ಮತ್ತೆ ದರ ಏರಿಕೆ ಎದುರಿಸಲು ಸಿದ್ಧರಾಗಿ! ಪ್ರತಿ ಲೀಟರ್‌ ಹಾಲು ₹5 ಹೆಚ್ಚಳ? ಕೆಎಂಎಫ್‌ ಸಿದ್ಧತೆ

Published : Feb 18, 2025, 05:41 AM IST
KMF Milk Price Hike

ಸಾರಾಂಶ

ವಿದ್ಯುತ್‌, ಮೆಟ್ರೋ ರೈಲು ಮತ್ತು ಬಸ್‌ ದರ ಹೆಚ್ಚಳದ ಬೆನ್ನಲ್ಲೇ ರಾಜ್ಯ ಬಜೆಟ್‌ ನಂತರ ಮತ್ತೆ ಪ್ರತಿ ಲೀಟರ್‌ ಹಾಲಿನ ದರವನ್ನು 5 ರು. ಹೆಚ್ಚಿಸಲು ಕೆಎಂಎಫ್‌ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

 ಬೆಂಗಳೂರು : ವಿದ್ಯುತ್‌, ಮೆಟ್ರೋ ರೈಲು ಮತ್ತು ಬಸ್‌ ದರ ಹೆಚ್ಚಳದ ಬೆನ್ನಲ್ಲೇ ರಾಜ್ಯ ಬಜೆಟ್‌ ನಂತರ ಮತ್ತೆ ಪ್ರತಿ ಲೀಟರ್‌ ಹಾಲಿನ ದರವನ್ನು 5 ರು. ಹೆಚ್ಚಿಸಲು ಕೆಎಂಎಫ್‌ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ಹಾಲಿನ ದರವನ್ನು ಆಗಸ್ಟ್ 2023 ರಲ್ಲಿ 3 ರು.ಹೆಚ್ಚಿಸಿ, ಲೀಟರ್‌ಗೆ 39 ರು.ಇದ್ದ ಬೆಲೆಯನ್ನು42 ರು.ಗೆ ಹೆಚ್ಚಿಸಲಾಯಿತು. ಜೂನ್ 2024ರಲ್ಲಿ ಪ್ರತಿ ಪ್ಯಾಕೇಟ್‌ಗೆ 50 ಮಿಲಿ ಲೀ. ಹಾಲು ಹೆಚ್ಚುವರಿಯಾಗಿ ಕೊಟ್ಟು ಮತ್ತೆ 2 ರು.ಏರಿಕೆ ಮಾಡಲಾಗಿತ್ತು. ಇದೀಗ ರಾಜ್ಯದ 16 ಹಾಲು ಒಕ್ಕೂಟಗಳಿಂದ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 5 ರು.ನಂತೆ ಏರಿಕೆ ಮಾಡಲು ಒತ್ತಡ ಹೆಚ್ಚುತ್ತಿದೆ. ಹೀಗಾಗಿ ಹಾಲು ದರ ಏರಿಕೆಗೆ ಅನುಮತಿ ನೀಡುವಂತೆ ಕೆಎಂಎಫ್‌ ರಾಜ್ಯಸರ್ಕಾರಕ್ಕೆ ಕಳೆದ ವರ್ಷವೇ ಪ್ರಸ್ತಾವನೆ ಸಲ್ಲಿಸಿದೆ.

ಈ ಪ್ರಸ್ತಾವನೆ ಕುರಿತು ಕಳೆದ ತಿಂಗಳು ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ಸಭೆ ನಡೆಸಿದ್ದಾರೆ. ರೈತರು ಜಾನುವಾರುಗಳಿಗೆ ನೀಡುತ್ತಿರುವ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಹಾಲಿನ ದರ ಲೀಟರ್‌ಗೆ 5 ರು.ಏರಿಕೆ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದು, ಸರ್ಕಾರ ಎಷ್ಟು ದರ ಏರಿಕೆಗೆ ಒಪ್ಪಿಗೆ ನೀಡುತ್ತದೆ ಎಂಬುದರ ಮೇಲೆ ತೀರ್ಮಾನ ಕೈಗೊಳ್ಳಲು ನಿರೀಕ್ಷಿಸಲಾಗುತ್ತಿದೆ ಎಂದು ಕೆಎಂಎಫ್‌ ಮೂಲಗಳು ತಿಳಿಸಿವೆ.

ಕೆಎಂಎಫ್ ಅಡಿ ಒಟ್ಟು 16 ಹಾಲು ಒಕ್ಕೂಟಗಳಿದ್ದು, ರಾಜ್ಯದಲ್ಲಿ ಸುಮಾರು 40 ಲಕ್ಷ ಡೈರಿ ರೈತರಿದ್ದಾರೆ. ದಿನಕ್ಕೆ ಸರಾಸರಿ 85ರಿಂದ 90 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ. ಮೇವು, ಲೇಬರ್‌, ವಿದ್ಯುತ್‌ ಸೇರಿ ಇತರೆ ನಿರ್ವಹಣೆ ಖರ್ಚು ದಿನೇ ದಿನೆ ಹೆಚ್ಚುತ್ತಿದ್ದು, ಹಾಲಿನ ದರ ಏರಿಕೆ ಅನಿವಾರ್ಯ. ಇಲ್ಲದಿದ್ದರೆ ಒಕ್ಕೂಟಗಳು ರೈತ ಉತ್ಪಾದಕರಿಗೆ ಉತ್ಪಾದನೆಗೆ ತಕ್ಕಂತೆ ಹಣ ನೀಡಲು ಸಾಧ್ಯವಿಲ್ಲ. ಜೊತೆಗೆ ಒಕ್ಕೂಟಗಳು ಕೂಡ ಕೋಟ್ಯಂತರ ರು.ಗಳಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಎಂಬುದು ಒಕ್ಕೂಟಗಳ ಅಭಿಪ್ರಾಯ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಮೇಕೇದಾಟು ಯೋಜನೆ ಅನುಷ್ಠಾನಕ್ಕೆ 30 ಮಂದಿ ತಂಡ ರಚಿಸಿದ ಸರ್ಕಾರ
ಗ್ರಾಪಂಗಳಲ್ಲಿ 10 ವರ್ಷಗಳಲ್ಲಿ ₹50000 ಕೋಟಿ ಅಕ್ರಮ: ಶಾಸಕ