ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಸರ್ಕಾರ ಕಾಂತರಾಜು ಆಯೋಗ ವರದಿ ಒಪ್ಪಬೇಕಿತ್ತು : ಆಂಜನೇಯ

Sujatha NR | Published : Jun 15, 2025 12:05 PM

ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಒಪ್ಪಿ ಬಹಿರಂಗಪಡಿಸಬೇಕಿತ್ತು - ಎಚ್.ಆಂಜನೇಯ 

 ಬೆಂಗಳೂರು : ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಒಪ್ಪಿ ಬಹಿರಂಗಪಡಿಸಬೇಕಿತ್ತು. ಯಾವ ಸಮುದಾಯ ವರದಿಯಿಂದ ಹೊರಗುಳಿದಿದೆ ಎಂಬುದನ್ನು ನೋಡಬೇಕಿತ್ತು ಎಂದು ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂತರಾಜು ಆಯೋಗ ಚೆನ್ನಾಗಿ ಸಮೀಕ್ಷೆ ನಡೆಸಿತ್ತು. ಪ್ರತಿಯೊಂದು ಗ್ರಾಮ, ಹೋಬಳಿ, ಹಳ್ಳಿಗೂ ಹೋಗಿ ಗಣತಿ ಮಾಡಿತ್ತು. ಆಗ 1.50 ಲಕ್ಷ ಶಿಕ್ಷಕರು ಸೇರಿ ಒಟ್ಟು 1.60 ಲಕ್ಷ ಸಿಬ್ಬಂದಿಯನ್ನು ಬಳಸಿಕೊಂಡು ಸಮೀಕ್ಷೆ ನಡೆಸಲಾಗಿತ್ತು. ಇದಕ್ಕಾಗಿ 165 ಕೋಟಿ ರು. ಖರ್ಚು ಮಾಡಲಾಗಿತ್ತು. ಈಗ ಸರ್ಕಾರದ ಮುಖ್ಯಕಾರ್ಯದರ್ಶಿ ಆಗಿರುವ ಶಾಲಿನಿ ರಜನೀಶ್ ಅವರೇ ಆಗ ಹಿಂದುಳಿದ ವರ್ಗಗಳ ಇಲಾಖೆ ಕಾರ್ಯದರ್ಶಿ ಆಗಿದ್ದರು. ಆ ವರದಿಯನ್ನು ಬಹಿರಂಗಪಡಿಸಬೇಕಾಗಿತ್ತು. ಬಳಿಕ ಯಾರನ್ನು ಬಿಟ್ಟಿದ್ದಾರೆ ಎಂಬುದನ್ನು ತಿಳಿಸಲು ಹೇಳಬಹುದಿತ್ತು ಎಂದು ಹೇಳಿದ್ದಾರೆ.

ಇನ್ನು ಈಗ ಕೇಂದ್ರ ಸರ್ಕಾರ ಜನಗಣತಿ ಜತೆಗೆ ಜಾತಿಗಣತಿಯೂ ಮಾಡುವುದಾಗಿ ಹೇಳಿದೆ. ಈಗ ರಾಜ್ಯ ಸರ್ಕಾರ ಹೊಸದಾಗಿ ಸಮೀಕ್ಷೆ ಮಾಡುವುದಾಗಿ ಹೇಳಿದೆ. ಈಗ ಶಾಲೆಗಳು ಶುರುವಾಗಿರುವುದರಿಂದ ಸಮೀಕ್ಷೆಗೆ ಶಿಕ್ಷಕರು ಲಭ್ಯವಿರುವುದಿಲ್ಲ. ಏಪ್ರಿಲ್‌-ಮೇ ತಿಂಗಳಲ್ಲೇ ಸಮೀಕ್ಷೆ ಮಾಡಬೇಕು. ಈಗ ಸಮೀಕ್ಷೆ ನಡೆಸುವುದು ಕಷ್ಟ ಎಂದರು.

ಮುನಿಯಪ್ಪ ಸಮರ್ಥನೆ:

ಹೊಸ ಸಮೀಕ್ಷೆಗೆ ಸಚಿವ ಕೆ.ಎಚ್. ಮುನಿಯಪ್ಪ ಸಮರ್ಥನೆ ನೀಡಿದ್ದು, ಮುಖ್ಯಮಂತ್ರಿ ಹಾಗೂ ಸಂಪುಟದ ನಿರ್ಧಾರವನ್ನು ನಾನು ಒಪ್ಪುತ್ತೇನೆ. ಸುದೀರ್ಘವಾಗಿ ಚರ್ಚೆ ಮಾಡಿ ಹೊಸದಾಗಿ ಮಾಡಲು ತೀರ್ಮಾನ ಮಾಡಿದ್ದಾರೆ. ಅದನ್ನು ಮಾಡುತ್ತೇವೆ ಎಂದು ಹೇಳಿದರು.

Read more Articles on