ಆರ್ಸಿಬಿ ಫ್ರಾಂಚೈಸಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ ಪರ ಯಾವುದೇ ಆದೇಶ ಹೊರಡಿಸಲು ಹೈಕೋರ್ಟ್ ನಿರಾಕರಿಸಿತು.
ಬೆಂಗಳೂರು : ಆರ್ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಬಂಧಿತ ಆರ್ಸಿಬಿ ಫ್ರಾಂಚೈಸಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ ಪರ ಯಾವುದೇ ಆದೇಶ ಹೊರಡಿಸಲು ಹೈಕೋರ್ಟ್ ನಿರಾಕರಿಸಿತು.
ಪ್ರಕರಣ ಸಂಬಂಧ ತಮ್ಮನ್ನು ಬಂಧಿಸಿರುವ ಪೊಲೀಸರ ಕ್ರಮ ಪ್ರಶ್ನಿಸಿ ಆರ್ಸಿಬಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ಪರ ವಕೀಲರು, ಮುಖ್ಯಮಂತ್ರಿ ನಿರ್ದೇಶನದ ಮೇರೆಗೆ ನಿಖಿಲ್, ಡಿಎನ್ಎ ಈವೆಂಟ್ ಮ್ಯಾನೇಜ್ಮೆಂಟ್ನ ಕಿರಣ್ ಮತ್ತು ಸುನೀಲ್ ಮ್ಯಾಥ್ಯೂ ಅವರನ್ನು ಬಂಧಿಸಲಾಗಿದೆ. ಸ್ವಯಂಪ್ರೇರಿತ ಎಫ್ಐಆರ್ ದಾಖಲಿಸಿದ್ದ ಕಬ್ಬನ್ ಪಾರ್ಕ್ ಠಾಣಾಧಿಕಾರಿಯನ್ನು ಸರ್ಕಾರವೇ ಅಮಾನತು ಮಾಡಿದೆ. ಹೀಗಿರುವಾಗ ಕಬ್ಬನ್ ಪಾರ್ಕ್ ಠಾಣೆಯ ಪ್ರಭಾರ ಇನ್ಸ್ಪೆಕ್ಟರ್ ಆಗಿರುವ ಅಶೋಕನಗರ ಠಾಣೆ ಇನ್ಸ್ಪೆಕ್ಟರ್ ಬೆಳಗ್ಗೆ 4.30ಕ್ಕೆ ನಿಖಿಲ್ ಅವರನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ ಎಂದು ವಿವರಿಸಿದರು.
ಅಲ್ಲದೆ, ತನಿಖಾಧಿಕಾರಿ ಮಾತ್ರ ಬಂಧನದ ನಿರ್ಧಾರ ಮಾಡಬೇಕೇ ಹೊರತು ಮುಖ್ಯಮಂತ್ರಿಗಳು ಅಲ್ಲ. ಅಧಿಕಾರ ವ್ಯಾಪ್ತಿಯಿಲ್ಲದಿದ್ದರೂ ಪ್ರಭಾರ ಇನ್ಸ್ಪೆಕ್ಟರ್ ಬಂಧನ ಪ್ರಕ್ರಿಯೆ ನಡೆಸಿದ್ದಾರೆ. ಹಾಗಾಗಿ, ಅರ್ಜಿದಾರರ ಮತ್ತು ಇತರರ ಬಂಧನ ಅಕ್ರಮವಾಗುತ್ತದೆ ಎಂದು ಆಕ್ಷೇಪಿಸಿದರು.
ರಾಜ್ಯ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಕಬ್ಬನ್ ಪಾರ್ಕ್ ಠಾಣಾಧಿಕಾರಿ ಅಮಾನತಿನ ಹಿನ್ನೆಲೆಯಲ್ಲಿ ಉಸ್ತುವಾರಿ ತನಿಖಾಧಿಕಾರಿಯನ್ನಾಗಿ ಅಶೋಕ ನಗರ ಠಾಣೆ ಅಧಿಕಾರಿಯನ್ನು ನೇಮಿಸಲಾಗಿದೆ. ಅವರು ಬಂಧನ ಪ್ರಕ್ರಿಯೆ ನಡೆಸಿದ್ದಾರೆ. ದುಬೈಗೆ ತೆರಳುತ್ತಿದ್ದಾಗ ಅರ್ಜಿದಾರರನ್ನು ಮುಂಜಾನೆ ಬಂಧಿಸಲಾಗಿದೆ. ಅಗತ್ಯವಿಲ್ಲದಿದ್ದರೆ ಯಾರನ್ನೂ ಬಂಧಿಸಲು ಅವಕಾಶವಿಲ್ಲ. ಹಾಗಾಗಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಅರ್ಜಿದಾರರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅಮಾನತು ವಿಚಾರವು ಸರ್ಕಾರದ ನೀತಿ ನಿರ್ಣಯದ ಭಾಗವಾಗಿರುತ್ತದೆ. ಅದಕ್ಕೂ ಎಫ್ಐಆರ್ ದಾಖಲಾಗಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿತು.
ಅಲ್ಲದೆ, ಅರ್ಜಿದಾರರನ್ನು ಬಂಧಿಸಲು ಯಾವುದೇ ದಾಖಲೆಗಳು/ಸಾಕ್ಷ್ಯಗಳು ಇವೆಯೇ? ಅವರನ್ನು ಬಂಧಿಸಲು ಪ್ರಭಾರ ಠಾಣಾಧಿಕಾರಿಗೆ ಅಧಿಕಾರ ಇದೆಯೇ? ಸೇರಿ ಇನ್ನಿತರ ಅಂಶಗಳ ಕುರಿತು ಸೋಮವಾರ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು ಎಂದು ಸರ್ಕಾರಕ್ಕೆ ಸೂಚಿಸಿ, ಸದ್ಯ ಅರ್ಜಿ ಕುರಿತು ಯಾವುದೇ ಆದೇಶ ಮಾಡುವುದಿಲ್ಲ ಎಂದು ಸೂಚಿಸಿ ವಿಚಾರಣೆ ಮುಂದೂಡಿತು.