;Resize=(412,232))
ಬೆಂಗಳೂರು : ಪೆಹಲ್ಗಾಂ ಭಯೋತ್ಪಾದಕ ದಾಳಿಯಲ್ಲಿ ಕಣ್ಣೆದುರೇ ಪತಿ ಭರತ್ ಭೂಷಣ್ ಅವರನ್ನು ಕಳೆದುಕೊಂಡಿರುವ ನಗರದ ವೈದ್ಯ ಡಾ.ಸುಜಾತ ಅವರು ಆ ಕಹಿ ನೆನಪಿನಲ್ಲೇ ನಾಲ್ಕೂವರೆ ವರ್ಷದ ಮಗನೊಂದಿಗೆ ಜೀವನ ಸಾಗಿಸುತ್ತಿದ್ದಾರೆ.
2025ರ ಏ.22ರಂದು ಜಮ್ಮು ಮತ್ತು ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದಾಗ ಮಗ ಮತ್ತು ಪತ್ನಿ ಎದುರೇ ಖಾಸಗಿ ಉದ್ಯೋಗಿ ಭರತ್ ಭೂಷಣ್ ಮೇಲೆ ಉಗ್ರರು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಘಟನೆ ನಡೆದು ಒಂದು ವರ್ಷವಾಗಿದೆ. ಪತಿ ಇಲ್ಲದಿರುವುದು ನನ್ನಲ್ಲಿ ಶೂನ್ಯ ಆವರಿಸಿದೆ. ಆದರೆ, ಮಗನಿಗಾಗಿ ಧೈರ್ಯದೊಂದಿಗೆ ಜೀವನ ಸಾಗಿಸುತ್ತಿದ್ದೇನೆ. ಅಂದಿನ ಆ ಘಟನೆ ಕರಿನೆರಳು ನಮ್ಮೊಂದಿಗೇ ಉಳಿದುಕೊಂಡಿದೆ. ಅದನ್ನು ಎದುರಿಸಲು ಹೆಚ್ಚು ಕಾಲ ಕೆಲಸದಲ್ಲಿ ನಿರತಳಾಗಿರುತ್ತೇನೆ. ಇಲ್ಲದಿದ್ದರೆ ಮತ್ತೆ ಅದೇ ನೆನಪುಗಳು ಕಣ್ಣ ಮುಂದೆ ಬರುತ್ತವೆ ಎಂದು ಭಾವುಕರಾದರು ಸುಜಾತ.
ವಾರದಲ್ಲಿ ಒಂದು ದಿನ ಮಗನಿಗಾಗಿ ಮೀಸಲಿಡುತ್ತೇನೆ. ತಂದೆ ಇಲ್ಲದಿರುವುದು ಮಗನಿಗೆ ಗೊತ್ತಿದೆ. ಆ ಕಹಿ ನೆನೆಪಿನಿಂದ ಹೊರಬರಲು ಆತನಿಗೆ ಕ್ರೀಡೆ ಮತ್ತು ಓದಿನಲ್ಲಿ ಮಗ್ನವಾಗಿಸುತ್ತೇನೆ. ಕುಟುಂಬದಿಂದಲೂ ಅಗತ್ಯ ಬೆಂಬಲ ಸಿಗುತ್ತಿದೆ ಎಂದು ಸುಜಾತ ಹೇಳಿದ್ದಾರೆ.
ಆ ದಿನ ಪೆಹಲ್ಗಾಂನಲ್ಲಿ ಗುಂಡಿನ ಸದ್ದು ಕಿವಿಗೆ ಬಿದ್ದಾಗ ಪಟಾಕಿಯ ಸದ್ದಾಗಿರಬಹುದು ಎಂದು ಭಾವಿಸಿದ್ದೆವು. ಆದರೆ, ಬಳಿಕ ಅದು ಗುಂಡಿನ ದಾಳಿ ಎಂಬ ಅರಿವಾಯಿತು. ಅದನ್ನು ಭದ್ರತಾ ಸಿಬ್ಬಂದಿ ನೋಡಿಕೊಳ್ಳುತ್ತಾರೆ ಎಂದೇ ನಾವು ಭಾವಿಸಿದ್ದೆವು. ಆದರೆ, ಅಲ್ಲಿ ಭದ್ರತಾ ಸಿಬ್ಬಂದಿ ಇರಲೇ ಇಲ್ಲ. ಭದ್ರತೆಗೆ ಸಿಬ್ಬಂದಿ ಇದ್ದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎನ್ನುತ್ತಾರೆ ಸುಜಾತ.
ಬ್ರೈನ್ ವಾಷ್ ಆಗಿರುವ ಉಗ್ರರ ಉಪಟಳಕ್ಕೆ ಕಡಿವಾಣ ಹಾಕಬೇಕು. ನಿಯಂತ್ರಣ ಹೇಗೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಇಂತಹ ಕೃತ್ಯಗಳು ಮುಂದೆ ನಡೆಯಬಾರದು ಎಂದು ಸುಜಾತ ಹೇಳಿದರು.