ಮುಷ್ಕರ ನಿರತ ಶಿಕ್ಷಕರು, ಸಿಬ್ಬಂದಿಗೆ ಕ್ರೈಸ್‌ನಿಂದ ಶಿಸ್ತು ಕ್ರಮದ ಎಚ್ಚರಿಕೆ

Sujatha NR | Published : May 31, 2025 7:49 AM

ವಸತಿ ಶಿಕ್ಷಣ ನಿರ್ದೇಶನಾಲಯ ರಚನೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ವಿವಿಧ ಸರ್ಕಾರಿ ವಸತಿ, ಶಾಲಾ ಕಾಲೇಜು ಶಿಕ್ಷಕರು, ಸಿಬ್ಬಂದಿ ಹೋರಾಟ ಮುಂದುವರೆದಿದೆ.

  ಬೆಂಗಳೂರು : ವಸತಿ ಶಿಕ್ಷಣ ನಿರ್ದೇಶನಾಲಯ ರಚನೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ವಿವಿಧ ಸರ್ಕಾರಿ ವಸತಿ, ಶಾಲಾ ಕಾಲೇಜು ಶಿಕ್ಷಕರು, ಸಿಬ್ಬಂದಿ ಹೋರಾಟ ಮುಂದುವರೆದಿದೆ. ಇದರ ನಡುವೆ ಮುಷ್ಕರದಲ್ಲಿ ಭಾಗವಹಿಸುವ, ಪಾಲ್ಗೊಳ್ಳಲು ಪ್ರಚೋದಿಸುವ ಶಿಕ್ಷಕರು, ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್‌) ಎಚ್ಚರಿಕೆ ನೀಡಿದೆ.

ಫ್ರೀಡಂ ಪಾರ್ಕ್‌ನಲ್ಲಿ ಮೇ 26 ರಿಂದ ಮೇ 28ರವರೆಗೆ ನಡೆದ ಪ್ರತಿಭಟನೆಯಲ್ಲಿ ಕೆಲ ವಸತಿ ಶಾಲೆಗಳ ಸಿಬ್ಬಂದಿ ಭಾಗಿಯಾಗಿದ್ದು, ಆ ಬಳಿಕ ಮೇ 29 ಮತ್ತು ಮೇ 30 ರಂದು ಕೆಲ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿರುವ ಘಟನೆಗಳು ಸಾಮಾಜಿಕ ಮಾಧ್ಯಮದಲ್ಲಿ ವರದಿಯಾಗಿವೆ. ಜೊತೆಗೆ ಮೇ 31 ರಂದು ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸುವುದದಾಗಿ ಹೇಳಿರುವುದು ಮತ್ತು ಜೂ.2 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸುವುದಾಗಿ ವಸತಿ ಶಾಲೆಗಳ ಸಿಬ್ಬಂದಿ ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಿ ಕೈಸ್ ಈ ಎಚ್ಚರಿಕೆ ನೀಡಿದೆ.

ಸಿಬ್ಬಂದಿ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗದೆ ಧರಣಿ, ಮುಷ್ಕರದಲ್ಲಿ ಪಾಲ್ಗೊಂಡರೆ ಅದನ್ನು ಅನಧಿಕೃತ ಗೈರು ಎಂದು ಪರಿಗಣಿಸಲಾಗುತ್ತದೆ. ಧರಣಿ, ಪ್ರತಿಭಟನೆಯಲ್ಲಿ ಭಾಗವಹಿಸುವ, ಭಾಗವಹಿಸುವಂತೆ ಪ್ರಚೋದಿಸುವ ನೌಕರರ ಸಂಘಟನೆಗಳ ಪದಾಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಕ್ರೈಸ್‌ ಕಾರ್ಯನಿರ್ವಾಹಕ ನಿರ್ದೇಶಕರು ಹೊರಡಿಸಿರುವ ಈ ತಿಳಿವಳಿಕೆ ಪತ್ರಕ್ಕೆ ಶಿಕ್ಷಣ ಕ್ಷೇತ್ರದಿಂದ ಆಯ್ಕೆಯಾಗಿರುವ ವಿವಿಧ ವಿಧಾನ ಪರಿಷತ್‌ ಸದಸ್ಯರಿಂದ ಆಕ್ಷೇಪ ವ್ಯಕ್ತವಾಗಿದ್ದು, ಇದು ಸಂವಿಧಾನಾತ್ಮಕವಾಗಿ ಇರುವ ಪ್ರತಿಭಟನಾ ಹಕ್ಕು ಹತ್ತಿಕ್ಕುವ ಪ್ರಯತ್ನ ಎಂದು ಆಕ್ರೋಶ ವ್ಯಕ್ತವಾಗಿದೆ.

Read more Articles on