;Resize=(412,232))
ಬೆಂಗಳೂರು : ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು, ಲೇಬರ್ ಇನ್ಸ್ಪೆಕ್ಟರ್ಗಳು ಶನಿವಾರ ಬೆಂಗಳೂರು ಸೇರಿ ರಾಜ್ಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ ಕೆಲಸದಲ್ಲಿ ತೊಡಗಿದ್ದ 800 ಬಾಲಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಜತೆಗೆ, ಕೆಲಸಕ್ಕೆ ಮಕ್ಕಳನ್ನು ಇಟ್ಟುಕೊಂಡಿದ್ದ ಮಾಲೀಕರ ವಿರುದ್ಧ ಬಾಲ ಕಾರ್ಮಿಕರ ನಿಷೇಧ ಕಾಯ್ದೆ ಮತ್ತು ಬಾಲ ನ್ಯಾಯ ಕಾಯ್ದೆಯಡಿ ಒಟ್ಟು 20 ಪ್ರಕರಣವನ್ನೂ ದಾಖಲಿಸಿದ್ದಾರೆ.
ಬೆಂಗಳೂರು, ಮೈಸೂರು, ಮಂಗಳೂರು, ಕಲಬುರಗಿ ಸೇರಿ 31 ಜಿಲ್ಲೆ ಹಾಗೂ ಮಹಾನಗರಗಳು, ರೈಲ್ವೆ ನಿಲ್ದಾಣಗಳು ಸೇರಿ ಒಟ್ಟು 962 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 16,951 ಸ್ಥಳಗಳಲ್ಲಿ ಶನಿವಾರ ತಪಾಸಣೆ ನಡೆಸಿ ಒಟ್ಟು 800 ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಯಶವಂತಪುರದ ಎಪಿಎಂಸಿಗೆ ಮಾರುಕಟ್ಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಾಲಕಾರ್ಮಿಕರನ್ನು ಗಮನಿಸಿ ಅಸಮಾಧಾನ ವ್ಯಕ್ತಪಡಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಅಂದು ಕಾರ್ಯಾಚರಣೆ ನಡೆಸಿದ ಪೊಲೀಸರು 29 ಮಂದಿ ಬಾಲಕಾರ್ಮಿಕರನ್ನು ರಕ್ಷಣೆ ಮಾಡಿದ್ದರು.
ನಗರ ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ವಿಶೇಷ ಕಾರ್ಯಾಚರಣೆ ಮುಂದುವರಿಸಿರುವ ಪೊಲೀಸರು ಮತ್ತು ಲೇಬರ್ ಇನ್ಸ್ಪೆಕ್ಟರ್ಗಳ ವಿಶೇಷ ತಂಡ ಶನಿವಾರ 11 ಡಿಸಿಪಿ ವಿಭಾಗದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಬಾಲಕಾರ್ಮಿಕ ಪದ್ಧತಿ ತಡೆಗಟ್ಟುವ ಹಾಗೂ ಬಾಲಕಾರ್ಮಿಕರನ್ನು ಪತ್ತೆಹಚ್ಚಿ ರಕ್ಷಿಸುವ ಉದ್ದೇಶದಿಂದ ಗ್ಯಾರೇಜ್ಗಳು, ಮಾರ್ಟ್ಗಳು, ರಿಪೇರಿ ಅಂಗಡಿಗಳು, ಹೋಟೆಲ್ಗಳು, ಮಾರುಕಟ್ಟೆಗಳು, ಬಾರ್ ಮತ್ತು ರೆಸ್ಟೋರೆಂಟ್ಗಳು, ಲಾಡ್ಜ್, ಬೇಕರಿ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆಗಳು, ನಿರ್ಮಾಣ ಹಂತದ ಕಟ್ಟಡಗಳು, ಕಾರು ಗ್ಯಾರೇಜ್, ಅಮೆಜಾನ್, ಪ್ಲಿಫ್ಕಾರ್ಟ್ ಗೋದಾಮು ಸೇರಿ ಒಟ್ಟು 5,897 ಸ್ಥಳಗಳಲ್ಲಿ ತಪಾಸಣೆ ನಡೆಸಲಾಯಿತು. ಕಾರ್ಯಾಚರಣೆ ವೇಳೆ ಕೆಲಸದಲ್ಲಿ ತೊಡಗಿದ್ದ 503 ಬಾಲಕಾರ್ಮಿಕರನ್ನು ಪತ್ತೆಹಚ್ಚಿ ರಕ್ಷಿಸಲಾಗಿದೆ. ಈ ಸಂಬಂಧ ವಿಚಾರಣೆ ಮುಂದುವರೆದಿದ್ದು, ಬಾಲಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿರುವ ಸಂಬಂಧಪಟ್ಟ ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬಾಲಕಾರ್ಮಿಕರನ್ನು ಪತ್ತೆಹಚ್ಚಿ ರಕ್ಷಿಸುವ ಹಾಗೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ನಿಟ್ಟಿನಲ್ಲಿ ಈ ವಿಶೇಷ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಭಾಗ ಪರಿಶೀಲನೆಯ ಸ್ಥಳಗಳ ಸಂಖ್ಯೆ ರಕ್ಷಣೆ ಮಾಡಲಾದ ಬಾಲಕರು ದಾಖಲಾದ ಪ್ರಕರಣಗಳು
ಕೇಂದ್ರ 492 63 0
ದಕ್ಷಿಣ 515 54 0
ಪಶ್ಚಿಮ 742 84 1
ಉತ್ತರ 327 62 0
ನೈಋತ್ಯ 150 17 3
ವಾಯುವ್ಯ 337 14 2
ಪೂರ್ವ 927 71 3
ಈಶಾನ್ಯ 412 55 0
ಆಗ್ನೇಯ 375 13 0
ಎಲೆಕ್ಟ್ರಾನಿಕ್ ಸಿಟಿ 343 3 0
ವೈಟ್ಫೀಲ್ಡ್ 857 22 0
ಸಿಸಿಬಿ 420 45 9
ಒಟ್ಟು 5897 503 18
ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ 5,897 ಸ್ಥಳಗಳಲ್ಲಿ ಪರಿಶೀಲನೆ ಮಾಡಿ 503 ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಈ ಕಾರ್ಯಾಚರಣೆ ಮುಂದುವರಿಯಲಿದೆ. ಬಾಲ ಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಳ್ಳುವ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.
-ಸೀಮಂತ್ ಕುಮಾರ್ ಸಿಂಗ್, ನಗರ ಪೊಲೀಸ್ ಆಯುಕ್ತ
ಇತ್ತೀಚೆಗೆ ಸಿಎಂ ಬೆಂಗಳೂರಿನ ಎಪಿಎಂಸಿಗೆ ಭೇಟಿ ನೀಡಿದ್ದ ವೇಳೆ ಬಾಲಕಾರ್ಮಿಕರು ಪತ್ತೆ
ಅಂದು ಸಿಎಂ ಸೂಚನೆ ಮೇರೆಗೆ ಎಪಿಎಂಸಿ ಸುತ್ತಮುತ್ತಲೂ 10 ಬಾಲಕಾರ್ಮಿಕರ ರಕ್ಷಣೆ
ಅದರ ಬೆನ್ನಲ್ಲೇ ರಾಜ್ಯವ್ಯಾಪಿ ಬಾಲಕಾರ್ಮಿಕರ ಪತ್ತೆಗಾಗಿ ಪೊಲೀಸರ ಭಾರೀ ತಪಾಸಣೆ
ಶನಿವಾರ ಒಂದೇ ದಿನ ರಾಜ್ಯದ 31 ಜಿಲ್ಲೆಗಳ 16951 ಸ್ಥಳಗಳಲ್ಲಿ ಏಕಕಾಲಕ್ಕೆ ಪರಿಶೀಲನೆ
ಈ ವೇಳೆ ಬೆಂಗಳೂರಿನಲ್ಲಿ 503 ಸೇರಿದಂತೆ ರಾಜ್ಯಾದ್ಯಂತ 800 ಬಾಲಕಾರ್ಮಿಕರ ಪತ್ತೆ
ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡವರ ವಿರುದ್ಧ 20 ಕೇಸು ದಾಖಲಿಸಿದ ಪೊಲೀಸರು