ದ್ರಾವಿಡ ಭಾಷೆಗಳೆಲ್ಲವೂ ಸ್ವತಂತ್ರ ಕನ್ನಡವು ತಮಿಳಿನಿಂದ ಬಂದಿಲ್ಲ : ಡಾ.ಸಿ.ಎನ್.ಮಂಜುನಾಥ್‌

Sujatha NR | Published : Jun 2, 2025 7:22 AM

ಯಾವುದೇ ದ್ರಾವಿಡ ಭಾಷೆಗಳು ಬೇರೊಂದರಿಂದ ಹುಟ್ಟಿಲ್ಲ. ಕೆಲವರು ನಾಲಿಗೆ ಹರಿಬಿಟ್ಟು ಸಮಸ್ಯೆ ಮಾಡುತ್ತಿರುವುದು ಮಾತ್ರವಲ್ಲದೆ ಕ್ಷಮೆ ಕೇಳಲು ಹಿಂದೇಟು ಹಾಕಿ ಪ್ರತಿಷ್ಠೆ ತೋರುತ್ತಿದ್ದಾರೆ ಎಂದು ಸಂಸದ ಡಾ. ಸಿ.ಎನ್‌. ಮಂಜುನಾಥ್‌ ಹೇಳಿದರು.

  ಬೆಂಗಳೂರು : ಯಾವುದೇ ದ್ರಾವಿಡ ಭಾಷೆಗಳು ಬೇರೊಂದರಿಂದ ಹುಟ್ಟಿಲ್ಲ. ಕೆಲವರು ನಾಲಿಗೆ ಹರಿಬಿಟ್ಟು ಸಮಸ್ಯೆ ಮಾಡುತ್ತಿರುವುದು ಮಾತ್ರವಲ್ಲದೆ ಕ್ಷಮೆ ಕೇಳಲು ಹಿಂದೇಟು ಹಾಕಿ ಪ್ರತಿಷ್ಠೆ ತೋರುತ್ತಿದ್ದಾರೆ ಎಂದು ಸಂಸದ ಡಾ. ಸಿ.ಎನ್‌. ಮಂಜುನಾಥ್‌ ಹೇಳಿದರು.

ರಂಗಚಂದಿರ ತಂಡ ನಗರದ ಕನ್ನಡಭವನದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಡಿ.ಕೆ.ಚೌಟ ನೆನಪಿನ ನಾಟಕೋತ್ಸವ-2025 ಉದ್ಘಾಟಿಸಿ ಮಾತನಾಡಿದರು.

ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳು ಬೇರೆ ಭಾಷೆಯಿಂದ ಬಂದಿಲ್ಲ, ಎಲ್ಲವೂ ಸ್ವತಂತ್ರ ಭಾಷೆಗಳು. ಕನ್ನಡ ತೆಲುಗಿನಿಂದ, ತಮಿಳಿನಿಂದ ಬಂದಿಲ್ಲ. ಭಾಷೆ ಬಗ್ಗೆ ಭಾವನಾತ್ಮಕ ಸಂಬಂಧ ಇರುತ್ತದೆ. ತಪ್ಪು ಮಾಡಿದಲ್ಲಿ ಕ್ಷಮೆ ಕೇಳುವುದರಿಂದ ಯಾವುದೇ ಮನುಷ್ಯ ಚಿಕ್ಕದಾಗಲ್ಲ, ಬದಲಾಗಿ ವ್ಯಕ್ತಿತ್ವ ದೊಡ್ಡದು ಎನ್ನಿಸಿಕೊಳ್ಳುತ್ತದೆ. ಕ್ಷಮೆ ಮನುಷ್ಯನ ದೊಡ್ಡ ಸಂಪತ್ತು ಎಂಬುದನ್ನು ಮರೆಯಬಾರದು. ಆದರೆ ಅವರು ಯಾಕಾಗಿ ಪ್ರತಿಷ್ಠೆ ಮಾಡಿಕೊಂಡಿದ್ದಾರೋ ಗೊತ್ತಿಲ್ಲ ಎಂದು ಕಮಲ್‌ಹಾಸನ್‌ ಹೆಸರು ಉಲ್ಲೇಖಿಸದೆ ಮಾತನಾಡಿದರು.

ಕನ್ನಡ ಕನ್ನಡಕವಾಗಿರದೆ ಕನ್ನಡ ಕಣ್ಣಾಗಿರಬೇಕು. ಆಡುಭಾಷೆಯಾಗಿ ಕನ್ನಡವನ್ನೇ ಹೆಚ್ಚಾಗಿ ಬಳಸಬೇಕು. ಮನೆಯಲ್ಲಿ ಮಕ್ಕಳಿಗೆ ಕನ್ನಡದಲ್ಲೇ ಮಾತನಾಡಿಸಿ. ವ್ಯವಹಾರಿಕವಾಗಿ ಅಗತ್ಯವಿದ್ದರೆ ಮಾತ್ರ ಇಂಗ್ಲಿಷ್‌ ಬಳಸಿ ಎಂದು ಹೇಳಿದರು.

ಡಿ.ಕೆ.ಚೌಟ ಅವರು ಕೇವಲ ವ್ಯಕ್ತಿಯಲ್ಲ, ರಂಗಭೂಮಿಯ ದೈತ್ಯ ಶಕ್ತಿಯಾಗಿದ್ದರು. ತಂತ್ರಜ್ಞಾನ ಸ್ಫೋಟ ಯುಗದಲ್ಲಿರುವ ನಾವು ರಂಗಭೂಮಿಯನ್ನು ಉಳಿಸಿಕೊಂಡು ಹೋಗಬೇಕು. ಹೆಚ್ಚು ಒತ್ತು ಕೊಡಬೇಕು ಎಂದು ಅವರು ಬಯಸಿದ್ದರು. ಅವರಿಂದ ಸಾಕಷ್ಟು ಕಿರಿಯ ಕಲಾವಿದರು ಬೆಳೆದಿದ್ದಾರೆ. ಅವರ ರಂಗಭೂಮಿ ಕಾರ್ಯಗಳು ಸಮಾಜ ಸುಧಾರಣೆಗೆ, ಪರಿವರ್ತನೆಗೆ ಶ್ರಮಿಸಿವೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಡಾ.ಪುರುಷೋತ್ತಮ ಬಿಳಿಮಲೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಂಗಭೂಮಿ ಸಾಧಕರಾದ ಸುದೇಶ್‌ ಮಹಾನ್‌, ಪ್ರೇಮ್‌ದಾಸ್‌ ಅಡ್ಯಂತಾಯ, ಗೀತಾ ಸುರತ್ಕಲ್‌, ರೇಣುಕ ರೆಡ್ಡಿ, ಡಾ. ರಮ್ಯಾ ನವೀನ್‌ ಕೃಷಿ ಅವರಿಗೆ ರಂಗಗೌರವ ನೀಡಿ ಗೌರವಿಸಲಾಯಿತು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ.ನಾಗರಾಜಮೂರ್ತಿ, ಹಿರಿಯ ನಾಟಕಕಾರ ಡಾ.ನಾ.ದಾಮೋದರ ಶೆಟ್ಟಿ ಸೇರಿ ಇತರರಿದ್ದರು.

Read more Articles on