ಬೆಂಗಳೂರು ಜನತೆಗೆ ಮತ್ತೊಂದು ಶಾಕ್ : ಮೆಟ್ರೋ ಟಿಕೆಟ್‌ ಮತ್ತೆ ಏರಿಕೆ? ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ?

Published : Feb 05, 2026, 07:16 AM IST
Namma Metro Fares to Rise

ಸಾರಾಂಶ

ಸರಿಯಾಗಿ ಒಂದು ವರ್ಷದ ಬಳಿಕ ನಮ್ಮ ಮೆಟ್ರೋ ಪ್ರಯಾಣ ದರವನ್ನು ಶೇ.5ರಷ್ಟು ಹೆಚ್ಚಿಸಿ ಜಾರಿಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ  ಮುಂದಾಗಿದೆ. ಪ್ರತಿವರ್ಷ ಮೆಟ್ರೋ ಪ್ರಯಾಣದ ದರವನ್ನು ಪರಿಷ್ಕರಿಸಬೇಕು ಎಂಬ ಮೆಟ್ರೋ ದರ ಪರಿಷ್ಕರಣಾ ಸಮಿತಿಯ ವರದಿಯಂತೆ ದರ ಹೆಚ್ಚಿಸಲು ಬಿಎಂಅರ್‌ಸಿಎಲ್‌ ಎಲ್ಲ ಸಿದ್ಧತೆ

 ಬೆಂಗಳೂರು :  ಸರಿಯಾಗಿ ಒಂದು ವರ್ಷದ ಬಳಿಕ ನಮ್ಮ ಮೆಟ್ರೋ ಪ್ರಯಾಣ ದರವನ್ನು ಶೇ.5ರಷ್ಟು ಹೆಚ್ಚಿಸಿ ಜಾರಿಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಮುಂದಾಗಿದೆ.

ಪರಿಷ್ಕೃತ ದರವನ್ನು ಮುಂದಿನ ವಾರದಿಂದಲೇ (ಫೆ.9 ರಿಂದ) ಜಾರಿಗೆ ತಂದು ಪ್ರಯಾಣಿಕರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ನೋಡುವುದು, ತೀರಾ ಆಕ್ರೋಶ ವ್ಯಕ್ತವಾದರೆ ಮಾತ್ರ ಪರಿಷ್ಕೃತ ದರ ಹಿಂಪಡೆಯುವುದು. ಅದಲ್ಲದೆ, ಹೆಚ್ಚಿನ ದರದ ವಿರುದ್ಧ ಕೆಲ ದಿನ ಮಾತ್ರ ಪ್ರತಿಭಟನೆ ನಡೆದು ಬಳಿಕ ಪ್ರಯಾಣಿಕರು ಹೊಂದಿಕೊಂಡು ಹೋದರೆ ದರ ಹೆಚ್ಚಳ ಮುಂದುವರಿಸಿಕೊಂಡು ಹೋಗುವುದು ಎಂಬ ತಂತ್ರವನ್ನು ಅನುಸರಿಸಲು ಮುಂದಾಗಿದೆ.

ಪ್ರತಿವರ್ಷ ಮೆಟ್ರೋ ಪ್ರಯಾಣದ ದರವನ್ನು ಪರಿಷ್ಕರಿಸಬೇಕು ಎಂಬ ಮೆಟ್ರೋ ದರ ಪರಿಷ್ಕರಣಾ ಸಮಿತಿಯ ವರದಿಯಂತೆ ದರ ಹೆಚ್ಚಿಸಲು ಬಿಎಂಅರ್‌ಸಿಎಲ್‌ ಎಲ್ಲ ಸಿದ್ಧತೆ ಮಾಡಿಕೊಂಡಿದೆ.

ಫೆ. 9ರಿಂದ ಜಾರಿ?

ಸಂಸ್ಥೆಯ ಮಂಡಳಿ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಂಡು ಶೇ. 5ರಷ್ಟು ದರ ಹೆಚ್ಚಿಸಲು ಅನುಮೋದನೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರವೂ ದರ ಹೆಚ್ಚಳಕ್ಕೆ ಗ್ರೀನ್‌ ಸಿಗ್ನಲ್‌ ನೀಡಲು ಮುಂದಾಗಿದೆ. ಬಿಎಂಆರ್‌ಸಿಎಲ್ ಸರಿಯಾಗಿ ಒಂದು ವರ್ಷದ ಬಳಿಕ ಅಂದರೆ ಇದೇ ಫೆ. 9ರಿಂದಲೇ ಪರಿಷ್ಕೃತ ದರ ಜಾರಿಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಇದರ ಪ್ರಕಾರ ₹ 50 ಪೈಸೆಯಿಂದ ₹ 5 ವರೆಗೆ ದರ ಹೆಚ್ಚಳವಾಗಲಿದೆ. ಆದರೆ, ಕಿಮೀ ಅಥವಾ ನಿಲ್ದಾಣಗಳ ಅಂತರಕ್ಕೆ ಅನುಗುಣವಾಗಿ ದರದ ಸ್ಲ್ಯಾಬ್‌ ಯಾವ ರೀತಿ ನಿರ್ಧಾರವಾಗಲಿದೆ ಎಂಬುದು ನಂತರವಷ್ಟೇ ತಿಳಿದುಬರಲಿದೆ. ಜತೆಗೆ ಮೆಟ್ರೋ ಸ್ಮಾರ್ಟ್ ಕಾರ್ಡ್, ಪಾಸ್‌ ಬಳಕೆದಾರರಿಗೆ ನೀಡಲಾಗುತ್ತಿರುವ ರಿಯಾಯಿತಿಯಲ್ಲಿ ಬದಲಾವಣೆಯಾಗಲಿದೆಯೇ ಅಥವಾ ಇಲ್ಲವೇ ಎಂಬ ಕುರಿತು ಬಿಎಂಆರ್‌ಸಿಎಲ್ ನೀಡಲಿರುವ ಅಧಿಕೃತ ಪ್ರಕಟಣೆಯಲ್ಲಿ ಅಧಿಕೃತ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.

ಕಳೆದ ವರ್ಷ ಶೇ.71ರಷ್ಟು ಹೆಚ್ಚಳ

ಕಳೆದ ವರ್ಷ ಫೆಬ್ರವರಿ 9 ರಂದು ಮೆಟ್ರೋ ಟಿಕೆಟ್ ದರವನ್ನು ಶೇ.101.5ರಷ್ಟು ದರ ಹೆಚ್ಚಳ ಮಾಡಲಾಗಿತ್ತು. ಬಳಿಕ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಸರ್ಕಾರದ ಸೂಚನೆ ಮೇರೆಗೆ ಬಿಎಂಆರ್​ಸಿಎಲ್​​ ಶೇಕಡಾ 71.5ಕ್ಕೆ ದರ ಇಳಿಕೆ ಮಾಡಿತ್ತು. ಸದ್ಯ ಇಡೀ ದೇಶದಲ್ಲೇ ನಮ್ಮ ಮೆಟ್ರೋ ಪ್ರಯಾಣ ದರ ಅತ್ಯಂತ ದುಬಾರಿಯಾಗಿದೆ. ಇದೀಗ ಮತ್ತೆ ಶೇ.5ರಷ್ಟು ಟಿಕೆಟ್ ದರ ಹೆಚ್ಚಳವಾದಲ್ಲಿ ಮಧ್ಯಮ ವರ್ಗದ ಪ್ರಯಾಣಿಕರಿಗೆ ಮತ್ತಷ್ಟು ಹೊರೆಯಾಗಲಿದೆ.

ಜನಾಕ್ರೋಶ

ಮೆಟ್ರೋ ದರ ಏರಿಕೆಗೆ ಪ್ರಯಾಣಿಕರು, ನಾಗರಿಕ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ. ದಿನನಿತ್ಯದ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದೇವೆ. ಸಾರ್ವಜನಿಕ ಸಾರಿಗೆ ಮೆಟ್ರೋ ಪ್ರತಿವರ್ಷ ದರ ಏರಿಸಿದರೆ ಜನಸಾಮಾನ್ಯರ ಕಥೆಯೇನು? ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ. ಜತೆಗೆ ಈ ಬಾರಿ ಮೆಟ್ರೋ ದರ ಏರಿಕೆ ವಿರುದ್ಧ ತೀವ್ರ ಹೋರಾಟದ ಎಚ್ಚರಿಕೆಯನ್ನೂ ಸಂಘಟನೆಗಳು ನೀಡಿವೆ.

ದರ ಹೆಚ್ಚಳದ ಕುರಿತು ಪ್ರತಿಕ್ರಿಯೆ ಪಡೆಯಲು ಬೆಂಗಳೂರು ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಸಂಪರ್ಕಿಸಿದರೂ ಅವರು ಕರೆ, ಸಂದೇಶಕ್ಕೆ ಪ್ರತಿಕ್ರಿಯಿಸಲಿಲ್ಲ. ಸಾರ್ವಜನಿಕ ಸಂಪರ್ಕಾಧಿಕಾರಿಯವರು ‘ನಮಗೆ ದರ ಹೆಚ್ಚಳದ ಮಾಹಿತಿ ಬಂದ ಬಳಿಕ ಮಾಹಿತಿ ನೀಡಲಿದ್ದೇವೆ’ ಎಂದಷ್ಟೆ ತಿಳಿಸಿದರು.

ಬೆಂಗಳೂರಿಗೆ ಮೆಟ್ರೋ ದರ ಹೆಚ್ಚಳ ವಿಚಾರ ಅತ್ತ ದರಿ, ಇತ್ತ ಪುಲಿ ಎಂಬಂತಾಗಿದೆ. ದರ ಪರಿಷ್ಕರಣಾ ಸಮಿತಿ ವರದಿ ನೀಡಿದಾಕ್ಷಣ ಪ್ರತಿ ವರ್ಷ ದರ ಹೆಚ್ಚಿಸಲೇಬೇಕು ಎಂದೇನಿಲ್ಲ. ಹೆಚ್ಚಿಸಿದರೆ ಹೋರಾಟ ಖಚಿತ. ಯಾವ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಿದ್ದೇವೆ ಎಂಬುದನ್ನು ಶೀಘ್ರ ತಿಳಿಸಲಾಗುವುದು.

ರಾಜೇಶ್‌ ಭಟ್‌, ಬೆಂಗಳೂರು ಮೆಟ್ರೋ ಪ್ರಯಾಣಿಕ ಸಮಿತಿ ಸಹ ಸಂಚಾಲಕ

ಬಿಎಂಆರ್‌ಸಿಎಲ್‌ ಅನಗತ್ಯ ಖರ್ಚಿಗೆ ಕಡಿವಾಣ ಹಾಕಿದರೆ ತಿಂಗಳಿಗೆ ₹10 ಕೋಟಿ ಉಳಿಸಬಹುದು. ಜತೆಗೆ ಇತರ ಮೂಲಗಳಿಂದ ಸಂಪನ್ಮೂಲ ಹೆಚ್ಚಿಸಿಕೊಳ್ಳಬಹುದು. ಆದರೆ, ದರ ಹೆಚ್ಚಿಸುವತ್ತಲೆ ಸಂಸ್ಥೆ ಹಾಗೂ ಸರ್ಕಾರಕ್ಕೆ ಹೆಚ್ಚಿನ ಆಸಕ್ತಿ ಇದ್ದಂತಿದೆ.

- ಸೂರ್ಯನಾರಾಯಣಮೂರ್ತಿ, ಉಪಾಧ್ಯಕ್ಷ, ಬಿಎಂಆರ್‌ಸಿಎಲ್‌ ಎಂಪ್ಲಾಯಿಸ್‌ ಯೂನಿಯನ್‌

ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ ದರ ಹೆಚ್ಚಳ ಮುಂದುವರಿಸುವ ಅಥವಾ ಜಾರಿಗೊಳಿಸುವ ಬಗ್ಗೆ ಸಂಸ್ಥೆಯಲ್ಲಿ ಚರ್ಚೆಯಾಗಿದೆ. ಶೇ. 5ರಷ್ಟು ಹೆಚ್ಚಳ ಮುಂದಿನ ವಾರದಿಂದ ಜಾರಿಯಾಗಬಹುದು.

-ಹೆಸರು ಹೇಳಲಿಚ್ಛಿಸದ ಬಿಎಂಆರ್‌ಸಿಎಲ್‌ ಅಧಿಕಾರಿ

ಫೆ.9ರಂದೇ ದರ ಜಾರಿ ಮಾಡಲು ಸಿದ್ಧತೆ ಏಕೆ?

2025ರ ಫೆ.9ರಿಂದ ಮೆಟ್ರೋ ಪರಿಷ್ಕೃತ ದರ (101% ಏರಿಕೆ) ಜಾರಿಗೆ ಬಂದಿತ್ತು. ಈ ವರ್ಷವೂ ಅದೇ ದಿನದಿಂದಲೇ ದರ ಏರಿಕೆ ಜಾರಿಗೆ ತರಲು ಬಿಎಂಆರ್‌ಸಿಎಲ್‌ ಚಿಂತನೆ ನಡೆಸಿದೆ ಎನ್ನಲಾಗಿದೆ.

ಯಾವ ಮಾರ್ಗದಲ್ಲಿ ಎಷ್ಟು ದರ ಹೆಚ್ಚಳ?

ನೇರಳೆ ಮಾರ್ಗದ ವೈಟ್ ಫೀಲ್ಡ್ - ಚಲ್ಲಘಟ್ಟವರೆಗೆ ಹಾಗೂ ಹಸಿರು ಮಾರ್ಗದ ರೇಷ್ಮೆ ಸಂಸ್ಥೆ - ಮಾದಾವಾರವರೆಗೆ ಪ್ರಸ್ತುತ ದರ ₹90 ಇದೆ. ಶೇ.5 ಹೆಚ್ಚಳ ಬಳಿಕ ₹95 ಆಗಲಿದೆ. ನೂತನ ಆರ್.ವಿ. ರಸ್ತೆ - ಬೊಮ್ಮಸಂದ್ರ ಮಾರ್ಗದಲ್ಲಿ ಪ್ರಸ್ತುತ ₹60 ಇದೆ. ಶೇ.5 ಹೆಚ್ಚಳ ಬಳಿಕ ₹63 ಆಗಲಿದೆ. ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ಕನಿಷ್ಠ ದರ ₹10 ಇದ್ದು, ಶೇ.5 ಏರಿಕೆ ಬಳಿಕ 11 ರುಪಾಯಿ ಆಗಲಿದೆ ಎಂಬುದು ಪ್ರಾಥಮಿಕ ಲೆಕ್ಕಾಚಾರ.

ಪ್ರತಿ ವರ್ಷ ಏರಿಸಿದರೆ ತಡೆಯುವುದು ಹೇಗೆ?

ದಿನನಿತ್ಯದ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದೇವೆ. ಸಾರ್ವಜನಿಕ ಸಾರಿಗೆ ಮೆಟ್ರೋ ಪ್ರತಿವರ್ಷ ದರ ಏರಿಸಿದರೆ ಜನಸಾಮಾನ್ಯರ ಕಥೆಯೇನು?

- ಪ್ರಯಾಣಿಕರು

 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ಆತ್ಮ*ತ್ಯೆ: 5 ಲಕ್ಷ ಪರಿಹಾರ?
ಬೆಂಗಳೂರು ಕೆಮಿಕಲ್‌ ಫ್ಯಾಕ್ಟರಿಗಳ ಮೇಲೀಗ ಪೊಲೀಸರಿಂದ ಅಲರ್ಟ್‌