ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ 7 ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ರದ್ದು ಮಾಡಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ‘ಕಾನೂನು ಮುಂದೆ ಎಲ್ಲರೂ ಒಂದೇ ಎಂಬ ಗಟ್ಟಿ ಸಂದೇಶವನ್ನು ಈ ಮೂಲಕ ಸುಪ್ರೀಂ ಕೋರ್ಟ್ ರವಾನಿಸಿದೆ’ ಎಂದು ಹೇಳಿದ್ದಾರೆ.
ಈ ಹಿಂದೆ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎನ್ನುವ ಮೂಲಕ ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ರಮ್ಯಾ ಕಾರಣರಾಗಿದ್ದರು. ಸಿಟ್ಟಾದ ದರ್ಶನ್ ಫ್ಯಾನ್ಸ್ ಅಶ್ಲೀಲ ಕಾಮೆಂಟ್ ಕಳಿಸಿದಾಗ ಅವರಿಗೆ ರಮ್ಯಾ ಜೈಲಿನ ರುಚಿ ನೋಡುವಂತೆ ಮಾಡಿದ್ದರು. ಇದೀಗ ದರ್ಶನ್ಗೆ ಬೇಲ್ ರದ್ದಾದದ್ದೇ ತಡ ಮತ್ತೆ ಈ ಬಗ್ಗೆ ಬರೆದುಕೊಂಡಿರುವ ರಮ್ಯಾ, ‘ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಉಳಿದ ಆರೋಪಿಗಳಿಗೆ ಜಾಮೀನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್ ತೀರ್ಪು, ಕಾನೂನು ಮುಂದೆ ಎಲ್ಲರೂ ಸಮಾನರು ಎಂಬ ಸ್ಪಷ್ಟ ಸಂದೇಶ ರವಾನಿಸಿದೆ’ ಎಂದಿದ್ದಾರೆ.
‘ಉಳಿದವರಿಗೆ ನಾನು ಹೇಳಬಯಸುವುದೇನೆಂದರೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಡಿ. ಸರಿಯಾದ ಕಾನೂನು ಪ್ರಕ್ರಿಯೆ ಅನುಸರಿಸಿ. ಇದು ದೀರ್ಘ ಮತ್ತು ಕಠಿಣ ಹಾದಿಯಾದರೂ ಸುರಂಗದ ಕೊನೆಯಲ್ಲಿ ಬೆಳಕಿರುವ ಹಾಗೆ ಇದರಲ್ಲೂ ನ್ಯಾಯ ಸಿಕ್ಕೇ ಸಿಗುತ್ತದೆ. ಯಾವ ಕಾರಣಕ್ಕೂ ಕಾನೂನು ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ. ಎಲ್ಲಕ್ಕಿಂತ ಮುಖ್ಯವಾಗಿ ಅತ್ಮಸಾಕ್ಷಿಗೆ ನಿಷ್ಠರಾಗಿರಿ’ ಎಂದು ಹೇಳಿದ್ದಾರೆ. ಕಳೆದ ಬಾರಿಯ ಘಟನೆಯಿಂದ ಪಾಠ ಕಲಿತಂತಿರುವ ದರ್ಶನ್ ಅಭಿಮಾನಿಗಳು ಸೋಷಲ್ ಮೀಡಿಯಾದಲ್ಲಿ ಈ ಪೋಸ್ಟ್ಗೆ ಯಾವುದೇ ಕಾಮೆಂಟ್ ಮಾಡಿಲ್ಲ.----
ದರ್ಶನ್ ನಿವಾಸ ಮುಂದೆ ಅಭಿಮಾನಿಗಳ ಹಿಂಡು
ಬೆಂಗಳೂರು: ಸುಪ್ರೀಂ ಕೋರ್ಟ್ ದರ್ಶನ್ ಬೇಲ್ ರದ್ದು ಮಾಡಿರುವ ಸುದ್ದಿ ತಿಳಿದು ಗುಂಪು ಗುಂಪಾಗಿ ದರ್ಶನ್ ನಿವಾಸದ ಎದುರು ಅಭಿಮಾನಿಗಳು ನೆರೆದಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ‘ವಿಷಯ ತಿಳಿದು ತುಂಬ ನೋವಾಗಿದೆ. ನಮ್ಮ ಡಿ ಬಾಸ್ ಜೈಲಲ್ಲಿದ್ದರೂ ನಾವು ಅವರನ್ನು ಬಿಟ್ಟುಕೊಡಲ್ಲ. ಅವರನ್ನು ನೂರಕ್ಕೆ ನೂರರಷ್ಟು ಬೆಳೆಸುತ್ತೇವೆ’ ಎಂದಿದ್ದಾರೆ.
ದರ್ಶನ್ ಅವರ ಅರೆಸ್ಟ್ ಆಗಿರುವ ಅನ್ನಪೂರ್ಣ ನಗರ ಪೊಲೀಸ್ ಠಾಣೆಯ ಮುಂದೆಯೂ ನೂರಾರು ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು.
ದರ್ಶನ್ಗೆ ಮುಳುವಾಯ್ತು
ಅಭಿಮಾನಿಗಳ ಹುಚ್ಚಾಟ
ಚಿತ್ರನಟ ದರ್ಶನ್ ಅವರಿಗೆ ಅವರ ಅಭಿಮಾನಿಗಳ ಹುಚ್ಚಾಟವೂ ಮುಳುವಾಗಿದೆ. ನಟನ ವಿರುದ್ಧ ಯಾರಾದರೂ ವಿರುದ್ಧ ಅಭಿಪ್ರಾಯವನ್ನು ಮಂಡಿಸಿದರೆ ಅವರ ಚಾರಿತ್ರ್ಯಹರಣ ಮಾಡುವುದು, ತುಚ್ಛವಾಗಿ ಅಶ್ಲೀಲ ಬಳಸಿ ನಿಂದಿಸುವುದು, ಬೆದರಿಕೆ ಹಾಕುವುದು ಇಂಥದ್ದನ್ನೆಲ್ಲಾ ಅಭಿಮಾನಿಗಳು ಮಾಡಿಕೊಂಡೇ ಬಂದರು. ಅದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಗೆ ಕಾರಣವಾಗಿ ರಾಷ್ಟ್ರಮಟ್ಟದಲ್ಲೂ ಸುದ್ದಿಯಾಗಿತ್ತು. ಈ ಬಗ್ಗೆ ಅಭಿಮಾನಿಗಳಿಗೆ ತಿಳಿಹೇಳುವ ಕೆಲಸವನ್ನು ದರ್ಶನ್ ಮಾಡಲೇ ಇಲ್ಲ.