೆ; ಪಾಲಿಕೆ ಆಯುಕ್ತರ ಮೇಲೆ ಸದಸ್ಯರ ಶಂಕೆ

KannadaprabhaNewsNetwork |  
Published : Feb 24, 2026, 03:15 AM IST
ಪಾಲಿಕೆ ಸಾಮಾನ್ಯ ಸಭೆ | Kannada Prabha

ಸಾರಾಂಶ

ಖಬರಸ್ಥಾನ ಆಸ್ತಿಗೆ ನಕಲು ದಾಖಲೆ ಸೃಷ್ಟಿಸಿ ಮಾರಾಟ ಮಾಡಲು ಕಂದಾಯ ಅಧಿಕಾರಿಯೇ ಕಾರಣರಾಗಿದ್ದಾರೆ.

ಬಳ್ಳಾರಿ: ನಗರದ ಖಬರಸ್ಥಾನ ಆಸ್ತಿಯ ಕಬಳಿಕೆಗೆ ಆಸ್ಪದ ಮಾಡಿಕೊಟ್ಟಿರುವ ಪಾಲಿಕೆಯ ಕಂದಾಯ ಇಲಾಖೆ ಉಪ ಆಯುಕ್ತ ನಂದೀಶ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಆಡಳಿತರೂಢ, ಪ್ರತಿಪಕ್ಷ ಸದಸ್ಯರು ಪಟ್ಟುಹಿಡಿದ ಪ್ರಸಂಗ ಇಲ್ಲಿನ ಜಿಪಂ ನಜೀರ್ ಸಭಾಂಗಣದಲ್ಲಿ ಸೋಮವಾರ ಜರುಗಿದ ನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಖಬರಸ್ಥಾನ ಆಸ್ತಿಗೆ ನಕಲು ದಾಖಲೆ ಸೃಷ್ಟಿಸಿ ಮಾರಾಟ ಮಾಡಲು ಕಂದಾಯ ಅಧಿಕಾರಿಯೇ ಕಾರಣರಾಗಿದ್ದಾರೆ. ಅವರ ಲಾಗಿನ್ ಮೂಲಕವೇ ಭೂ ಕಬಳಿಕೆಯ ಕೃತ್ಯ ನಡೆದಿದೆ ಎಂದು ಗೊತ್ತಾಗಿಯೂ ಎಫ್‌ಐಆರ್‌ನಲ್ಲಿ ಅವರ ಹೆಸರು ಸೇರಿಸಿಲ್ಲ. ಅವರ ವಿರುದ್ಧ ಮುಂದಿನ ಕ್ರಮ ಜರುಗಿಸುವ ಯಾವ ನಿಲುವು ಸಹ ತೆಗೆದುಕೊಂಡಿಲ್ಲ ಏಕೆ ಎಂದು ಸದಸ್ಯರು ಸಭೆಯಲ್ಲಿ ಗದ್ದಲ ಎಬ್ಬಿಸಿದರು. ಆಸ್ತಿ ಕಬಳಿಕೆಯ ಹಿಂದೆ ಆಯುಕ್ತ ಪಿ.ಎಸ್.ಮಂಜುನಾಥ ಕೈವಾಡ ಇರುವ ಶಂಕೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಹಾಜರಿದ್ದ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ಪಾಲಿಕೆ ಆಯುಕ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ನಿಮಗೆ ಮಾಹಿತಿ ಇಲ್ಲದೇ ಸರ್ಕಾರದ ಆಸ್ತಿ ಹೇಗೆ ಕಬಳಿಕೆ ಆಗಲು ಸಾಧ್ಯ? ಎಂದು ಪ್ರಶ್ನಿಸಿದರು.

ಘಟನೆ ನಡೆದು 15 ದಿನಗಳಾದರೂ ಪ್ರಕರಣ ದಾಖಲಾಗಿಲ್ಲ. ನಾನೇ ಪೊಲೀಸರ ಜೊತೆ ಮಾತಾಡಿ ಪ್ರಕರಣ ದಾಖಲಿಸಿದೆ. ಇಷ್ಟಾಗಿಯೂ ತಪ್ಪಿತಸ್ಥರನ್ನು ಅಮಾನತು ಮಾಡಿಲ್ಲ. ನಿಮ್ಮ ನಡೆ ಅನುಮಾನಕ್ಕೆಡೆ ಮಾಡಿಕೊಡುತ್ತಿದೆ. ನೀವು ಅಪರ ಜಿಲ್ಲಾಧಿಕಾರಿ ಮಟ್ಟದ ಅಧಿಕಾರಿಯಾಗಿ ಪಾಲಿಕೆ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದಾದರೆ ಹೇಗೆ? ಎಂದು ಪ್ರಶ್ನಿಸಿದರು. ವಕ್ಫ್ ಆಸ್ತಿಯನ್ನೇ ಕಬಳಿಸಿದರೂ ಸುಮ್ಮನಿದ್ದೀರಿ ಎಂದಾದರೆ ಇನ್ನು ಪಾಲಿಕೆ ವ್ಯಾಪ್ತಿಯ ಅದೆಷ್ಟೋ ಸರ್ಕಾರಿ ಆಸ್ತಿ ಮಾಯವಾಗಿದೆಯೋ ನೋಡಬೇಕು ಎಂದರು.

ಸರ್ಕಾರಿ ಆಸ್ತಿ ಕಬಳಿಸುವ ಟೀಮ್‌ ಬಳ್ಳಾರಿಯಲ್ಲಿ ಕೆಲಸ ಮಾಡುತ್ತಿದೆ. ಇದು ನಿಮಗೆ ಗೊತ್ತಿಲ್ಲವೇ? ಕಂದಾಯ ಅಧಿಕಾರಿ ಲಾಗಿನ್‌ನಿಂದಲೇ ಭೂ ಕಬಳಿಕೆಯಾಗಿದೆ ಎಂದು ಗೊತ್ತಿದ್ದೂ ಈವರೆಗೆ ಯಾಕೆ ಸುಮ್ಮನಿದ್ದೀರಿ? ಎಂದು ತರಾಟೆಗೆ ತೆಗೆದುಕೊಂಡರು.

ಪ್ರತಿಪಕ್ಷದ ನಾಯಕ ಶ್ರೀನಿವಾಸ ಮೋತ್ಕರ್ ಹಾಗೂ ಬಿಜೆಪಿ ಸದಸ್ಯ ಇಬ್ರಾಹಿಂ ಬಾಬು ಮಾತನಾಡಿ, ಪಾಲಿಕೆಯ ಕಂದಾಯ ಇಲಾಖೆ ನಕಲಿ ರಸೀದಿ ನೀಡುತ್ತಿದೆ. ಕೋಟ್ಯಂತರ ರು. ಅವ್ಯವಹಾರ ನಡೆದಿರುವ ಶಂಕೆಯಿದೆ. ಕಂದಾಯ ಅಧಿಕಾರಿಗಳು, ಸಿಬ್ಬಂದಿ ಯಾರ ಹಿಡಿತದಲ್ಲಿಲ್ಲ. ಖಬರಸ್ಥಾನ ಭೂ ಕಬಳಿಕೆ ಪ್ರಕರಣ ಸೇರಿದಂತೆ ಇತರೆ ಭೂ ಕಬಳಿಕೆ ಪ್ರಕರಣಗಳು ಇದಕ್ಕೆ ಸಾಕ್ಷಿ. ಪಾಲಿಕೆ ನಿದ್ರಾವಸ್ಥೆಯಲ್ಲಿರುವುದರಿಂದ ಈ ರೀತಿಯ ಕೃತ್ಯಗಳು ನಡೆಯುತ್ತಿವೆ. ಇದರಿಂದ ಅಮಾಯಕರು ಬಲಿಯಾಗುತ್ತಿದ್ದಾರೆ. ಪಾಲಿಕೆಗೆ ₹70 ರಿಂದ 80 ಕೋಟಿ ತೆರಿಗೆ ಬರಬೇಕು. ಆದರೆ, ಬರೀ ₹30 ರಿಂದ 35 ಕೋಟಿಯಷ್ಟೇ ಬರುತ್ತಿದೆ ಎಂದರೆ ಎಷ್ಟರಮಟ್ಟಿಗೆ ಅವ್ಯವಹಾರ ನಡೆದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಬರಸ್ಥಾನ ಕಬಳಿಕೆ ಪ್ರಕರಣದಲ್ಲಿ ಅಮಾಯಕ ಸಿಬ್ಬಂದಿ ವಿರುದ್ಧ ಎಫ್ಐಆರ್ ಆದರೆ ಸುಮ್ಮನಿರುವುದಿಲ್ಲ. ಅಧಿಕಾರಿಗಳ ತಲೆದಂಡವಾಗಬೇಕು ಎಂದು ಸಭೆಯಲ್ಲಿದ್ದ ಶಾಸಕ ನಾರಾ ಭರತ್ ರೆಡ್ಡಿ ಎಚ್ಚರಿಸಿದರು.

ಶಾಸಕರು, ಸಂಸದರು ತಿಂಗಳಿಗೊಮ್ಮೆ ಪಾಲಿಕೆ ಸಭೆ ನಡೆಸಿದರೆ ಈ ರೀತಿಯಾಗುವುದಿಲ್ಲ. ಆದರೆ, ಯಾವ ಸಭೆಗಳು ನಡೆಯದಿರುವುದೇ ಪಾಲಿಕೆ ಅವ್ಯವಸ್ಥೆಗೆ ಕಾರಣ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು.

ಸಭೆಯಲ್ಲಿ ಹಾಜರಿದ್ದ ಪಾಲಿಕೆಯ ಕಂದಾಯ ಇಲಾಖೆ ಉಪ ಆಯುಕ್ತ ನಂದೀಶ್ ಅವರನ್ನು ಸಭೆಯಿಂದ ಹೊರ ಕಳಿಸಿದ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ಕ್ರಿಮಿನಲ್ ಕೃತ್ಯ ಎಸಗಿದವರನ್ನು ಸಭೆಗೆ ಏಕೆ ಕರೆಸಿದಿರಿ ಎಂದು ಆಯುಕ್ತರನ್ನು ಪ್ರಶ್ನಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿ ಈ ಹಿಂದೆ ಆಗಿರುವ ಹಾಗೂ ಈಚೆಗೆ ನಡೆದಿರುವ ಭೂ ಕಬಳಿಕೆ ಪ್ರಕರಣ ಸಂಬಂಧಿಸಿ ತನಿಖಾ ಸಮಿತಿ ರಚಿಸಲಾಗುವುದು ಎಂದು ಸಭೆಯಲ್ಲಿ ಹಾಜರಿದ್ದ ಗ್ರಾಮೀಣ ಶಾಸಕ ಬಿ.ನಾಗೇಂದ್ರ ತಿಳಿಸಿದರು.

------

ನಿನ್ನ ಮೊಬೈಲ್ ಪಾಸ್‌ವರ್ಡ್ ನಿನ್ನ ಹೆಂಡ್ತಿಗೆ ಕೊಡ್ತೀಯಾ?

ನಿನ್ನ ಮೊಬೈಲ್ ಪಾಸ್‌ವರ್ಡ್ ನಿನ್ನ ಹೆಂಡ್ತಿಗೆ ಕೊಡ್ತೀಯಾ? ಕೊಡೋದಿಲ್ಲ ತಾನೇ. ಹೀಗಿರುವಾಗ ನಿನ್ನ ಲಾಗಿನ್ ಮೂಲಕ ಖಬರಸ್ಥಾನ ಆಸ್ತಿ ಬೇರೆಯವರಿಗೆ ವರ್ಗಾವಣೆಯಾಗಿದ್ದು ಹೇಗೆ? ಎಂದು ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್ ಕಂದಾಯ ಅಧಿಕಾರಿ ನಂದೀಶ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಕೂಡಲೇ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿ ಎಂದು ಆಯುಕ್ತರಿಗೆ ಸೂಚನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಸಿಗೆಯಲ್ಲಿ 90 ಹಳ್ಳಿಯಲ್ಲಿ ನೀರಿನ ಸಮಸ್ಯೆ
ಕೊಪ್ಪಳ: ಊರ ಜಾತ್ರೆ ವೇಳೆ ದಲಿತರು-ಸವರ್ಣೀಯರ ಸಂಘರ್ಷ