ಬೆಂಗಳೂರು : ‘ಬೆಂಗಳೂರು ಪೊಲೀಸ್ ಕಮೀಷನರೇಟ್’ ವಿಭಜನೆ ಸಂಬಂಧ ಸ್ವಾತಂತ್ರೋತ್ಸದ ದಿನ ಅಧಿಕೃತವಾಗಿ ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಘೋಷಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಈ ಸಂಬಂಧ ವಿಧಾನಸೌಧದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ರಾಜೇಂದ್ರ ಕುಮಾರ್ ಕಟಾರಿಯ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಹಾಗೂ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರೊಂದಿಗೆ ಮುಖ್ಯಮಂತ್ರಿ ಅವರು ಸುದೀರ್ಘವಾಗಿ ಸಮಾಲೋಚಿಸಿದ್ದಾರೆ. ಈ ಸಭೆಯಲ್ಲಿ ಹೊಸದಾಗಿ ಕಮೀಷನರೇಟ್ ಸೃಜನೆಗೆ ಆರ್ಥಿಕ ವೆಚ್ಚದ ಬಗ್ಗೆ ಪ್ರಸ್ತಾಪವಾಗಿದೆ. ಆಗ ಹಂತ ಹಂತವಾಗಿ ಹಣಕಾಸು ಒದಗಿಸುವುದಾಗಿ ಕೂಡ ಅಧಿಕಾರಿಗಳಿಗೆ ಮುಖ್ಯಮಂತ್ರಿ ಅವರು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆ ಬಳಿಕ ಬೆಂಗಳೂರು ಪೊಲೀಸ್ ಆಡಳಿತ ವ್ಯವಸ್ಥೆ ಬದಲಾವಣೆಗೆ ಡಿ.ಕೆ.ಶಿವಕುಮಾರ್ ಒಲವು ತೋರಿದ್ದರು. ಆದರೆ ಆರಂಭದಲ್ಲಿ ಕಮೀಷನರೇಟ್ ವಿಭಜನೆಗೆ ಸರ್ಕಾರದ ಮಟ್ಟದಲ್ಲಿ ಸ್ಪಂದನೆ ಸಿಗದ ಕಾರಣ ಮುಂದೂಡಿದ್ದ ಅವರು, ಈಗ ಹೊಸದಾಗಿ ಕಮೀಷನರೇಟ್ ರಚಿಸಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
ಆ.15 ರಂದು ತಮ್ಮ ಮೊದಲ ಸ್ವಾತಂತ್ರೋತ್ಸವದ ದಿನಾಚರಣೆ ಭಾಷಣದಲ್ಲಿ ಐದು ಕಮೀಷನರೇಟ್ಗಳ ಸೃಜನೆಗೆ ಬಗ್ಗೆ ಮುಖ್ಯಮಂತ್ರಿಗಳು ಘೋಷಣೆಗೆ ಮುಂದಾಗಿದ್ದಾರೆ. ಅಷ್ಟರೊಳಗೆ ಕಮೀಷನರೇಟ್ ರಚನೆ ಬಗ್ಗೆ ಸಾಧಕ-ಬಾಧಕಗಳ ಬಗ್ಗೆ ವರದಿ ಸಲ್ಲಿಕೆಗೂ ಗೃಹ ಇಲಾಖೆಗೆ ಮುಖ್ಯಮಂತ್ರಿ ಅವರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೂರು ವಿಭಜನೆಗೆ ಸಿಎಂ ಸಮ್ಮತಿ?
ಬೆಂಗಳೂರು ಪೊಲೀಸ್ ಕಮೀಷನರೇಟ್ ಅನ್ನು ಉತ್ತರ, ದಕ್ಷಿಣ ಹಾಗೂ ಕೇಂದ್ರ ಎಂದು ಮೂರು ಭಾಗಗಳಾಗಿ ವಿಭಜನೆಗೆ ಮುಖ್ಯಮಂತ್ರಿ ಶಿವಕುಮಾರ್ ಅವರು ಒಲವು ತೋರಿದ್ದಾರೆ ಎಂದು ಮೂಲಗಳು ಹೇಳಿವೆ. ಜಿಬಿಎ ಮಾದರಿಯಲ್ಲಿ ಬೆಂಗಳೂರು ಐದು ಪೊಲೀಸ್ ಕಮೀಷನರೇಟ್ ಸೃಜನೆಗೆ ಪೊಲೀಸ್ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಈ ಪ್ರಸ್ತಾಪಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಹ ಕೆಂಪು ನಿಶಾನೆ ತೋರಿದ್ದರು. ಈ ತೀವ್ರ ಆಕ್ಷೇಪ ಹಿನ್ನೆಲೆಯಲ್ಲಿ ಜಿಬಿಎ ಮಾದರಿ ಪೊಲೀಸ್ ಕಮೀಷನರೇಟ್ ವಿಭಜನೆ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಅವರು ಎಳ್ಳು ನೀರು ಬಿಟ್ಟಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಉತ್ತರ-ದಕ್ಷಿಣ
ಬೆಂಗಳೂರು ಪೊಲೀಸ್ ಕಮೀಷನರೇಟ್ ಅನ್ನು ಮೂರು ಭಾಗಗಳಾಗಿ ವಿಭಜನೆಗೆ ಬಹುತೇಕ ಹಿರಿಯ ಐಪಿಎಸ್ ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದ್ದಾರೆ. ಕೇಂದ್ರ ವಲಯದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಸಂಪೂರ್ಣವಾಗಿ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ, ಹಾರೋಹಳ್ಳಿ, ಕಗ್ಗಲಿಪುರ ಹಾಗೂ ತಾವರೆಕೆರೆ ಠಾಣೆಗಳನ್ನು ಒಳಗೊಂಡ ಕಮೀಷನರೇಟ್ ರಚನೆಗೆ ಪೊಲೀಸರು ಪ್ರಸ್ತಾಪಿಸಿದ್ದಾರೆ ಎಂದು ತಿಳಿದು ಬಂದಿದೆ. ಹಳೇ ಬೆಂಗಳೂರು ಕಮೀಷನರೇಟ್ ನಲ್ಲಿದ್ದ ಏಳು ಡಿಸಿಪಿ ವಿಭಾಗಗಳು ಉಳಿಸಬೇಕು.ಆನಂತರ ದಿನಗಳಲ್ಲಿ ರಚನೆಯಾದ ನಾಲ್ಕು ಡಿಸಿಪಿ ವಿಭಾಗಗಳ ಜತೆ ಹೊಸದಾಗಿ ಡಿಸಿಪಿ ವಲಯಗಳನ್ನು ರಚಿಸಿ ಎರಡು ಕಮೀಷನರೇಟ್ಗಳನ್ನು ಸೃಜಿಸಬಹುದು. ಆಗ ತುಮಕೂರು ರಸ್ತೆಯಲ್ಲಿ ಬೆಂಗಳೂರು ಉತ್ತರ ಹಾಗೂ ಕನಕಪುರ ರಸ್ತೆಯಲ್ಲಿ ಬೆಂಗಳೂರು ದಕ್ಷಿಣ ಕಮೀಷನರೇಟ್ ಕಚೇರಿಗಳನ್ನು ಸ್ಥಾಪಿಸುವುದು ಸೂಕ್ತವಾಗಿದೆ ಎಂದು ಅಧಿಕಾರಿಗಳು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
