ಇ-ಬಸ್‌ ಪೂರೈಕೆ ಸಂಸ್ಥೆಗೆ ಕಠಿಣ ನಿಯಮ ರೂಪಿಸಿ : ರಾಮಲಿಂಗಾರೆಡ್ಡಿ

Published : Oct 28, 2025, 10:12 AM IST
Ramalinga Reddy

ಸಾರಾಂಶ

ಬಿಎಂಟಿಸಿಗೆ ಪಡೆಯಲಾಗಿರುವ ಎಲೆಕ್ಟ್ರಿಕ್‌ ಬಸ್‌ಗಳ ನಿರ್ವಹಣೆ ಕೊರತೆಯಿಂದ ನಿಗಮದ ಕಾರ್ಯಾಚರಣೆಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಜಿಸಿಸಿ ಅಡಿಯಲ್ಲಿ ಬಸ್‌ ಪೂರೈಕೆ ಮತ್ತು ನಿರ್ವಹಣೆಗೆ ಕಠಿಣ ನಿಯಮ ಜಾರಿಗೊಳಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

  ಬೆಂಗಳೂರು :  ಕೇಂದ್ರ ಸರ್ಕಾರದ ಸೂಚನೆಯಂತೆ ಗ್ರಾಸ್‌ ಕಾಸ್ಟ್‌ ಕಾಂಟ್ರ್ಯಾಕ್ಟ್‌ (ಜಿಸಿಸಿ) ಮಾದರಿಯಲ್ಲಿ ಖಾಸಗಿ ಸಂಸ್ಥೆಗಳಿಂದ ಗುತ್ತಿಗೆ ಆಧಾರದಲ್ಲಿ ಬಿಎಂಟಿಸಿಗೆ ಪಡೆಯಲಾಗಿರುವ ಎಲೆಕ್ಟ್ರಿಕ್‌ ಬಸ್‌ಗಳ ನಿರ್ವಹಣೆ ಕೊರತೆಯಿಂದ ನಿಗಮದ ಕಾರ್ಯಾಚರಣೆಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಜಿಸಿಸಿ ಅಡಿಯಲ್ಲಿ ಬಸ್‌ ಪೂರೈಕೆ ಮತ್ತು ನಿರ್ವಹಣೆಗೆ ಕಠಿಣ ನಿಯಮ ಜಾರಿಗೊಳಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಫೇಮ್‌ ಯೋಜನೆ ಅಡಿಯಲ್ಲಿ ನಗರ ಸಾರಿಗೆಗಳಿಗಾಗಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಪಡೆಯಲಾಗುತ್ತಿದೆ. ಅವುಗಳನ್ನು ಜಿಸಿಸಿ ಮಾದರಿಯಲ್ಲಿ ಪಡೆಯಲಾಗುತ್ತಿದ್ದು, ಬಸ್‌ಗಳ ನಿರ್ವಹಣೆ, ಚಾಲಕರ ನೇಮಕ ಎಲ್ಲವೂ ಬಸ್‌ ಪೂರೈಸುವ ಖಾಸಗಿ ಸಂಸ್ಥೆಯ ಜವಾಬ್ದಾರಿಯಾಗಿದೆ. ಬಿಎಂಟಿಸಿಯಲ್ಲಿ ಸದ್ಯ 1,644 ಎಲೆಕ್ಟ್ರಿಕ್‌ ಬಸ್‌ಗಳು ಸೇವೆ ನೀಡುತ್ತಿವೆ. ಆದರೆ, ಆ ಬಸ್‌ಗಳು ಪದೇಪದೆ ಕೆಟ್ಟು ನಿಲ್ಲುತ್ತಿವೆ ಹಾಗೂ ಅದರ ಚಾಲಕರು ಬಸ್‌ ಪೂರೈಸಿದ ಸಂಸ್ಥೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾರಣದಿಂದಾಗಿ ಬಿಎಂಟಿಸಿ ಬಸ್‌ ಸೇವೆ ನೀಡುವಲ್ಲಿಯೂ ಸಮಸ್ಯೆಯಾಗುತ್ತಿದೆ. ಹೀಗಾಗಿ ಎಲೆಕ್ಟ್ರಿಕ್‌ ಬಸ್‌ ನಿರ್ವಹಣೆ ಕುರಿತಂತೆ ಖಾಸಗಿ ಸಂಸ್ಥೆಗಳಿಗೆ ಕಠಿಣ ಸೂಚನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

ಬಿಎಂಟಿಸಿಗೆ ಎನ್‌ಟಿಪಿಸಿ ಸಂಸ್ಥೆಯಿಂದ 90, ಸ್ವಿಚ್‌ ಮೊಬಿಲಿಟಿ 300, ಟಿಎಂಎಲ್‌ ಸ್ಮಾರ್ಟ್‌ ಸಿಟಿ ಮೊಬಿಲಿಟಿ ಸಲ್ಯೂಷನ್ಸ್‌ನಿಂದ 1,031 ಹಾಗೂ ಒಎಚ್‌ಎಂ ಗ್ಲೋಬಲ್‌ ಮೊಬಿಲಿಟಿ ಪ್ರೈ.ಲಿ.ನಿಂದ 251 ಬಸ್‌ಗಳು ಪೂರೈಕೆಯಾಗಿವೆ. ಈ ನಾಲ್ಕೂ ಸಂಸ್ಥೆಗಳಿಂದ ಪೂರೈಕೆಯಾದ ಬಸ್‌ಗಳಿಂದ ಈವರೆಗೆ 2049 ಸಲ ಬ್ರೇಕ್‌ಡೌನ್‌ಗಳಾಗಿವೆ ಮತ್ತು ಬ್ಯಾಟರಿ ಕಾರಣದಿಂದಾಗಿ 14,082 ಬಾರಿ ಅವಘಡ ಸಂಭವಿಸಿವೆ. ಅದರ ಜತೆಗೆ ವಿವಿಧ ಕಾರಣಕ್ಕಾಗಿ 25.51 ಕೋಟಿ ರು. ದಂಡ ವಿಧಿಸಲಾಗಿದೆ. ಹೀಗೆ ಬಸ್‌ಗಳು ಪದೇಪದೆ ಬ್ರೇಕ್‌ಡೌನ್‌ ಆಗುವ ಕಾರಣಕ್ಕಾಗಿ ಬಸ್‌ಗಳ ಸೇವೆ ನಿಲ್ಲಿಸಬೇಕಾಗುತ್ತದೆ. ಇದರಿಂದಾಗಿ ಬಿಎಂಟಿಸಿ ಕಾರ್ಯಾಚರಣೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.

92.90 ಲಕ್ಷ ರು. ಆದಾಯ ಖೋತಾ:

ಬಸ್‌ ಪೂರೈಸಿರುವ ಸಂಸ್ಥೆಗಳು ಹಾಗೂ ಅವರು ನೇಮಿಸಿರುವ ಖಾಸಗಿ ಚಾಲಕರ ನಡುವಿನ ಕಿತ್ತಾಟದಿಂದಾಗಿ ಈವರೆಗೆ 21 ಬಾರಿ ಎಲೆಕ್ಟ್ರಿಕ್‌ ಬಸ್‌ಗಳ ಸೇವೆ ಸ್ಥಗಿತಗೊಳ್ಳುವಂತಾಗಿದೆ. ಇದರಿಂದಾಗಿ ಒಟ್ಟು 1.58 ಲಕ್ಷ ಕಿಮೀ ಬಸ್‌ ಕಾರ್ಯಾಚರಣೆ ರದ್ದಾಗಿದ್ದು, 92.90 ಲಕ್ಷ ರು. ಸಾರಿಗೆ ಆದಾಯ ಖೋತಾ ಆಗಿದೆ. ಚಾಲಕರು ವೇತನ ಮತ್ತು ಬೋನಸ್‌ ಕಾರಣಕ್ಕಾಗಿ ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಸೇವೆ ರದ್ದಾಗುವಂತಾಗಿದೆ. ಹೀಗೆ ಪದೇಪದೆ ನಡೆಯುವ ಪ್ರತಿಭಟನೆಯು ಬಿಎಂಟಿಸಿ ಹೆಸರನ್ನು ಹಾಳು ಮಾಡುತ್ತಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಎಚ್‌ಡಿಕೆಗೆ ಪತ್ರ:

ಜಿಸಿಸಿ ಮಾದರಿಯಲ್ಲಿ ಪೂರೈಕೆಯಾಗಿರುವ ಎಲೆಕ್ಟ್ರಿಕ್‌ ಬಸ್‌ಗಳಿಂದಾಗಿರುವ ಸಮಸ್ಯೆಗಳ ಕುರಿತಂತೆ ಕೇಂದ್ರ ಭಾರೀ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆಯಲಾಗಿದೆ. ಪತ್ರದಲ್ಲಿ ಎಲೆಕ್ಟ್ರಿಕ್‌ ಬಸ್‌ಗಳಿಂದಾಗುತ್ತಿರುವ ಸಮಸ್ಯೆಗಳನ್ನು ಅಂಕಿಅಂಶಗಳ ಸಹಿತ ತಿಳಿಸಲಾಗಿದೆ. ಬಿಎಂಟಿಸಿ ಹೆಸರು ಹಾಳಾಗುತ್ತಿರುವ ಬಗ್ಗೆಯೂ ಉಲ್ಲೇಖಿಸಲಾಗಿದೆ. ಅದನ್ನು ಸರಿಪಡಿಸಲು ಜಿಸಿಸಿ ಮಾದರಿಯಲ್ಲಿ ಬಸ್‌ ಪೂರೈಸುವ ಸಂಸ್ಥೆಗಳ ಕಾರ್ಯಕ್ಷಮತೆ ಪರಿಶೀಲಿಸಿ ಆನಂತರ ಬಸ್‌ ಪೂರೈಕೆ ಆದೇಶ ನೀಡಬೇಕು. ವಿಶೇಷವಾಗಿ ಬಸ್‌ಗಳು ಬ್ರೇಕ್‌ಡೌನ್‌ ಆಗುವ ಪ್ರಮಾಣವನ್ನು ಪರಾಮರ್ಶಿಸಬೇಕು.

ಜತೆಗೆ ಸಂಸ್ಥೆಗಳು ನೇಮಿಸುವ ಚಾಲಕರಿಗೆ ಸಮಗ್ರ ಮತ್ತು ಪ್ರಾಮಾಣಿತ ತರಬೇತಿ ಕಾರ್ಯಕ್ರಮ ಕೈಗೊಳ್ಳುವುದು ಕಡ್ಡಾಯಗೊಳಿಸಬೇಕು. ಸುರಕ್ಷತೆ ಮತ್ತು ಸೇವಾ ಗುಣಮಟ್ಟದ ಮಾನದಂಡವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯೊಂದಿಗೆ ಜಂಟಿಯಾಗಿ ಯೋಜನೆ ರೂಪಿಸಬೇಕು ಎಂದು ಪತ್ರದ ಮೂಲಕ ತಿಳಿಸಲಾಗಿದೆ. ಶೀಘ್ರದಲ್ಲಿ ಕುಮಾರಸ್ವಾಮಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿಯೂ ಮನವಿ ಮಾಡಲಾಗುವುದು ಎಂದು ರಾಮಲಿಂಗಾರೆಡ್ಡಿ ವಿವರಿಸಿದರು.

ಎಲೆಕ್ಟ್ರಿಕ್‌ ಬಸ್‌ಗಳಿಂದಾಗುತ್ತಿರುವ ಸಮಸ್ಯೆಯ ವಿವರ:

ಸಂಸ್ಥೆ ಬಸ್‌ಗಳ ಸಂಸ್ಥೆ ಕಾರ್ಯಾಚರಣೆ ಶೇಕಡಾವಾರು ರದ್ಧತಿ ಅವಘಡ ಸಂಖ್ಯೆ

ಎನ್‌ಟಿಪಿಸಿ 90 ಶೇ. 6.22 992

ಸ್ವಿಚ್‌ ಮೊಬಿಲಿಟಿ 300 ಶೇ. 5.68 11,419

ಟಿಎಂಎಲ್‌ 1,031 ಶೇ. 3.86 3,112

ಒಎಚ್‌ಎಂ 251 ಶೇ. 10.81 608

ಬಿಎಂಟಿಸಿ ಡೀಸೆಲ್‌ ಬಸ್‌ಗಳ ಕಾರ್ಯಕ್ಷಮತೆ: (2023-24ರಿಂದ 2025-26)

ಒಟ್ಟು ಬಸ್‌ ಶೇಕಡಾವಾರು ರದ್ಧತಿ ಅವಘಡ ಸಂಖ್ಯೆ

5,423 ಶೇ. 2 122

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಗ್ಯಾರಂಟಿಯಿಂದಾಗಿ ತಲ ಆದಾಯದಲ್ಲಿ ರಾಜ್ಯ ನಂ.1: ಸಿದ್ದರಾಮಯ್ಯ
ಅರ್ಹರು ಪಂಚ ಗ್ಯಾರಂಟಿ ಯೋಜನೆಗಳನ್ನು ಸದ್ಬಳಸಿಕೊಳ್ಳಿ