ಕನ್ನಡಪ್ರಭ ವಾರ್ತೆ ಮಧುಗಿರಿ
ಇಲ್ಲಿನ ನ್ಯಾಯಾಲಯ ಮತ್ತು ವಕೀಲರ ಸಂಘಕ್ಕೆ ತನ್ನದೇ ಆದ ಇತಿಹಾಸವಿದ್ದು, ಮುಂದಿನ ಪೀಳಿಗೆ ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ನ್ಯಾಯಾಲಯದ ಕಾರ್ಯ ಕಲಾಪಗಳು ಸುಗಮವಾಗಿ ನಡೆಯಬೇಕಿದೆ ಎಂದು ನಾಲ್ಕನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನೂತನ ನ್ಯಾಯಧೀಶರಾದ ಸುಮಂಗಲಾ ತಿಳಿಸಿದರು.ಪಟ್ಟಣದ ತಾಲೂಕು ನ್ಯಾಯಾಲಯಗಳ ಸಂಕೀರ್ಣದಲ್ಲಿ ನೂತನವಾಗಿ ಆಗಮಿಸಿದ ನ್ಯಾಯಾಧೀಶರುಗಳಿಗೆ ವಕೀಲರ ಸಂಘದಿಂದ ಆಯೋಜಿಸಿದ್ದ ಸ್ವಾಗತ ಸಮಾರಂಭ ಮತ್ತು ನ್ಯಾಯಾಲಯಗಳ ಆವರಣದಲ್ಲಿರುವ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದರು.
ನ್ಯಾಯಾಲಯಗಳಲ್ಲಿ ಸೂಸುತ್ರವಾಗಿ ಬಾರ್ ಮತ್ತು ಬೆಂಚ್ ಪರಸ್ಪರ ಸಹಕಾರದೊಂದಿಗೆ ನಡೆಯುತ್ತವೆ. ಇದಕ್ಕೆ ಪೂರಕಾವಾಗಿ ಉತ್ತಮ ಕಾರ್ಯ ಕಲಾಪಗಳು ನಡೆಯ ವಾತಾವರಣವಿರಬೇಕು. ವಕೀಲರ ಸಂಘ ಮತ್ತು ಬೆಂಚ್ ಸಹಕಾರದಿಂದ ಕೂಡಿರಬೇಕು. ಜಿಲ್ಲೆಯ ಮಧುಗಿರಿಯಲ್ಲಿ ಪ್ರಥಮ ಬಾರಿಗೆ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಲು ಅವಕಾಶ ಸಿಕ್ಕಿರುವುದು ನನಗೆ ಸಂತಸ ತಂದಿದೆ. ಆರೋಗ್ಯದ ದೃಷ್ಟಿಯಿಂದ ಗುಣ ಮಟ್ಟದ ಆಹಾರವನ್ನು ತಯಾರು ಮಾಡಿ ಕೊಡಬೇಕು ಎಂದು ಕ್ಯಾಂಟೀನ್ ಮಾಲೀಕರಿಗೆ ಸೂಚಿಸಿದರು.ನ್ಯಾಯಾಧೀಶೆ ಕಾಂತಮ್ಮ ಮಾತನಾಡಿ, ನ್ಯಾಯಾಧೀಶರು ಮತ್ತು ವಕೀಲರು ಒಂದೇ ರಥದ ಎರಡು ಚಕ್ರಗಳಿದ್ದಂತೆ ಪರಸ್ಪರ ಸಹಕಾರ ಮನೋಭಾವದಿಂದ ಕಕ್ಷೀದಾರರಿಗೆ ತ್ವರಿತವಾಗಿ ನ್ಯಾಯ ದೊರಕಿಸಿ ಕೊಡುವ ಕೆಲಸವಾಗಬೇಕಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ ಮಾತನಾಡಿ, ಈ ನ್ಯಾಯಲಯವು 1891ರಲ್ಲಿ ಪ್ರಾರಂಭವಾಗಿದ್ದು ಶತಮಾನೋತ್ಸವ ಆಚರಿಸಿದೆ. ಇಲ್ಲಿ ವಾದ ಮಂಡಿಸಿರುವ ಅದೇಷ್ಟೋ ವಕೀಲರುಗಳು ರಾಜ್ಯ ಮಟ್ಟದಲ್ಲಿ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದಾರೆ. ನ್ಯಾಯಾಧೀಶರಾದ ವೀರಪ್ಪ ಅವರು ನಮ್ಮ ವಕೀಲರ ಸಂಘಕ್ಕೆ ಮತ್ತು ನ್ಯಾಯಾಲಯದ ಸಿಬ್ಬಂದಿ ವಸತಿ ನಿಲಯಕ್ಕಾಗಿ 2.5 ಎಕರೆ ಜಮೀನು ಮಂಜೂರು ಮಾಡಿ ಕೊಟ್ಟಿದ್ದನ್ನು ಸ್ಮರಿಸಿ, ಇಲ್ಲಿನ ಪ್ರಕೃತಿಯನ್ನು ಸಹ ಸಂರಕ್ಷಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ನ್ಯಾಯಾಲಯ ಆಗುವ ಎಲ್ಲ ಲಕ್ಷಣಗಳಿವೆ ಎಂದರು.ವಕೀಲರ ಸಂಘದ ಕಾರ್ಯದರ್ಶಿ ರಂಗನಾಥ್, ಉಪಾಧ್ಯಕ್ಷ ನರಸಿಂಹಮೂರ್ತಿ, ವಕೀಲ ಐ.ಡಿ.ಹಳ್ಳಿ ನರಸಿಂಹಮೂರ್ತಿ, ಕಾರ್ಯಕ್ರಮ ಸ್ವಾಗತಿಸಿ ವಂದಿಸಿದರು.