ತಲಾಕ್‌ ಕೆಟ್ಟದ್ದಲ್ಲ ಅಗತ್ಯವಿದೆ: ಬುಕರ್‌ ಪ್ರಶಸ್ತಿ ವಿಜೇತ ಸಾಹಿತಿ ಭಾನು ಮುಷ್ತಾಕ್‌

Sujatha NR | Published : Jun 5, 2025 8:04 AM

ತಲಾಕ್‌ ಕೆಟ್ಟದ್ದಲ್ಲ. ತಲಾಕ್‌ ಅಗತ್ಯವಿದೆ. ವಿವಾಹ ಬಂಧನವಲ್ಲ, ಅದರಿಂದ ಮುಕ್ತಿ ಪಡೆಯಬಹುದು ಎಂದು ಬುಕರ್‌ ಪ್ರಶಸ್ತಿ ವಿಜೇತ ಸಾಹಿತಿ ಭಾನು ಮುಷ್ತಾಕ್‌ ಅಭಿಪ್ರಾಯಪಟ್ಟರು.

 ಬೆಂಗಳೂರು : ತಲಾಕ್‌ ಕೆಟ್ಟದ್ದಲ್ಲ. ತಲಾಕ್‌ ಅಗತ್ಯವಿದೆ. ವಿವಾಹ ಬಂಧನವಲ್ಲ, ಅದರಿಂದ ಮುಕ್ತಿ ಪಡೆಯಬಹುದು ಎಂದು ಬುಕರ್‌ ಪ್ರಶಸ್ತಿ ವಿಜೇತ ಸಾಹಿತಿ ಭಾನು ಮುಷ್ತಾಕ್‌ ಅಭಿಪ್ರಾಯಪಟ್ಟರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಪ್ರೆಸ್ ಕ್ಲಬ್‌ನಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಬಂಡಾಯ ಸಾಹಿತ್ಯದ ಕಾವು ಕಡಿಮೆ ಆಗಿದೆ. ಆದರೆ ಬಂಡಾಯದ ಹಣತೆ ಇನ್ನೂ ಪ್ರಜ್ವಲಿಸುತ್ತಿದೆ. ನಾವು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾಗ ಬಂಡಾಯ ಸಾಹಿತ್ಯ ಉತ್ತುಂಗದಲ್ಲಿತ್ತು. ಆದರೆ ಈಗ ಕಾವು ಕಳೆದುಕೊಂಡಿದೆ. ಬಂಡಾಯ ಮನೋಧರ್ಮ ಬರವಣಿಗೆಯಲ್ಲಿ ಮಾತ್ರವಲ್ಲ, ಬದುಕಿನಲ್ಲೂ ಬದಲಾಗಿರುವುದು ವ್ಯಕ್ತವಾಗುತ್ತಿದೆ. ಆದರೆ ರಾಜ್ಯದ ಜನರಲ್ಲಿ ಬಂಡಾಯದ ಹಣತೆ ಪ್ರಜ್ವಲಿಸುತ್ತಿದೆ ಎಂದು ಉತ್ತರಿಸಿದರು.

ಭಾಷಾಂತರಕ್ಕೆ ಮನ್ನಣೆ ಸಿಗಲಿದೆ:

ಬುಕರ್‌ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿ ಮಾತನಾಡಿ, ಭಾಷಾಂತರ ಬಹಳ ಮುಖ್ಯವಾಗಿದ್ದು, ಇದಕ್ಕೂ ಮನ್ನಣೆ ಸಿಗಲಿದೆ. ಕನ್ನಡದ ಗ್ರಾಮ್ಯ ಭಾಷೆಯ ಪದಗಳನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡುವಾಗ ನಮ್ಮತನ ಉಳಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ನಾನು ಹೆಚ್ಚಾಗಿ ಇಂಗ್ಲಿಷ್‌ ಅಭ್ಯಾಸ ಮಾಡುತ್ತಿರುವುದರಿಂದ ಭಾಷಾಂತರ ಸುಲಭವಾಯಿತು ಎಂದು ವಿವರಿಸಿದರು.

ಅಯ್ಯೋ, ರೀ, ದೂರದ ಬೆಟ್ಟ ನುಣ್ಣಗೆ ಎಂಬುದು ಸೇರಿದಂತೆ ಕನ್ನಡದ ಹಲವು ಶಬ್ಧಗಳನ್ನು ವಿದೇಶಿಗರಿಗೂ ಅರ್ಥವಾಗುವಂತೆ ಇಂಗ್ಲಿಷ್‌ಗೆ ಭಾಷಾಂತರಿಸಬೇಕು. ಭಾಷೆಯ ಲಯ ಕಂಡುಕೊಂಡಾಗ ಇದು ಸಾಧ್ಯವಾಗುತ್ತದೆ. ಪಾಶ್ಚಾತ್ಯರಿಗೆ ಹತ್ತಿರವಾಗಲಿ ಎಂಬುದನ್ನೇ ಪ್ರಧಾನವಾಗಿಟ್ಟುಕೊಂಡು ಭಾಷಾಂತರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಪೂರ್ಣ ಪ್ರಮಾಣದಲ್ಲಿ ಭಾಷಾಂತರದಲ್ಲಿ ತೊಡಗಿಕೊಂಡಿಲ್ಲ. ಆದರೆ, ಭಾಷಾಂತರ ನನಗೆ ತೃಪ್ತಿ ತಂದಿದೆ. ಯಾವ ವಿಷಯ ಇಷ್ಟವಾಗುತ್ತದೆಯೋ ಅದರ ಬಗ್ಗೆ ನಾನು ಬರೆಯುತ್ತೇನೆ. ಪ್ರಬಂಧ, ಸಣ್ಣ ಕತೆ, ಕಾದಂಬರಿಗಳನ್ನೂ ರಚಿಸಿದ್ದೇನೆ. ಭಾಷೆ ಮನುಷ್ಯರು, ಸಮಾಜವನ್ನು ಹೇಗೆ ಬದಲಾಯಿಸುತ್ತದೆ ಎಂಬ ಬಗ್ಗೆ ಹಲವು ಪ್ರಬಂಧ ಬರೆದಿದ್ದೇನೆ ಎಂದು ತಿಳಿಸಿದರು.

ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ, ಪ್ರೆಸ್ ಕ್ಲಬ್‍ ಪ್ರಧಾನ ಕಾರ್ಯದರ್ಶಿ ಶಿವಕಮಾರ್ ಬೆಳ್ಳಿತಟ್ಟೆ ಮತ್ತಿತರರು ಉಪಸ್ಥಿತರಿದ್ದರು.

ಹಿಜಾಬ್‌ಗೆ ಕೈ ಹಾಕಬಾರದು: ಅಮೀನ್‌ ಮಟ್ಟು ಅಭಿಪ್ರಾಯ

ಮುಸ್ಲಿಂ ಹೆಣ್ಣು ಮಕ್ಕಳು ಶಿಕ್ಷಣದ ಬಲದಿಂದ ಅವರೇ ಹಿಜಾಬ್‌ ಕಿತ್ತು ಹಾಕುತ್ತಾರೆ. ಆದರೆ ನಾವು ಅದಕ್ಕೆ ಕೈ ಹಾಕಬಾರದು ಎಂದು ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು ಅಭಿಪ್ರಾಯಪಟ್ಟರು. ಮುಸ್ಲಿಂ ಮಕ್ಕಳು ಶಾಲೆಗೆ ಬುರ್ಕಾ ಆಗಲಿ, ಹಿಜಾಬ್‌ ಆಗಲಿ ಹಾಕಿಕೊಂಡು ಹೋಗುವುದಕ್ಕೆ ಖಂಡಿತಾ ವಿರೋಧಿಸುವುದಿಲ್ಲ. ಏಕೆಂದರೆ ಇತ್ತೀಚೆಗೆ ಮುಸ್ಲಿಂ ಹೆಣ್ಣು ಮಕ್ಕಳು ಹೆಚ್ಚು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಿಕ್ಷಣದ ಬಲದಿಂದ ಅವರೇ ಅದನ್ನು ಕಿತ್ತು ಹಾಕುತ್ತಾರೆ ಎಂದು ವ್ಯಾಖ್ಯಾನಿಸಿದರು.

Read more Articles on