ಡಿ.31ರಿಂದ ಬಸ್‌ ಮುಷ್ಕರ ? - ಸಿಎಂಗೆ ಮುಷ್ಕರದ ನೋಟಿಸ್‌ ಕೊಟ್ಟ ಕಾರ್ಮಿಕ ಸಂಘಟನೆ

ಸಾರಾಂಶ

ವೇತನ ಮತ್ತು ಭತ್ಯೆಗಳ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.31ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ.

ಬೆಂಗಳೂರು : ವೇತನ ಮತ್ತು ಭತ್ಯೆಗಳ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.31ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ.

ಈ ಕುರಿತು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಷ್ಕರದ ನೋಟಿಸ್ ಅನ್ನು ಸಲ್ಲಿಸಲಾಗಿದೆ.

ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಅನೇಕ ಸಮಾವೇಶಗಳು, ಪ್ರತಿಭಟನೆಗಳು, ಮನವಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಕುರಿತು ಚರ್ಚಿಸಲು ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಟಿಕೆಟ್ ದರ ಪರಿಷ್ಕರಣೆ ಆಗದ ಹೊರತು ವೇತನ ಪರಿಷ್ಕರಣೆ ಕಷ್ಟ ಸಾಧ್ಯ ಎಂದು ಆಡಳಿತ ವರ್ಗ ಹೇಳಿದೆ. ಈ ವಿಳಂಬ ಧೋರಣೆಯಿಂದ ಸಾರಿಗೆ ನೌಕರರು ಬೇಸರಗೊಂಡು ಅನಿವಾರ್ಯವಾಗಿ ಶಾಂತಿಯುತ ಮುಷ್ಕರದ ನಿರ್ಧಾರ ಕೈಗೊಂಡಿದ್ದಾರೆ. ಡಿ.31ರ ನಂತರ ಬೇಡಿಕೆ ಈಡೇರುವವರೆಗೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ನೋಟಿಸ್ ಪತ್ರದಲ್ಲಿ ಸಮಿತಿ ತಿಳಿಸಿದೆ.

ಸಾರಿಗೆ ನೌಕರರ ಬೇಡಿಕೆಗಳು

- ಹಿಂದಿನ ವೇತನ ಹೆಚ್ಚಳದ 38 ತಿಂಗಳ ಬಾಕಿ ಬಿಡುಗಡೆ.

- ಮೂಲ ವೇತನಕ್ಕೆ ಶೇ.25ರಷ್ಟು ವೇತನ ಹೆಚ್ಚಸಿ, ಶೇ.31ರಷ್ಟು ತುಟ್ಟಿಭತ್ಯೆ ವಿಲೀನಗೊಳಿಸಿ ವೇತನ ಶ್ರೇಣಿ ಸಿದ್ಧಪಡಿಸಬೇಕು.

- ನೌಕರರ ಭತ್ಯೆಗಳನ್ನು 5 ಪಟ್ಟು ಹೆಚ್ಚಿಸಬೇಕು.

- ಪ್ರತಿ ತಿಂಗಳು 2,000 ರು. ವೈದ್ಯಕೀಯ ಚಿಕಿತ್ಸಾ ವೆಚ್ಚ ನೀಡಬೇಕು.

- ಬಸ್ ನಿಲ್ದಾಣ, ಘಟಕಗಳಲ್ಲಿ ಸೂಕ್ತ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು.

- ಶಕ್ತಿ ಯೋಜನೆಯಿಂದ ಆಗುತ್ತಿರುವ ಶಿಕ್ಷೆ, ಕಿರುಕುಳ ಸಮಸ್ಯೆ ಪರಿಹರಿಸಬೇಕು.

- ನೌಕರರ ಮುಂಬಡ್ತಿಗೆ ಕ್ರಮ ಕೈಗೊಳ್ಳಬೇಕು.

- ಹೆಚ್ಚುವರಿ ಕೆಲಸದ ಅವಧಿಗೆ ಒಟಿ ನೀಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳು.

Share this article