ಕನ್ನಡಪ್ರಭ ವಾರ್ತೆ ಮೈಸೂರುಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜು. 22 ರಿಂದ ಆ. 2 ರವರೆಗೆ ನಡೆಯುವ ಮಹಾರಾಣಿ ಟ್ರೋಫಿ 2ನೇ ಆವೃತ್ತಿಗೆ ಮೈಸೂರು ವಾರಿಯರ್ಸ್ ಸಜ್ಜಾಗಿದೆ.ಈ ಬಾರಿ ಬೆಂಗಳೂರು, ಹುಬ್ಬಳ್ಳಿ, ಗುಲ್ಬರ್ಗ ಮತ್ತು ಮೈಸೂರು ಸೇರಿದಂತೆ ಒಟ್ಟು ನಾಲ್ಕು ತಂಡಗಳು ಕಣಕ್ಕಿಳಿಯುತ್ತಿವೆ. ಎನ್.ಆರ್. ಗ್ರೂಪ್ ಮಾಲೀಕತ್ವದ ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ಅನುಭವಿ ಹಾಗೂ ಯುವ ಪ್ರತಿಭಾವಂತ ಆಟಗಾರ್ತಿಯರಿಂದ ಕೂಡಿದ್ದು, ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿದೆ. ಟೂರ್ನಿ ಆರಂಭಕ್ಕೆ 2 ದಿನ ಬಾಕಿಯಿದ್ದು, ಸೋಮವಾರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಂಡದ ಆಟಗಾರರನ್ನು ಅನಾವರಣಗೊಳಿಸಲಾಯಿತು. ಚೊಚ್ಚಲ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಶುಭಾ ಸತೀಶ್ ಗೆ ತಂಡದ ನಾಯಕತ್ವ ನೀಡಲಾಗಿದೆ.ಈ ವೇಳೆ ಮಾತನಾಡಿದ ಶುಭಾ ಅವರು, ಮಹಾರಾಣಿ ಟ್ರೋಫಿ 2ನೇ ಆವೃತ್ತಿಗೆ ನಮ್ಮ ತಂಡ ಸಂಪೂರ್ಣ ಸಜ್ಜಾಗಿದ್ದು, ಕಪ್ ಗೆಲ್ಲಲು ಕಠಿಣ ತರಬೇತಿ ಪಡೆದಿದ್ದೇವೆ. ಪ್ರತಿಯೊಬ್ಬ ಆಟಗಾರ್ತಿಯೂ ತನ್ನ ಅತ್ಯುತ್ತಮ ಪ್ರದರ್ಶನ ನೀಡಲು ಬದ್ಧರಾಗಿದ್ದು, ಭಯವಿಲ್ಲದ ಪಾಸಿಟಿವ್ ಕ್ರಿಕೆಟ್ ಆಡಲಿದ್ದೇವೆ. ಮೈಸೂರಿಗೆ ಟ್ರೋಫಿ ತರುವುದೇ ನಮ್ಮ ಗುರಿ ಎಂದರು.ಈ ವೇಳೆ ಮಾತನಾಡಿದ ತಂಡದ ಮಾಲೀಕ ಅರ್ಜುನ್ ರಂಗ, ಈ ಬಾರಿಯ ಮಾಹಾರಾಣಿ ಟ್ರೋಫಿಗೆ ನಮ್ಮ ತಂಡ ಸಂಪೂರ್ಣ ಸಜ್ಜಾಗಿದೆ. ನಮ್ಮ ತಂಡದ ಉದ್ದೇಶ ಕೇವಲ ಸ್ಪರ್ಧಿಸುವುದಷ್ಟೇ ಅಲ್ಲ, ಪ್ರತಿಭಾವಂತ ಮಹಿಳಾ ಕ್ರಿಕೆಟಿಗರಿಗೆ ವೃತ್ತಿಪರ ವೇದಿಕೆಯಲ್ಲಿ ಮಿಂಚಲು ಅವಕಾಶ ಸೃಷ್ಟಿಸುವುದಾಗಿದೆ.ಮೈಸೂರು ವಾರಿಯರ್ಸ್ ನಗರದ ಕೇರ್ಗಳ್ಳಿಯ ಕಸ್ತೂರ ಬಾ ಗಾಂಧಿ ಬಾಲಿಕಾ ವಿದ್ಯಾಲಯದ ಜೊತೆಗಿನ ಪಾಲುದಾರಿಕೆ ಮುಂದುವರಿಸಿದೆ. ಜತೆಗೆ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ ತನ್ನ ಸಾಮಾಜಿಕ ಯೋಜನೆಗೆ ಉಷಾ ಕಿರಣ್ ಕಣ್ಣಿನ ಆಸ್ಪತ್ರೆ ಮತ್ತು ಎಬಿಲಿಟಿ ಸ್ಪೋರ್ಟ್ಸ್ ಲೀಗ್ ಕ್ರಿಕೆಟ್ ಸಂಸ್ಥೆಗೆ ತಲಾ 1.5 ಲಕ್ಷದ ಚೆಕ್ ವಿತರಿಸಿತು. ವಾರಿಯರ್ಸ್ತಂಡದ ಸದಸ್ಯರುಶುಭಾ ಸತೀಶ್ (ನಾಯಕಿ), ಶಿಶಿರ ಎ.ಗೌಡ, ಸಹನಾ ಎಸ್.ಪವಾರ್, ಪೂಜಾ ಕುಮಾರಿ, ಪುಷ್ಪಾ ಕಿರೇಸೂರು, ಆಲಮ್ ಫರೀಹಾ ಸೈಯೀದ್, ಜೆ. ದೀಕ್ಷಾ, ಕುಸುಮಾ ನಾಗರಾಜ್ ಗೌಡ, ಎಂ. ಸ್ತುತಿ, ಸಿ. ಪ್ರತೀಕ್ಷಾ, ಎಂ. ತನುಶ್ರೀ, ಶ್ರೇಯಾ ಅಜಯ್ ಮಿಶ್ರಾ, ವೈಷ್ಣವಿ ಬಿ.ಹುಣಸಿಯಾಳ, ಮಾನಸಿ ಪುಣದೀರ್, ಅದ್ವಿಕ ಡಿ.ಗೌಡ, ಶೀತಲ್ ಸಂತೋಷ್, ಯಶಿಕ ಕೆ.ಗೌಡ. ಕೆ.ಎಸ್.ಸಿ.ಎ. ಮೈಸೂರು ವಲಯದ ಅಧ್ಯಕ್ಷ ಟಿ.ಎಸ್. ರವೀಂದ್ರ ಇದ್ದಾರೆ.