ಗದಗ : ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸೆ.22ರಿಂದ ನಡೆಸುವ ಗಣತಿಯಲ್ಲಿರುವ ಅನಗತ್ಯ ಅಂಶಗಳನ್ನು ತೆಗೆದುಹಾಕುವ ಕುರಿತು ಆಯೋಗವೇ ನಿರ್ಧರಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಹಿಂದೂ ಜಾತಿಗಳ ಜತೆಗೆ ಕ್ರಿಶ್ಚಿಯನ್ ಪದ ಸೇರ್ಪಡೆ ಮಾಡಿರುವ ಕುರಿತು ಗೊಂದಲು ಉಂಟಾಗಿರುವ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಯೋಗವು ಶಾಸನಬದ್ಧ ಸಂಸ್ಥೆಯಾಗಿದ್ದು, ಸಮೀಕ್ಷೆ ನಡೆಸಲು ಮಾರ್ಗಸೂಚಿಗಳನ್ನಷ್ಟೇ ಸರ್ಕಾರ ನೀಡಿದೆ. ಅನಗತ್ಯ ಅಂಶಗಳನ್ನು ತೆಗೆದುಹಾಕಲು ಹಿಂದುಳಿದ ವರ್ಗಗಳ ಆಯೋಗವೇ ನಿರ್ಧರಿಸುತ್ತದೆ. 175000 ಶಿಕ್ಷಕರು ಸಮೀಕ್ಷಾ ಕಾರ್ಯಕ್ಕೆ ನಿಯೋಜಿತರಾಗಿದ್ದಾರೆ. ಒಬ್ಬ ಶಿಕ್ಷಕರು ತಲಾ 150 ಮನೆಗಳಿಂದ ಮಾಹಿತಿ ಸಂಗ್ರಹಿಸಲಿದ್ದು, ಈ ಸಮೀಕ್ಷಾ ಕಾರ್ಯ 15 ದಿನಗಳ ಕಾಲ ನಡೆಯಲಿದೆ. ಸಮೀಕ್ಷೆಯಲ್ಲಿ ಧರ್ಮ, ಜಾತಿ, ಉಪಜಾತಿ, ಶಿಕ್ಷಣ, ಉದ್ಯೋಗ ಸೇರಿದಂತೆ ಹಲವು ಮಾಹಿತಿಗಳನ್ನು ಕಲೆಹಾಕಲಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ನಡೆಸಲುದ್ದೇಶಿಸಿರುವ ಸಮೀಕ್ಷೆ ಕೇವಲ ಜಾತಿ ಸಮೀಕ್ಷೆಯಾಗಿರದೇ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಾಗಿದೆ. ಜನರ ಜಾತಿಯ ವಿವರ ಪಡೆಯುವ ಜೊತೆಗೆ ಸ್ಥಿತಿಗತಿಗಳ ವಿವರ ಪಡೆದು, ಅವಕಾಶವಂಚಿತರಿಗೆ ಸಮಾನ ಅವಕಾಶಗಳನ್ನು ನೀಡಲಾಗುತ್ತದೆ ಎಂದರು.
ಎಸ್ಟಿಗೆ ಕುರುಬರು-ಬಿಜೆಪಿ ಶಿಫಾರಸ್ಸು:
ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವ ಶಿಫಾರಸ್ಸಿನ ಕುರಿತ ಪ್ರತಿಕ್ರಿಯಿಸಿ, ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವ ಶಿಫಾರಸ್ಸನ್ನು ಹಿಂದಿನ ಬಿಜೆಪಿ ಸರ್ಕಾರವೇ ಮಾಡಿತ್ತು. ಆದರೆ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ವಾಪಸ್ಸು ಕಳಿಸಿದ್ದು, ಅದಕ್ಕೆ ವಿವರಣೆಯನ್ನು ಸರ್ಕಾರ ನೀಡಲಿದೆ. ಯಾವುದೇ ಸಮುದಾಯವನ್ನು ಎಸ್ಟಿಗೆ ಸೇರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರವೇ ತೆಗೆದುಕೊಳ್ಳುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ, ರೋಣ ಶಾಸಕ ಜಿ.ಎಸ್. ಪಾಟೀಲ, ಸಲೀಂ ಅಹ್ಮದ ಇದ್ದರು.
ರಾಹುಲ್ ಆರೋಪ ನಿಜ: ಸಿಎಂ
ರಾಹುಲ್ ಗಾಂಧಿಯವರು ಮತಗಳ್ಳತನದ ಬಗ್ಗೆ ಮಾಡಿರುವ ಆರೋಪದ ಕುರಿತ ಪ್ರಶ್ನೆಗೆ ಉತ್ತರಿಸಿ, ರಾಹುಲ್ ಗಾಂಧಿ ಅವರು ಅಳಂದ ಕ್ಷೇತ್ರದಲ್ಲಿ 6 ಸಾವಿರ ಮತದಾರರ ಹೆಸರನ್ನು ಕೈಬಿಟ್ಟಿರುವ ಮತಗಳ್ಳತನದ ವಿಚಾರವನ್ನು ಉಲ್ಲೇಖಿಸಿದ್ದು, ಇದು ಸತ್ಯವಾಗಿದೆ. ಆಳಂದದಲ್ಲಿರುವ ಮತಗಳ್ಳತನ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ನಡೆಯಲಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.