ಬೆಂಗಳೂರು : ಬೆಂಗಳೂರು ಉಪನಗರ ರೈಲ್ವೆ ಯೋಜನೆ ವಿಳಂಬಕ್ಕೆ ಸಿಎಸ್ ಶಾಲಿನಿ ರಜನೀಶ್ ಅಸಮಾಧಾನ

ಸಾರಾಂಶ

ಬೆಂಗಳೂರು ಉಪನಗರ ರೈಲ್ವೆ ಯೋಜನೆಯ (ಬಿಎಸ್ ಆರ್‌ಪಿ) 2ನೇಕಾರಿಡಾರ್ ಬೈಯಪ್ಪನಹಳ್ಳಿ-ಚಿಕ್ಕಬಾಣಾ ವರದ ನಡುವಿನ 'ಮಲ್ಲಿಗೆ' ಮಾರ್ಗದ ಕಾಮಗಾರಿಗೆ ಚುರುಕುಗೊಳಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚಿಸಿದರು.

ಬೆಂಗಳೂರು : ಬೆಂಗಳೂರು ಉಪನಗರ ರೈಲ್ವೆ ಯೋಜನೆಯ (ಬಿಎಸ್ ಆರ್‌ಪಿ) 2ನೇಕಾರಿಡಾರ್ ಬೈಯಪ್ಪನಹಳ್ಳಿ-ಚಿಕ್ಕಬಾಣಾ ವರದ ನಡುವಿನ 'ಮಲ್ಲಿಗೆ' ಮಾರ್ಗದ ಕಾಮಗಾರಿಗೆ ಚುರುಕುಗೊಳಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚಿಸಿದರು. ಅವರು ಬಿಎಸ್‌ಆರ್‌ಪಿ ಕಾಮಗಾರಿ ನಡೆಯುತ್ತಿರುವ ಕನಕನಗರ ಲೇವಲ್ ಕ್ರಾಸಿಂಗ್ ಹಾಗೂ ಬಾಣಸವಾಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಾಮಗಾರಿಗಾಗಿ ನಡೆಯುತ್ತಿರುವ ಸ್ಥಳದಲ್ಲಿನ ಜಲ ಮಂಡಳಿಯ ಪೈಪ್‌ಲೈನ್, ಕೆಪಿಟಿಸಿಎಲ್‌ನ ಪರಿವರ್ತಕ ವಿದ್ಯುತ್ ಕಂಬಗಳನ್ನು ಬಹುಬೇಗ ವರ್ಗಾವಣೆ ಮಾಡಿಕೊಂಡು ಕಾಮಗಾರಿ ಚುರುಕುಗೊಳಿಸಬೇಕು.

ಜೊತೆಗೆ ಬಿಬಿಎಂಪಿ, ಲೋಕೋಪಯೋಗಿ ಇಲಾಖೆಗಳ ಜತೆಗೂ ಸಮಾಲೋಚಿಸಿ ಕಾಮಗಾರಿಗೆ ವೇಗ ನೀಡುವಂತೆ ಕೆ-ರೈಡ್ ಅಧಿಕಾರಿಗಳಿಗೆ ತಿಳಿಸಿದರು. ಕಾಮಗಾಗಿ ವಿಳಂಬದ ಕಾರಣ ಮತ್ತು ಸಮಸ್ಯೆ ಪರಿಹಾರ ಸಂಬಂಧಏನಾಗಬೇಕಿದೆ ಎಂದು ಗುತ್ತಿಗೆದಾರರನ್ನು ಅವರು ಪ್ರಶ್ನಿಸಿದರು. ಆದರೆ, ಎಲ್ ಆ್ಯಂಡ್ ಟಿ ಕಂಪನಿಯ ಪರ ಮೇಲ್ವಿಚಾರಕ ಎಂಜಿನಿಯರ್ ಗಳು ಈ ಬಗ್ಗೆ ಸಮರ್ಪಕ ಉತ್ತರ ಕೊಡದೆ ತಡವರಿಸಿದರು. ಇದರಿಂದ ಅಸಮಾಧಾನಗೊಂಡ ಶಾಲಿನಿ ರಜನೀಶ್, ನಾವು ಬಂದಿರುವುದೇ ಸಮಸ್ಯೆ ಆಲಿಸಿ ಪರಿಹಾರ ಏನಾಗಬೇಕು ಎಂದು ಕಂಡು ಕೊಳ್ಳಲು. ಆದರೆ, ಇದಕ್ಕೂ ನೀವು ಸಮರ್ಪಕವಾಗಿ ಉತ್ತರಿಸದಿದ್ದರೆ ಸಮಸ್ಯೆ ಬಗೆಹರಿಯುವುದು ಹೇಗೆ ಎಂದು ಪ್ರಶ್ನಿಸಿದರು.

ರೈಲ್ವೆ ಭೂಮಿ ಅತಿಕ್ರಮಣವೇ ಸವಾಲು: ಮಾಧ್ಯಮಗಳ ಜೊತೆ ಮಾತನಾಡಿದ ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕಿ ಡಾ| ಎನ್.ಮಂಜುಳಾ, 'ಮಲ್ಲಿಗೆ' ಮಾರ್ಗದ ಕಾಮಗಾರಿ ವಿಳಂಬಕ್ಕೆ ರೈಲ್ವೆ ಭೂಮಿ ಅತಿಕ್ರಮಣವೇ ಪ್ರಮುಖ ಸವಾಲಾಗಿದೆ. ನೈಋತ್ಯ ರೈಲ್ವೆಗೆ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇವೆ ಎಂದರು. ರೈಲ್ವೆಯಿಂದ ಕೆ-ರೈಡ್‌ಗೆ ಭೂಮಿಯನ್ನು ಹಸ್ತಾಂತರ ಮಾಡುವಾಗಅತಿಕ್ರಮಣತೆರವುಮಾಡಲಾಗಿಲ್ಲ.ಈಗ ಮಲ್ಲಿಗೆ ಮಾರ್ಗದ ಬೆನ್ನಿಗಾನಹಳ್ಳಿಯಿಂದ ಚಿಕ್ಕಬಾಣಾವರದವರೆಗೆ 25 ಕಿ.ಮೀ. ವ್ಯಾಪ್ತಿಯಲ್ಲಿ 62 ಸ್ಥಳಗಳಲ್ಲಿ ಅತಿಕ್ರಮಣ ಆಗಿರುವುದು ಸರ್ವೆಯಲ್ಲಿ ತಿಳಿದುಬಂದಿದೆ. ಅವನ್ನು ತೆರವು ಮಾಡಲು ನಮಗೆ ಅಧಿಕಾರ ಇಲ್ಲ, ಹೀಗಾಗಿ ರೈಲ್ವೆಗೆ ಅತಿಕ್ರಮಣ ತೆರವು ಮಾಡಿಕೊಡುವಂತೆ ತಿಳಿಸಲಾಗಿದೆ ಎಂದು ತಿಳಿಸಿದರು.

ಮಾರ್ಚ್‌ಗೆ ಸ್ಥಳಾಂತರ ಕಾರ್ಯ ಪೂರ್ಣ: ಇನ್ನು, ಜಲಮಂಡಳಿಯಿಂದ 32 ಕಡೆ ಪೈಪ್‌ಲೈನ್, ಕೆಪಿಟಿಸಿಎಲ್‌ನಿಂದ 6 ಸ್ಥಳಗಳಲ್ಲಿ ವಿದ್ಯುತ್ ಕಂಬ, ಟ್ರಾನ್ಸ್‌ಫಾರ್ಮ್‌‌್ರಗಳನ್ನು ಬೇರೆಡೆ ಸ್ಥಳಾಂತರ ಮಾಡಬೇಕಾಗಿದೆ. ಈ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು. ಬಿಎಸ್‌ಆರ್‌ಪಿಗಾಗಿ ಭೂಸ್ವಾಧೀನ ಮಾಡಿಕೊಡುತ್ತಿರುವ ಕೆಐಎಡಿಬಿ ಚುರುಕಾಗಿ ಕೆಲಸ ಮಾಡುತ್ತಿದೆ. ದೇವಸ್ಥಾನ, ಮನೆ, ಖಾಸಗಿ ಕಟ್ಟಡ, ನಿವೇಶನಗಳಿಗೆ ಸೂಕ್ತ ಪರಿಹಾರವನ್ನು ಒದಗಿಸಲಾಗುತ್ತಿದೆ. 2025ರ ಮಾರ್ಚ್ ಒಳಗಾಗಿ ಮಲ್ಲಿಗೆ ಮಾರ್ಗ ಕಾಮಗಾರಿಗೆ ಸಂಬಂಧಿಸಿದಂತೆ ಭೂಮಿಯನ್ನು ಒದಗಿಸಿಕೊಳ್ಳುವ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕಿ ಡಾ| ಎನ್.ಮಂಜುಳಾ ತಿಳಿಸಿದರು.

ರೈಲ್ವೆ ಬೋಗಿ ಖರೀದಿಗೆ ಅನುದಾನಕ್ಕೆ ಪ್ರಸ್ತಾವನೆ: ಉಪನಗರ ರೈಲ್ವೆ ಯೋಜನೆಗಾಗಿ ಬೇಕಾದ ರೋಲಿಂಗ್ ಸ್ಟಾಕ್ (ಬೋಗಿಗಳ ಖರೀದಿಗಾಗಿ ಪಾಲು ದಾರಿಕೆಯಡಿ ಅನುದಾನ ಒದಗಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರ ಈ ಸಂಬಂಧ ರಾಜ್ಯ ಸರ್ಕಾರದ ಜೊತೆಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಬಳಿಕ ರೈಲ್ವೆ ಮಂಡಳಿಗೆ ಪ್ರಸ್ತಾವನೆ ಕಳಿಸಲಿದ್ದೇವೆ. ಅಲ್ಲಿಂದ ಒಪ್ಪಿಗೆ ಸಿಕ್ಕ ಬಳಿಕ ಹೊಸದಾಗಿ ಟೆಂಡರ್ ಕರೆಯುವ ಪ್ರಕ್ರಿಯೆ ನಡೆಸಲಾಗುವುದು ಎಂದು ಡಾ| ಮಂಜುಳಾ ತಿಳಿಸಿದರು.

Share this article