ರಾಜ್ಯದ ಎಲ್ಲಾ ಬ್ರ್ಯಾಂಡ್‌ಗಳ ತುಪ್ಪ ಬಳಕೆಗೆ ಯೋಗ್ಯ - ಆಹಾರ ಇಲಾಖೆಯಿಂದ 230 ತುಪ್ಪದ ಪರಿಶೀಲನೆ

Nirupama ks | Published : Oct 26, 2024 11:02 AM

ರಾಜ್ಯದಲ್ಲಿ ಲಭ್ಯವಿರುವ ಪತಂಜಲಿ ಸೇರಿದಂತೆ 230 ತುಪ್ಪದ ಮಾದರಿಗಳನ್ನು ಪರೀಕ್ಷೆ ನಡೆಸಿದ್ದು, ಯಾವುದರಲ್ಲೂ ದನದ ಕೊಬ್ಬಿನಂಶ ಪತ್ತೆಯಾಗಿಲ್ಲ

ಬೆಂಗಳೂರು : ತಿರುಪತಿಯ ಲಡ್ಡುವಿಗೆ ಬಳಸಿರುವ ತುಪ್ಪದಲ್ಲಿ ದನದ ಮಾಂಸದ ಕೊಬ್ಬಿನಂಶ ಬಳಕೆಯಾಗಿತ್ತು ಎಂಬ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಭ್ಯವಿರುವ ಪತಂಜಲಿ ಸೇರಿದಂತೆ 230 ತುಪ್ಪದ ಮಾದರಿಗಳನ್ನು ಪರೀಕ್ಷೆ ನಡೆಸಿದ್ದು, ಯಾವುದರಲ್ಲೂ ದನದ ಕೊಬ್ಬಿನಂಶ ಪತ್ತೆಯಾಗಿಲ್ಲ. ಜತೆಗೆ ಬಳಕೆಗೆ ಅಸುರಕ್ಷಿತ ಎಂದೂ ವರದಿಯಾಗಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿರುಪತಿ ಲಡ್ಡು ಪ್ರಕರಣದ ಬಳಿಕ ಸಾರ್ವಜನಿಕರಲ್ಲಿ ತುಪ್ಪದ ಬಗ್ಗೆ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿದ್ದವು.

ಹೀಗಾಗಿ ರಾಜ್ಯದಲ್ಲಿ ಲಭ್ಯವಿರುವ ಪತಂಜಲಿ ಸೇರಿದಂತೆ ವಿವಿಧ ಬ್ರಾಂಡ್‌ನ 230 ತುಪ್ಪಗಳ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಯಾವುದೇ ತುಪ್ಪವು ಸೇವನೆಗೆ ಅಸುರಕ್ಷಿತ ಎಂದು ಪತ್ತೆಯಾಗಿಲ್ಲ. ಅಲ್ಲದೇ ದನದ ಮಾಂಸದ ಕೊಬ್ಬಿನಂಶ ತುಪ್ಪಗಳಲ್ಲಿ ಪತ್ತೆಯಾಗಿಲ್ಲ. ಹೀಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ದಿನೇಶ್ ಗುಂಡೂರಾವ್‌ ಸ್ಪಷ್ಟಪಡಿಸಿದರು.