ತುಮಕೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಕುಣಿಗಲ್ ತಾಲೂಕಿನ ನಾಗಸಂದ್ರದ ಮನೋಜ್ ಸಾವನ್ನಪ್ಪಿದ್ದ. ಇದೀಗ ಮೊಮ್ಮಗನ ಸಾವಿನ ಶೋಕದಲ್ಲೇ ಆತನ ಅಜ್ಜಿ ಕೂಡ ಕೊನೆಯುಸಿರೆಳೆದಿದ್ದಾರೆ.
ಕುಣಿಗಲ್ ತಾಲೂಕು ನಾಗಸಂದ್ರದ ದೇವೀರಮ್ಮ (70) ಮೃತರು. ಬೆಂಗಳೂರಿನಲ್ಲಿ ಬಿಬಿಎಂ ಓದುತ್ತಿದ್ದ ಮನೋಜ್, ಯಲಹಂಕದಲ್ಲಿ ತಂದೆ, ತಾಯಿ ಹಾಗೂ ತಂಗಿ ಜೊತೆ ವಾಸವಿದ್ದ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಸಾವನ್ನಪ್ಪಿದ್ದ. ಮೊಮ್ಮಗನ ಸಾವಿನಿಂದ ತೀವ್ರ ಬಸವಳಿದಿದ್ದ ದೇವೀರಮ್ಮ, ಅಂದಿನಿಂದ ಅನ್ನ-ಆಹಾರ ಬಿಟ್ಟಿದ್ದರು. ಇದೀಗ ಮೊಮ್ಮಗನ ಸಾವಿನ ನೋವಲ್ಲೇ ಈಕೆ ಕೂಡ ಮೃತಪಟ್ಟಿದ್ದಾರೆ. ಇದರಿಂದಾಗಿ ಮೃತ ಮನೋಜ್ ಮನೆಯಲ್ಲಿ ಮತ್ತೊಮ್ಮೆ ಶೋಕ ಮಡುಗಟ್ಟಿದೆ.