ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ 31.35 ಕೋಟಿ ರು. ಮೌಲ್ಯದ 18.13 ಎಕರೆ ಸರ್ಕಾರಿ ಜಮೀನುಗಳನ್ನು ಜಿಲ್ಲಾಡಳಿತ ಶುಕ್ರವಾರ ವಶಕ್ಕೆ ಪಡೆದಿದೆ.
ಬೆಂಗಳೂರು : ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ 31.35 ಕೋಟಿ ರು. ಮೌಲ್ಯದ 18.13 ಎಕರೆ ಸರ್ಕಾರಿ ಜಮೀನುಗಳನ್ನು ಜಿಲ್ಲಾಡಳಿತ ಶುಕ್ರವಾರ ವಶಕ್ಕೆ ಪಡೆದಿದೆ.
ಖರಾಬು ಬಂಡೆ, ಕೆರೆ, ಕಟ್ಟೆ, ಸರ್ಕಾರಿ ಕೆರೆ, ಗೋಮಾಳ ಜಾಗಗಳಿಗೆ ಭೇಟಿ ನೀಡಿದ ಅಧಿಕಾರಿಗಳು ತೆರವು ಕಾರ್ಯಾಚರಣೆ ಕೈಗೊಂಡರು.
ಬೆಂಗಳೂರು ಉತ್ತರ ತಾಲೂಕಿನ ದಾಸನಪುರ-2 ಹೋಬಳಿಯ ರಾವುತ್ತನಹಳ್ಳಿ ಗ್ರಾಮದಲ್ಲಿ 21 ಕೋಟಿ ರು. ಮೌಲ್ಯದ 14 ಎಕರೆ ಗೋಮಾಳವನ್ನು ಅನೇಕರು ತಮ್ಮ ಜಮೀನುಗಳ ಜೊತೆಗೆ ಒತ್ತುವರಿ ಮಾಡಿಕೊಂಡು ಬೇಲಿ ಹಾಕಿಕೊಂಡಿದ್ದರು. ಅವುಗಳನ್ನು ತೆರವುಗೊಳಿಸಿ ಸರ್ಕಾರದ ಜಮೀನು ಎಂಬ ಫಲಕ ಹಾಕಲಾಗಿದೆ. ಕೆಲವು ಕಡೆ ಅಕ್ರಮ ಕಟ್ಟಡಗಳನ್ನು ನಿರ್ಮಿಸಿದ್ದು, ಅವುಗಳನ್ನು ಫೆನ್ಸಿಂಗ್ ಮಾಡಿ ಮುಂದಿನ ದಿನಗಳಲ್ಲಿ ನಿಯಮಾನುಸಾರ ಒಡೆದು ಹಾಕಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.
ಇನ್ನು ಬೆಂಗಳೂರು ಪೂರ್ವ ತಾಲೂಕಿನ ಪಟ್ಟಂದೂರು ಅಗ್ರಹಾರದಲ್ಲಿ 1.50 ಕೋಟಿ ರು. ಮೌಲ್ಯದ 3 ಗುಂಟೆ ಖರಾಬು ಬಂಡೆ, ಹಾಡೋಸಿದ್ದಾಪುರ ಗ್ರಾಮದಲ್ಲಿ 2.50 ಕೋಟಿ ರು. ಮೌಲ್ಯದ 23 ಗುಂಟೆ ಕೆರೆ, ಕಾಡಅಗ್ರಹಾರ ಗ್ರಾಮದಲ್ಲಿ 1.50 ಕೋಟಿ ರು. ಮೌಲ್ಯದ 10 ಗುಂಟೆ ಜಮೀನು ಹಾಗೂ 1.60 ಕೋಟಿ ರು. ಮೌಲ್ಯದ 30 ಗುಂಟೆ ಕಟ್ಟೆಯನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ಮೈಲಸಂದ್ರ ಗ್ರಾಮದಲ್ಲಿ 1 ಕೋಟಿ ರು. ಮೌಲ್ಯದ 30 ಗುಂಟೆ ಕೆರೆ, ಯಲಹಂಕ ತಾಲೂಕಿನ ಅದ್ವೆವಿಶ್ವನಾಥಪುರ ಗ್ರಾಮದಲ್ಲಿ 50 ಲಕ್ಷ ರು. ಮೌಲ್ಯದ 23 ಗುಂಟೆ ಜಮೀನು ವಶಪಡಿಸಿಕೊಳ್ಳಲಾಗಿದೆ.