ಕ್ಲಬ್ ಜಿಲ್ಲಾ ಉಪ ರಾಜ್ಯಪಾಲ ಶೆಣೈ ಉಪಸ್ಥಿತಿ
ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಡಾ.ಚಂದ್ರಮೌಳಿ ಜನಪ್ರಿಯ ವೈದ್ಯರಾಗಿದ್ದು ತಮ್ಮ ಅವಧಿಯಲ್ಲಿ ಅತ್ಯುತ್ತಮ ಕೆಲಸಗಳನ್ನು ಮಾಡಲಿ ಎಂದು ಲಯನ್ಸ್ ಕ್ಲಬ್ ಜಿಲ್ಲಾ ಉಪ ರಾಜ್ಯಪಾಲ ಕುಡಪಿ ಅರವಿಂದ ಶೆಣೈ ಹೇಳಿದರು.
ಪಟ್ಟಣದ ಯಗಚಿ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಬೇಲೂರು ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಆಧುನಿಕ ಶೈಲಿಗೆ ಹೊಂದಿಕೊಂಡಿರುವ ಬಹುತೇಕರು ಸಾಮಾಜಿಕ ಸೇವಾ ಮನೋಭಾವದಿಂದ ದೂರವಾಗುತ್ತಿದ್ದಾರೆ. ಸಮಾಜದಲ್ಲಿ ಬಡವರು, ನಿರ್ಗತಿಕರು, ವಿಶೇಷಚೇತನರಿಗೆ ಕೈಲಾದ ಸಹಾಯ ನೀಡುವ ಗುಣವನ್ನು ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಕಲಿಸುತ್ತದೆ. ಸರ್ಕಾರದಿಂದ ಯಾವುದೇ ಅನುದಾನವಿಲ್ಲದೆ, ಸಂಸ್ಥೆಯಲ್ಲಿನ ಸದಸ್ಯರು ದುಡಿದ ಒಂದು ಭಾಗವನ್ನು ಸಮಾಜಕ್ಕೆ ಅರ್ಪಿಸಲಾಗುತ್ತದೆ. ಬೇಲೂರು ಲಯನ್ಸ್ ಕ್ಲಬ್ ನಿರಂತರ ಸೇವಾ ಕಾರ್ಯದಲ್ಲಿ ಜಿಲ್ಲೆಯಲ್ಲಿ ಉತ್ತಮ ಹೆಸರು ಪಡೆದಿದೆ ಎಂದು ಹೇಳಿದರು.ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಡಾ.ಚಂದ್ರಮೌಳಿ ಮಾತನಾಡಿ, ಸಮಾಜ ಸೇವೆ ಎಂದರೆ ಇತ್ತೀಚಿನ ದಿನದಲ್ಲಿ ಫಲಾಪೇಕ್ಷೆಯ ನಿರೀಕ್ಷೆ ಇಟ್ಟುಕೊಂಡು ಮಾಡುತ್ತಾರೆ ಎಂಬ ಅಪವಾದವಿದೆ. ಆದರೆ ಲಯನ್ಸ್ ಕ್ಲಬ್ ಯಾವುದೇ ಲಾಭ ಹಾಗೂ ಪ್ರಚಾರವನ್ನು ಬಯಸದೆ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದೆ. ಈ ಕಾರಣದಿಂದಲೇ ಬೇಲೂರಿನ ಲಯನ್ಸ್ ಕ್ಲಬ್ ಕಳೆದ ಎರಡು ದಶಕದಲ್ಲಿ ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗಿದೆ ಎಂದರು