‘ಕರಿಯ’ ಹೇಳಿಕೆ ಸಮಸ್ಯೆ: ಸಚಿವ ಜಮೀರ್‌ ಬಚಾವ್‌ - ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ ಗೆಲುವು, ಮುಸ್ಲಿಂ ನಾಯಕ ನಿರಾಳ

Nirupama ks | Published : Nov 24, 2024 7:40 AM

ಉಪ ಚುನಾವಣೆ ಫಲಿತಾಂಶದಲ್ಲಿ ಜಮೀರ್‌ ಹೇಳಿಕೆಯಿಂದ ಕಾಂಗ್ರೆಸ್‌ಗೆ ಯಾವುದೇ ನಷ್ಟ ಉಂಟಾಗಿಲ್ಲ ಎಂಬುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಜಮೀರ್‌ ನಿರಾಳರಾದಂತಾಗಿದೆ.

ಬೆಂಗಳೂರು : ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ‘ಕರಿಯ’ ಹೇಳಿಕೆ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಉಪಾಧ್ಯಕ್ಷ ಎ.ಆರ್.ಎಂ.ಹುಸೇನ್‌ ಸೇರಿ ಹಲವರು ಸ್ವಪಕ್ಷೀಯರೇ ಆಗ್ರಹಿಸಿದ್ದರು. 

ಇದೀಗ ಉಪ ಚುನಾವಣೆ ಫಲಿತಾಂಶದಲ್ಲಿ ಜಮೀರ್‌ ಹೇಳಿಕೆಯಿಂದ ಕಾಂಗ್ರೆಸ್‌ಗೆ ಯಾವುದೇ ನಷ್ಟ ಉಂಟಾಗಿಲ್ಲ ಎಂಬುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಜಮೀರ್‌ ನಿರಾಳರಾದಂತಾಗಿದೆ.

ಏಕೆಂದರೆ, ಜಮೀರ್‌ ಅವರ ಹೇಳಿಕೆಯಿಂದ ದುಷ್ಪರಿಣಾಮ ನಿರೀಕ್ಷಿಸಿದ್ದ ಚನ್ನಪಟ್ಟಣ ಕ್ಷೇತ್ರದಲ್ಲೇ ಕಾಂಗ್ರೆಸ್‌ಗೆ ಅತ್ಯಧಿಕ ಮುನ್ನಡೆ ಲಭಿಸಿದೆ. ಮಾಜಿ ಪ್ರಧಾನಿ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವರ ಪುತ್ರ ನಿಖಿಲ್‌ ವಿರುದ್ಧ ಸಿ.ಪಿ.ಯೋಗೇಶ್ವರ್‌ 25,413 ಮತಗಳ ಮುನ್ನಡೆ ಪಡೆದಿದ್ದಾರೆ. ಹೀಗಾಗಿ ಜಮೀರ್‌ ಹೇಳಿಕೆಯಿಂದ ಕಾಂಗ್ರೆಸ್‌ಗೆ ಯಾವುದೇ ಹಾನಿ ಉಂಟಾಗಿಲ್ಲ. ಬದಲಿಗೆ ಅಲ್ಪಸಂಖ್ಯಾತ ಮತಗಳ ಕ್ರೋಢೀಕರಣಕ್ಕೆ ನೆರವಾಗಿದೆ ಎಂಬ ವಿಶ್ಲೇಷಣೆ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಜಮೀರ್‌ ನಿರಾಳ ಎಂಬಂತಾಗಿದೆ.

ಇದಾಗದೇ ಚನ್ನಪಟ್ಟಣದಲ್ಲಿ ಹಿನ್ನಡೆಯೇನಾದರೂ ಆಗಿದ್ದರೆ ಆಗ ಅದರ ಹೊಣೆ ಜಮೀರ್‌ ಮೇಲೆ ಬೀಳುವ ಸಾಧ್ಯತೆ ಇತ್ತು. ಇದರಿಂದ ಜಮೀರ್‌ ಬಚಾವ್‌ ಆಗಿದ್ದಾರೆ.