ಬೆಂಗಳೂರು : ಅಕ್ರಮ ಚಟುವಟಿಕೆ ಶಂಕೆ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ದಿಢೀರ್ ದಾಳಿ ನಡೆಸಿ ಹಣ ಸೇರಿದಂತೆ ಕೆಲ ನಿಷೇಧಿತ ವಸ್ತುಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಕಾರಾಗೃಹದ ಮೇಲೆ ದಾಳಿಯಲ್ಲಿ ಬ್ಯಾರಕ್ಗಳಲ್ಲಿ ಬೀಡಿ, ಸಿಗರೇಟ್, ತಂಬಾಕು ಉತ್ಪನ್ನಗಳು, ಗಾಂಜಾ ಸೇದಲು ಉಪಯೋಗಿಸುವ ಕೊಳವೆಗಳು, ಚಾಕು ಹಾಗೂ ಟ್ರಿಮರ್ ಸೇರಿ ಕೆಲ ನಿಷೇಧಿತ ವಸ್ತುಗಳು ಮತ್ತು ಇಬ್ಬರು ಕೈದಿಗಳ ಬಳಿ 16,180 ರು. ಹಣ ಜಪ್ತಿಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಕಾನೂನುಬಾಹಿರ ಚಟುವಟಿಕೆ ಬಗ್ಗೆ ಖಚಿತ ಮಾಹಿತಿ ಪಡೆದು ಕೇಂದ್ರ ಕಾರಾಗೃಹದ ಮೇಲೆ ಸೋಮವಾರ ಬೆಳಗ್ಗೆ 11 ಗಂಟೆಗೆ ಸಿಸಿಬಿ ಡಿಸಿಬಿ-2 ಕಾಸಿಮ್ ರಾಜಾ ಸಾರಥ್ಯದ ತಂಡ ಹಠಾತ್ ಕಾರ್ಯಾಚರಣೆ ನಡೆಸಿದೆ.
ಈ ವೇಳೆ ಕಾರಾಗೃಹದ ಬ್ಯಾರಕ್-5ರಲ್ಲಿ ಕಸ್ತೂರಿ ಮೇತಿ ಸೊಪ್ಪು, 500 ರು ಹಣ, 10 ಬೆಂಕಿ ಪೊಟ್ಟಣ ಹಾಗೂ ಗುಟ್ಕಾ ಪಾಕೆಟ್ಗಳು ಇತರೆ ವಸ್ತುಗಳು ಪತ್ತೆಯಾಗಿವೆ. ಅದೇ ರೀತಿ ವಿಐಪಿ ಸೆಕ್ಯೂರಿಟಿ ಬ್ಯಾರಕ್ ನಂ.2 ರ ಸಜಾಬಂಧಿ ಮುಜೀಬ್ ಬಳಿ 15,680 ರು. ನಗದು, 20 ಪ್ಯಾಕೆಟ್ ಚೈನಿ ತಂಬಾಕು, 32 ಪ್ಯಾಕ್ ಸಿಗರೇಟ್, ಚಾಕು, 40 ಬೀಡಿ ಪೊಟ್ಟಣ, ಬ್ಯಾರಕ್-ಎ ನಲ್ಲಿ ಟ್ರಿಮ್ಮರ್, ಚಾರ್ಜರ್, ಕತ್ತರಿ, ರಾಡ್, ಚಾಕು, ಬ್ಯಾರಕ್-2ರಲ್ಲಿ 6 ಚಾಕುಗಳು, 1 ವಾಟರ್ ಹೀಟರ್, 1 ಮೆಟಲ್ ಸ್ಟ್ರಿಂಗ್, 2 ಕಪ್ಪು ಬಣ್ಣದ ಚಾಕುವಿನ ಹಿಡಿಕೆ, ಗಾಂಜಾ ಸೇದುವ ಕೊಳವೆಗಳು ಸೇರಿ ಇತರೆ ವಸ್ತುಗಳು ಜಪ್ತಿಯಾಗಿವೆ. ಈ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ತರಬೇತಿಗೆಂದು ಅಧಿಕಾರಿಗಳ ಕಚೇರಿಗೆ ಕರೆಸಿ ಅತ್ತ ಜೈಲಿನ ದಾಳಿ ಮೇಲೆ ದಾಳಿ ನಡೆಸಿದರು!
ಜೈಲಿನ ದಾಳಿ ಬಗ್ಗೆ ಮಾಹಿತಿ ಸೋರಿಕೆಯಾಗದಂತೆ ಸಿಸಿಬಿ ಮುಖ್ಯಸ್ಥ ಡಾ. ಚಂದ್ರಗುಪ್ತ ಮುನ್ನೆಚ್ಚರಿಕೆ ವಹಿಸಿದ್ದರು. ಆಯುಕ್ತರ ಕಚೇರಿಗೆ ಅಪರಾಧ ಪ್ರಕರಣಗಳ ತನಿಖೆ ಕುರಿತು ತರಬೇತಿ ಎಂದು ಹೇಳಿ ಅಧಿಕಾರಿಗಳನ್ನು ಬೆಳಗ್ಗೆ 11 ಗಂಟೆಗೆ ಹೆಚ್ಚುವರಿ ಆಯುಕ್ತರು ಕರೆಸಿದ್ದರು. ಆನಂತರ ಅಲ್ಲಿಂದ ಜೈಲಿಗೆ ನೇರವಾಗಿ ಅಧಿಕಾರಿಗಳನ್ನು ಕಳುಹಿಸಿ ಅವರು ದಾಳಿ ನಡೆಸಿದ್ದರು.