ಕನ್ನಡಪ್ರಭ ವಾರ್ತೆ ಬೇಲೂರು
ಅವಧಿ ಮುಕ್ತಾಯಗೊಂಡಿದ್ದ ಮಳಿಗೆಗಳನ್ನು ವಾಪಸ್ಸು ಪಡೆಯುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತಾಲೂಕು ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿತು. ತಾಲ್ಲೂಕು ಪಂಚಾಯಿತಿ ಮಾಲಿಕತ್ವದ ಸುಮಾರು 18 ವಾಣಿಜ್ಯ ಮಳಿಗೆಗಳ ಅವಧಿ ಮೂರು ವರ್ಷಗಳ ಹಿಂದೆಯೇ ಮುಗಿದಿದ್ದರೂ, ಅಧಿಕಾರಿಗಳು ಮತ್ತು ಬಾಡಿಗೆದಾರರ ಒಳ ಒಪ್ಪಂದದಿಂದ ಸರ್ಕಾರಕ್ಕೆ ಕೋಟ್ಯಂತರ ರು. ನಷ್ಟವಾಗಿದೆ ಎಂದು ಕರವೇ ಆರೋಪಿಸಿತು. ಮಳಿಗೆಗಳನ್ನು ತಕ್ಷಣ ವಶಪಡಿಸಿಕೊಳ್ಳಬೇಕು, ಇಲ್ಲವಾದರೆ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿತು.
ಪ್ರತಿಭಟನೆಗೆ ಸ್ಪಂದಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಅವಧಿ ಮುಗಿದ ಮಳಿಗೆಗಳನ್ನು ವಶಕ್ಕೆ ಪಡೆದು ಬೀಗ ಹಾಕುವ ಕ್ರಮ ಕೈಗೊಂಡರು. ಬಳಿಕ ಮಾತನಾಡಿದ ಅವರು, “18 ಮಳಿಗೆಗಳ ಅವಧಿ ಮುಕ್ತಾಯಗೊಂಡಿದ್ದು, ಬಾಡಿಗೆದಾರರಿಗೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿತ್ತು. ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ವಿಳಂಬವಾಯಿತು. ಈಗ ಪ್ರಕರಣಗಳು ಸುಖಾಂತ್ಯ ಕಂಡಿದ್ದು, 18ರಲ್ಲಿ 16 ಮಳಿಗೆಗಳನ್ನು ವಶಪಡಿಸಿಕೊಂಡಿದ್ದೇವೆ. ಉಳಿದ ಎರಡು ಮಳಿಗೆಗಳನ್ನೂ ಶೀಘ್ರದಲ್ಲೇ ಪಡೆಯಲಾಗುತ್ತದೆ” ಎಂದು ತಿಳಿಸಿದರು. ಇದಲ್ಲದೆ, ಸುಮಾರು 38 ಲಕ್ಷ ರು. ಬಾಕಿ ಬಾಡಿಗೆ ವಸೂಲಿಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಇ-ಟೆಂಡರ್ ಮೂಲಕ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ಹೇಳಿದರು.ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, “ಐದು ವರ್ಷಗಳಿಂದ ಅವಧಿ ಮುಗಿದ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆದಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರಕ್ಕೆ ನಷ್ಟವಾಗಿದೆ. ನಮ್ಮ ಪ್ರತಿಭಟನೆಗೆ ಸ್ಪಂದಿಸಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಉಳಿದ ಎರಡು ಮಳಿಗೆಗಳನ್ನೂ ವಶಕ್ಕೆ ಪಡೆದು, ಪಾರದರ್ಶಕವಾಗಿ ಇ-ಟೆಂಡರ್ ಮೂಲಕ ಹರಾಜು ನಡೆಸಬೇಕು ಎಂದು ಆಗ್ರಹಿಸಿದರು.